ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಮೃತಪಟ್ಟವರ ಪೈಕಿ ಇಬ್ಬರ ಮೃತದೇಹ ಬೆಳಗಾವಿ ವಿಮಾನ ನಿಲ್ದಾಣಕ್ಕೆ ತಲುಪಿದ್ದು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಉಳಿದ ಇಬ್ಬರ ಮೃತದೇಹ ಗೋವಾ ವಿಮಾನ ನಿಲ್ದಾಣಕ್ಕೆ ತಲುಪಿದ್ದು ರಸ್ತೆ ಮಾರ್ಗವಾಗಿ ರಾತ್ರಿ 12.00 ಗಂಟೆಯೊಳಗಾಗಿ ಬೆಳಗಾವಿ ತಲುಪಲಿದೆ.
ಕುಂಭಮೇಳ ದುರಂತದಲ್ಲಿ ಬೆಳಗಾವಿ ತಾಲೂಕು ಯಲ್ಲೂರು ರಸ್ತೆ ವಡಗಾಂವ್ ಭಾಗದ ಮೇಘಾ ದೀಪಕ್ ಹತ್ತರವರ್ (24), ಜ್ಯೋತಿ ದೀಪಕ್ ಹತ್ತರವರ್ (44) ಹಾಗೂ ಬೆಳಗಾವಿ ತಾಲೂಕಿನ ಶೆಟ್ಟಿಗಲ್ಲಿ ಭಾಗದ ಅರುಣಾ ಖೋರ್ಪಡೆ (61), ಮಹಾದೇವಿ ಹಣಮಂತ ಬಾವಣೂರ (48) ಮೃತಪಟ್ಟಿದ್ದಾರೆ.
ರಾಜ್ಯದ ಅರುಣಾ ಖೋರ್ಪಡ್ ಹಾಗೂ ಮಹಾದೇವಿ ಹಣಮಂತ ಬಾವಣೂರ ಅವರ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.
“ಮೃತರ ಕುಟುಂಬದವರಿಗೆ ಸರ್ಕಾರದ ವತಿಯಿಂತ ನಾನು ಸಂತಾಪ ವ್ಯಕ್ತಪಡಿಸುತ್ತೇನೆ. ಅಲ್ಲದೆ, ಮೃತರ ದೇಹವನ್ನು ದೆಹಲಿಯಿಂದ ಬೆಳಗಾವಿಗೆ ರವಾನಿಸಲು ಉಂಟಾಗುವ ಎಲ್ಲಾ ಖರ್ಚನ್ನು ಈಗಾಗಲೇ ಸರ್ಕಾರವೇ ಭರಿಸಿದೆ. ಸೂಕ್ತ ಹರಿಹಾರವನ್ನೂ ನೀಡಲಿದೆ. ಆದರೆ, ಪ್ರಾಣನಷ್ಟಕ್ಕೆ ಯಾವ ಪರಿಹಾರವೂ ಸಮಾನವಲ್ಲ. ಕುಟುಂಬಸ್ಥರ ಜೊತೆ ಸರ್ಕಾರ ಸಹಾನುಭೂತಿ ಇದೆ” ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
“ಕರ್ನಾಟಕದ ಎಷ್ಟು ಮಂತಿ ಕುಂಭಮೇಳಕ್ಕೆ ತೆರಳಿದ್ದಾರೆ? ಈ ಪೈಕಿ ದುರಂತದಲ್ಲಿ ಸಿಲುಕಿದವರೆಷ್ಟು? ಗಾಯಾಳುಗಳೆಷ್ಟು? ಮೃತರ ಸಂಖ್ಯೆ ಎಷ್ಟು? ಎಂಬ ಕುರಿತು ಉತ್ತರಪ್ರದೇಶ ಸರ್ಕಾರದಿಂದ ನಮಗೆ ಯಾವುದೇ ಮಾಹಿತಿ ಈವರೆಗೆ ಲಭ್ಯವಾಗಿಲ್ಲ. ಹೀಗಾಗಿ ಕರ್ನಾಟಕದ ಐಎಎಸ್ ಅಧಿಕಾರಿ ಹರ್ಷಲ್ ಬೋಯಲ್ ಅವರೇ ಸ್ವತಃ ಕುಂಭಮೇಳದ ಸ್ಥಳಕ್ಕೆ ತೆರಳಿದ್ದು, ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿ ನಮ್ಮ ರಾಜ್ಯದ ಜನ ಅಲ್ಲಿ ಗಾಯಾಳುಗಳಾಗಿ ಇದ್ದಾರಾ? ಎಂದು ಪರಿಶೀಲಿಸುತ್ತಿದ್ದಾರೆ” ಎಂದು ಸಚಿವರು ತಿಳಿಸಿದ್ದಾರೆ.