ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ನಾಯಕರ ಮೇಲೆ ಕೋವಿಡ್ ಹಗರಣ, 40% ಭ್ರಷ್ಟಾಚಾರ ಪ್ರಕರಣ, ಭೂ ಹಗರಣ ಪ್ರಕರಣಗಳಿದ್ದರೂ ಅವರ ಮೇಲೆ ಇ.ಡಿ ದಾಳಿ ನಡೆಯುವುದಿಲ್ಲ. ಆದರೆ ರಾಜ್ಯದಲ್ಲಿ ಇಡಿ ಸಂಸ್ಥೆ ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆಸಿದೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಆರೋಪಿಸಿದರು.
ಅನೇಕ ಭ್ರಷ್ಟಾಚಾರದ ಪ್ರಕರಣಗಳ ಬಗ್ಗೆ ಬಿಜೆಪಿ ನಾಯಕರ ವಿರುದ್ಧ ತಮ್ಮ ಕಚೇರಿಗೆ ದೂರು ತಲುಪಿದರು ಸಹ ಬಿಜೆಪಿ ವಿರುದ್ಧ ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿಲ್ಲ. ಕೂಡಲೇ ನಾವು ನೀಡಿರುವ ಮನವಿ ಪತ್ರಗಳನ್ನು ಪರಿಶೀಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಬಿಜೆಪಿ ನಾಯಕರ ವಿರುದ್ಧ ತನಿಖೆ ನಡೆಸಬೇಕು ಎಂದು ಜಾರಿ ನಿರ್ದೇಶನಾಲಯದ ಜಂಟಿ ನಿರ್ದೇಶಕರಿಗೆ ಮನವಿ ಪತ್ರ ಸಲ್ವಲಿಸಿದ ಬಳಿಕ ಮಾಹಿತಿ ನೀಡಿದರು.
“ಬಿಜೆಪಿ ನಾಯಕರೇ ಆರೋಪಿಸಿರುವಂತೆ ಕೋಟ್ಯಂತರ ರೂಪಾಯಿಗಳ ಅಕ್ರಮ ನಡೆದಿದೆ. ಇದುವರೆಗೂ ಅವರ ವಿರುದ್ಧ ಇಡಿ ದಾಳಿ ನಡೆದಿಲ್ಲ. ಆದರೆ, ಸಚಿವ ಪರಮೇಶ್ವರ್ ರವರ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿರುವುದು ಮೇಲ್ನೋಟಕ್ಕೆ ರಾಜಕೀಯ ದಾಳಿ ಎಂದು ಕಾಣುತ್ತಿದೆ. ಬಿಜೆಪಿಯ ಭ್ರಷ್ಟಾಚಾರಿಗಳ ವಿರುದ್ಧವೂ ದಾಳಿಯಾಗಬೇಕು” ಎಂದು ಒತ್ತಾಯಿಸಿದರು.
“ಕೇಂದ್ರ ಜಾರಿ ನಿರ್ದೇಶನಾಲಯ ಉದ್ದೇಶಪೂರ್ವಕವಾಗಿ ಕೇಂದ್ರ ಸರ್ಕಾರದ ವಿರುದ್ಧ ಯಾರು ಹೋರಾಟ ನಡೆಸುತ್ತಾರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಗ್ಗೆ ಯಾರು ಟೀಕಿಸುತ್ತಾರೋ ಅವರ ವಿರುದ್ಧ ದಾಳಿ ನಡೆಸುವುದು ಈಗ ಕಾಯಕವಾಗಿದೆ. ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಇ.ಡಿ. ದಾಳಿ ಇತ್ತೀಚೆಗೆ ಸಾಮಾನ್ಯವಾಗಿದೆ. ಹತ್ತಾರು ರಾಜ್ಯಗಳಲ್ಲಿ ಇಂತಹ ದುರುದ್ದೇಶ ದಾಳಿಗಳು ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರದ ಹಾಗೂ ಪಕ್ಷದ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಇಡಿ ಮೂಲಕ ಮಾಡುತ್ತಿರುವುದು ಈಗಾಗಲೇ ಬಹಿರಂಗವಾಗಿದೆ” ಎಂದರು.
“ಇಡಿ ಅಧಿಕಾರಿಗಳು ಮೊದಲು ರಾಜ್ಯದಲ್ಲಿರುವ ಭ್ರಷ್ಟ ಬಿಜೆಪಿ ನಾಯಕರ ಮನೆಯ ಮೇಲೆ ದಾಳಿ ನಡೆಸಬೇಕು ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಆಗ್ರಹಿಸಿದ್ದಾರೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸಾವಿರಾರು ಕೋಟಿ ಭ್ರಷ್ಟಾಚಾರದ ಹಗರಣಗಳ ಬಗ್ಗೆ ಆರೋಪ ಮಾಡಿದ್ದಾರೆ. ಬಿಜೆಪಿಯ ಪಕ್ಷದ ನಾಯಕರು ಮಾಡಿರುವ ಭೂ ಅಕ್ರಮಗಳ ಬಗ್ಗೆ ತನಿಖೆ ನಡೆಸಬೇಕು ಹಾಗೂ ಕೇಂದ್ರದ ಸಚಿವರ ವಿರುದ್ಧ ಇರುವ ಅನೇಕ ಪ್ರಕರಣಗಳ ಬಗ್ಗೆ ಇಂದು ತಾವು ತನಿಖೆ ನಡೆಸುತ್ತಿಲ್ಲ ಯಾಕೆ? ಸ್ವಯಂ ಪ್ರೇರಿತವಾಗಿ ಭ್ರಷ್ಟಾಚಾರದ ಆರೋಪದಡಿಯಲಿ ಪ್ರಕರಣ ದಾಖಲಿಸಿಕೊಂಡು ಅವರ ವಿರುದ್ಧ ಇಡೀ ದಾಳಿ ನಡೆಸುತ್ತಿಲ್ಲ” ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪುಟ್ಟರಾಜು, ಓಬಳೇಶ್ , ಕುಶಾಲ್ ಹರುವೇಗೌಡ, ಆನಂದ್ ಕುಮಾರ್, ಸುಂಕದಕಟ್ಟೆ ನವೀನ್ ,ರಂಜಿತ್ , ಕೆಂಪೇಗೌಡ, ನವೀನ್ ಸಾಯಿ,ಸಂಜಯ್ ಸಶಿಮಠ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.