Homeಕರ್ನಾಟಕ40% ಕಮಿಷನ್ ಆರೋಪ, ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ ನ್ಯಾ. ನಾಗಮೋಹನ ದಾಸ್

40% ಕಮಿಷನ್ ಆರೋಪ, ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ ನ್ಯಾ. ನಾಗಮೋಹನ ದಾಸ್

‌ಬಿಜೆಪಿ ಸರ್ಕಾರದ ಅವಧಿಯಲ್ಲಿ ಟೆಂಡರ್ ಕಾಮಗಾರಿಗಳಲ್ಲಿ ಕೇಳಿಬಂದಿದ್ದ ಶೇ.40 ಕಮಿಷನ್‌ ಆರೋಪ ಬಗ್ಗೆ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ ದಾಸ್ ವಿಚಾರಣಾ ಆಯೋಗ ತನಿಖೆ ನಡೆಸಿ, ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ.

ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ ದಾಸ್ ಅವರು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ರಾಜ್ಯ ಗುತ್ತಿಗೆದಾರರ ಸಂಘ ಮಾಡಿದ ಆರೋಪಗಳ ತನಿಖಾ ವರದಿ ಮತ್ತು ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ 01 ರಿಂದ 18 ರವರೆಗಿನ ಉಪ/ಸೀಳು ಕಾಲುವೆಗಳ ಆಧುನೀಕರಣ ಅಂದಾಜು ಪಟ್ಟಿ ತನಿಖಾ ವರದಿಯನ್ನು ಸಲ್ಲಿಸಿದೆ.

ರಾಜ್ಯ ಗುತ್ತಿಗೆದಾರರ ಸಂಘವು ಸರ್ಕಾರದ ಟೆಂಡರ್ ಕಾಮಗಾರಿಗಳಲ್ಲಿ ಶೇ.40 ಕ್ಕಿಂತ ಹೆಚ್ಚಿನ ಕಮಿಷನ್ ಆರೋಪ ನಿಜವೇ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಎಲ್ಲ ಸಂಗತಿಗಳು ಇನ್ನಷ್ಟೇ ಬಯಲಾಗಬೇಕಿದ್ದು, ಕೇವಲ ವರದಿ ತಯಾರಿಸುವ ಬಗೆ ಬಗ್ಗೆ ಮಾತ್ರ ಹೆಚ್.ಎನ್. ನಾಗಮೋಹನ ದಾಸ್ ವಿಚಾರಣಾ ಆಯೋಗ ತಿಳಿಸಿದೆ.

ಗುತ್ತಿಗೆದಾರರ ಸಂಘದ ಆರೋಪ ವರದಿ

ರಾಜ್ಯ ಗುತ್ತಿಗೆದಾರರ ಸಂಘವು ಸರ್ಕಾರದ ಟೆಂಡರ್ ಕಾಮಗಾರಿಗಳಲ್ಲಿ ಶೇ.40 ಕ್ಕಿಂತ ಹೆಚ್ಚಿನ ಕಮಿಷನ್ ಚಾಲ್ತಿಯಲ್ಲಿದೆ ಎಂದು ಆರೋಪಿಸಿ ದೂರು ಸಲ್ಲಿಸಲಾಗಿತ್ತು. ಇದಲ್ಲದೆ ಪ್ಯಾಕೇಜ್ ಪದ್ಧತಿ ಕೈಬಿಡುವುದು, ಎಸ್.ಆರ್. ದರಪಟ್ಟಿ ನಿಗದಿ, ಸ್ಟಾರ್ ರೇಟ್ ಪದ್ಧತಿಯ ಜಾರಿ. ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವಿಕೆ, ಸೀನಿಯಾರಿಟಿ ಮೇಲೆ ಬಿಲ್ ಪಾವತಿ, ಕೆ.ಆರ್.ಐ.ಡಿ.ಎಲ್. ನಿಂದ ಗುತ್ತಿಗೆದಾರರಿಗೆ ನೇರವಾಗಿ ಕಾಮಗಾರಿಗಳ ನೀಡಿಕೆ ತಪ್ಪಿಸುವುದು ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆಯೂ ತನಿಖೆ ನಡೆಸಲು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು.. ಈ ಸಂಬಂಧ ವಿಚಾರಣಾ ಆಯೋಗವು ಈ ಎಲ್ಲ ಆರೋಪಗಳ ಸತ್ಯಾಸತ್ಯತೆಯ ಬಗ್ಗೆ ವಿವರವಾದ ಅಧ್ಯಯನ ಮಾಡಿ ತನಿಖೆ ನಡೆಸಿ ಪ್ರಸ್ತುತ ವರದಿಯನ್ನು ಸಲ್ಲಿಸಿದೆ ಎಂದು ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ ದಾಸ್ ಆಯೋಗ ತಿಳಿಸಿದೆ.

“ಇದೊಂದು ಸಾರ್ವಜನಿಕ ಕಾಮಗಾರಿಗಳಿಗೆ ಸಂಬಂಧಿಸಿದ ಆರೋಪವಾಗಿರುವುದರಿಂದ ಸಾರ್ವಜನಿಕರ ಹೇಳಿಕೆಗಳು ಮತ್ತು ವಿವರಗಳು ಬಹು ಮುಖ್ಯ ಎಂಬುದನ್ನು ಮನಗಂಡು ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಬಂದ ದೂರುಗಳ ಬಗ್ಗೆಯೂ ಆಯೋಗವು ಕೂಲಂಕಷವಾಗಿ ತನಿಖೆ ನಡೆಸಿ ಸಲಹೆ ಮತ್ತು ಅಭಿಪ್ರಾಯಗಳೊಂದಿಗೆ ವರದಿ ತಯಾರಿಸಲಾಗಿದೆ. ಗುತ್ತಿಗೆದಾರರ ಸಂಘದ ಆರೋಪಗಳ ತನಿಖೆ ನಡೆಸುತ್ತಿದ್ದ ಜೊತೆ ಜೊತೆಯಲ್ಲಿಯೇ ಸರ್ಕಾರವು ರಾಜ್ಯದ ಪ್ರಮುಖ ಐದು ಇಲಾಖೆಗಳಲ್ಲಿ ದಿನಾಂಕ:26.07.2019 ರಿಂದ 31.03.2023ರ ಅವಧಿಯಲ್ಲಿ ನಡೆದಿರುವ ಎಲ್ಲ ಕಾಮಗಾರಿಗಳ ತನಿಖೆ ನಡೆಸಿ ವರದಿಯನ್ನು ನೀಡಬೇಕೆಂದು ತಿಳಿಸಿತು. ಇದನ್ನು ಗಮನದಲ್ಲಿಟ್ಟುಕೊಂಡು ಆಯೋಗವು ವೈಜ್ಞಾನಿಕವಾಗಿ ರ್‍ಯಾಂಡಮ್ ಮಾದರಿಯಲ್ಲಿ ಪೂರ್ಣಗೊಂಡ ಕಾಮಗಾರಿಗಳನ್ನು ತನಿಖೆಗೆ ಆಯ್ಕೆ ಮಾಡಿಕೊಂಡಿದೆ. ಈ ಆಯ್ಕೆಯಲ್ಲಿ ಎಲ್ಲಾ ಇಲಾಖೆಗಳು, ಎಲ್ಲ ಜಿಲ್ಲೆಗಳು, ಎಲ್ಲಾ ಮಾದರಿಯ ಕಾಮಗಾರಿಗಳು ಮತ್ತು ಎಲ್ಲಾ ಮೊತ್ತದ ಕಾಮಗಾರಿಗಳನ್ನು ಪರಿಗಣಿಸಲಾಗಿದೆ” ಎಂದು ತಿಳಿಸಲಾಗಿದೆ.

“ಕಾಮಗಾರಿಗಳ ತನಿಖೆಯು ಕಡತಗಳ ಪರಿಶೀಲನೆ, ಸ್ಥಳ ಪರಿಶೀಲನೆ ಮತ್ತು ಲೆಕ್ಕಪತ್ರಗಳ ಪರಿಶೀಲನೆ ಅಂಶಗಳನ್ನು ಒಳಗೊಂಡಿರುತ್ತದೆ. ತನಿಖಾ ವರದಿಯು ಅನುಬಂಧಗಳೊಂದಿಗೆ ಸುಮಾರು ಇಪ್ಪತ್ತು ಸಾವಿರ ಪುಟಗಳನ್ನು ಹೊಂದಿದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಎರಡನೇ ತನಿಖಾ ವರದಿ

ರಾಯಚೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ 01 ರಿಂದ 18 ರವರೆಗಿನ ಉಪ/ಸೀಳು ಕಾಲುವೆಯ ಆಧುನೀಕರಣ ಪ್ಯಾಕೇಜ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಂಜೂರಾದ ಅಂದಾಜು ಪತ್ರಿಕೆಗಳಲ್ಲಿ ಅಳವಡಿಸಿಕೊಂಡಿರುವ ಹಾಗೂ ಸದರಿ ಅಂದಾಜು ಪತ್ರಿಕೆಗಳನ್ನು ಪರಿಶೀಲಿಸಿ ಪ್ರಸಕ್ತ ನಿಗಮದ ಅಂದಾಜು ಪರಿಶೀಲನಾ ಸಮಿತಿಯು ಗಮನಿಸಿರುವ ತಾಂತ್ರಿಕ ನ್ಯೂನತೆಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ನಿವೃತ್ತ ಸರ್ಕಾರದ ಕಾರ್ಯದರ್ಶಿಗಳಾದ ಸಿದ್ದಗಂಗಪ್ಪರವರ ಅಧ್ಯಕ್ಷತೆಯಲ್ಲಿ ರಚಿಸಿದ ತಾಂತ್ರಿಕ ತಜ್ಞರ ಸಮಿತಿಯನ್ನು ವಿಸರ್ಜಿಸಿ ವಿಚಾರಣಾ ಆಯೋಗಕ್ಕೆ ಹೆಚ್ಚುವರಿಯಾಗಿ ವಹಿಸಿರುವ ತನಿಖೆಯನ್ನು ಆಯೋಗವು ನಡೆಸಿ ತನಿಖಾ ವರದಿಯನ್ನು ಸಲ್ಲಿಸಿದೆ. ಈ ತನಿಖಾ ವರದಿಯು ಅನುಬಂಧಗಳೊಂದಿಗೆ ಸುಮಾರು ಸಾವಿರದ ಎಂಟುನೂರು ಪುಟಗಳನ್ನು ಹೊಂದಿದೆ ಎಂದು ಆಯೋಗ ಹೇಳಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments