ಚನ್ನಪಟ್ಟಣ ಕ್ಷೇತ್ರದಿಂದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಜನರ ಕಷ್ಟಕ್ಕೆ ಸ್ಪಂದಿಸಿಲ್ಲ, ಈ ಭಾಗದ ಜನರಿಗೆ ಒಂದೇ ಒಂದು ಉತ್ತಮ ಯೋಜನೆ ನೀಡಿಲ್ಲ. ಇಲ್ಲಿನ ಬಡವರಿಗೆ ಸಹಾಯ ಮಾಡಲು ಆಗದಿದ್ದರೆ ಅವರು ಮತ್ತೆ ಮತ ಕೇಳುವ ಹಕ್ಕು ಇದೆಯೇ? ಅವರು ಈ ಜನರ ಬಳಿ ಮತ ಕೇಳುವ ಹಕ್ಕು ಕಳೆದುಕೊಂಡಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಹೊಂಗನೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ತಗಚಗೆರೆ ಹಾಗೂ ಭೂಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಅವರ ಪರ ಸೋಮವಾರ ಪ್ರಚಾರಸಭೆ ಉದ್ದೇಶಿಸಿ ಮಾತನಾಡಿದರು.
“ಕುಮಾರಸ್ವಾಮಿ ಅವರು ಈ ಕ್ಷೇತ್ರದ ಜನಪ್ರತಿನಿಧಿಯಾಗಿ ಒಂದೇ ಒಂದು ದಿನ ಈ ಕ್ಷೇತ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮಾಡಲು ಬರಲಿಲ್ಲ. ಹಾಗಾದ್ರೆ ನಿನಗೆ ಶಾಸಕ ಸ್ಥಾನ ಯಾಕೆ ಬೇಕು? ಕನ್ನಡ ರಾಜ್ಯೋತ್ಸವದಂದು ನೀನು ಇಲ್ಲಿ ಕನ್ನಡ ಧ್ವಜ ಹಾರಿಸಲಿಲ್ಲ. ಅಲ್ಲಿಗೆ ನಿನ್ನ ಹಾಗೂ ಈ ಚನ್ನಪಟ್ಟಣ ಕ್ಷೇತ್ರದ ಜನರ ನಡುವೆ ಭಾವನಾತ್ಮಕ ಸಂಬಂಧ ಎಲ್ಲಿದೆ? ಹೀಗಾಗಿ ಕುಮಾರಣ್ಣ ಮತ ಕೇಳುವ ಹಕ್ಕು ಕಳೆದುಕೊಂಡಿದ್ದಾರೆ” ಎಂದು ಹರಿಹಾಯ್ದರು.
“ಈ ಕ್ಷೇತ್ರದಲ್ಲಿ ಅನೇಕ ಜನರು ಬಗರ್ ಹುಕ್ಕುಂ ಸಾಗುವಳಿಗೆ ಅರ್ಜಿ ಹಾಕಿದ್ದೀರಿ. ಅನೇಕರು ನಿವೇಶನ, ಮನೆಯಿಲ್ಲ ಎಂದು ಅರ್ಜಿ ಹಾಕಿದ್ದೀರಿ. ನಾನು ಇಲ್ಲಿ ಭೇಟಿ ಮಾಡಿ ನಿಮ್ಮ ಅರ್ಜಿ ನೋಡಿದ ಬಳಿಕ ಈ ಭಾಗದಲ್ಲಿ ನೂರಾರು ಎಕರೆ ಜಮೀನು ಖರೀದಿ ಮಾಡಿ ನಿವೇಶನ ಹಂಚಲಾಗುತ್ತಿದೆ. 5 ಸಾವಿರ ಕುಟುಂಬಗಳಿಗೆ ನಿವೇಶನ ಮಂಜೂರು ಮಾಡಿಸಿದ್ದೇನೆ. ಈ ಕೆಲಸ ಕುಮಾರಸ್ವಾಮಿ ಅವರಿಂದ ಸಾಧ್ಯವಾಗುತ್ತಿರಲಿಲ್ಲವೇ?” ಎಂದು ಟೀಕಿಸಿದರು.
“ಯೋಗೇಶ್ವರ್ ಅವರು ಮೂರ್ನಾಲ್ಕು ಬಾರಿ ಶಾಸಕರಾಗಿ ಕೆಲಸ ಮಾಡಿದ್ದಾರೆ. ಕಳೆದ 2 ಬಾರಿ ಇದೇ ಕ್ಷೇತ್ರದಲ್ಲಿ ಸೋತಿದ್ದಾರೆ. ಈ ಎರಡು ಅವಧಿಯಲ್ಲಿ ನೀವು ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದ್ದೀರಿ. ಕುಮಾರಸ್ವಾಮಿ ಅವರು ಈ ಕ್ಷೇತ್ರದಲ್ಲೂ ಶಾಸಕರಾಗಿ ಹಾಗೂ ಮುಖ್ಯಮಂತ್ರಿಯಾಗಿದ್ದರು. ಪಕ್ಕದ ಕ್ಷೇತ್ರದಿಂದಲೂ ಶಾಸಕರಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು. ರಾಮನಗರದಲ್ಲಿ ಅವರ ಧರ್ಮಪತ್ನಿ ಹಾಗೂ ನನ್ನ ಸಹೋದರಿ ಅನಿತಾ ಕುಮಾರಸ್ವಾಮಿ ಅವರು ಶಾಸಕಿಯಾಗಿ ಕೆಲಸ ಮಾಡಿದ್ದಾರೆ.ಯೋಗೇಶ್ವರ್ ಹಾಗೂ ಕುಮಾರಸ್ವಾಮಿ ಅವರ ಮಧ್ಯೆ ಏನಾಗಿದೆಯೋ ನಾನು ಚರ್ಚೆ ಮಾಡುವುದಿಲ್ಲ. ನಾನು ವ್ಯಕ್ತಿ ಮೇಲೆ ರಾಜಕೀಯ ಮಾಡುವುದಿಲ್ಲ. ನಿಮಗೇನು ಲಾಭ, ಕ್ಷೇತ್ರ ಹಾಗೂ ಕ್ಷೇತ್ರದ ಜನತೆಗೆ ಏನು ಲಾಭ ಎಂದು ಆಲೋಚನೆ ಮಾಡಿ” ಎಂದರು.
ನಿಖಿಲ್ ಬಗ್ಗೆ ಮಾತನಾಡುವುದಿಲ್ಲ
“ನಾನು ಕುಮಾರಸ್ವಾಮಿ ಅವರ ಮಗನ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಪಾಪ ಕಂದ. ಅವರು ಇಲ್ಲಿ ನಿಲ್ಲು ಎಂದರೂ ನಿಲ್ಲುತ್ತಾನೆ, ಅಲ್ಲಿ ನಿಲ್ಲು ಎಂದರೂ ನಿಲ್ಲುತ್ತಾನೆ. ಕಣ್ಣೀರು ಹಾಕು ಎಂದರೂ ಹಾಕುತ್ತಾನೆ, ನಗು ಎಂದರೂ ನಗುತ್ತಾನೆ. ಆತನನ್ನು ನಾನು ಪ್ರಶ್ನೆ ಮಾಡುವುದಿಲ್ಲ. ಆತ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವುದಾಗಿ ಹೇಳಿದ್ದಾರೆ. ಅವರು ಒತ್ತಡಕ್ಕೆ ಸ್ಪರ್ಧಿಸಿದ್ದಾರೆಯೇ ಹೊರತು, ಜನರ ಸೇವೆಗಾಗಿ ಅಲ್ಲ. ನಿಮ್ಮ ಕಷ್ಟ ಸುಖಕ್ಕೆ ಭಾಗಿಯಾಗಲು ನಾವು ಸಂಕಲ್ಪ ಮಾಡಿದ್ದೇವೆ” ಎಂದು ಲೇವಡಿ ಮಾಡಿದರು.
“ಯೋಗೇಶ್ವರ್ ರೆಡಿಮೇಡ್ ಗಂಡು. ಅವರಿಗೆ ನಿಮ್ಮ ಕಷ್ಟ, ಸುಖ, ನೋವು ಗೊತ್ತಿದೆ. ನಿಮ್ಮ ಹಳ್ಳಿಗಳು ಗೊತ್ತಿದೆ. ಅವರಿಗೆ ಬೆಂಬಲವಾಗಿ ಸರ್ಕಾರವಿದೆ. ಅವರ ಬೆನ್ನಿಗೆ ಈ ಡಿ.ಕೆ. ಶಿವಕುಮಾರ್ ಇದ್ದಾನೆ. ನಾನು ಎಂದಾದರೂ ಕೊಟ್ಟ ಮಾತು ತಪ್ಪಿದ್ದೀನಾ” ಎಂದು ಕೇಳಿದರು.