ಜಿದ್ದಾಜಿದ್ದಿನಿಂದ ಕೂಡಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಅವರು ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಮಣಿಸಿ ಗೆಲುವಿನ ನಗೆ ಬೀರಿದ್ದಾರೆ.
ಸಿ ಪಿ ಯೋಗೇಶ್ವರ್ ಚನ್ನಪಟ್ಟಣದಲ್ಲಿ ಮತದಾರರಿಗೆ ಧನ್ಯವಾದ ಅರ್ಪಿಸಿ, ಸುದ್ದಿಗಾರರ ಜೊತೆ ಮಾತನಾಡಿದರು.
“ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಹಾಗೂ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರ ಪ್ರತಿಷ್ಠೆಗೆ ಅವರ ಮಗ ನಿಖಿಲ್ ಬಲಿಯಾಗಿದ್ದಾರೆ. ಅವರಿಬ್ಬರೂ ತಮ್ಮ ಪ್ರತಿಷ್ಠೆಗೆ ಮಗನನ್ನೇ ಬಲಿಕೊಟ್ಟಿದ್ದಾರೆ” ಎಂದು ಟೀಕಿಸಿದರು.
“ಇನ್ನಾದರೂ ದೇವೇಗೌಡರು ವಿಶ್ರಾಂತಿ ಜೀವನ ಕಳೆಯಲಿ. ಒಕ್ಕಲಿಗ ಸಮುದಾಯ ದೇವೇಗೌಡರ ಕುಟುಂಬವನ್ನು ತಿರಸ್ಕರಿಸಿದೆ. ಇದನ್ನು ಕುಮಾರಸ್ವಾಮಿ ಅರ್ಥಮಾಡಿಕೊಳ್ಳಬೇಕು. ಮಗನನ್ನು ಎಷ್ಟು ಭಾರಿ ಬಲಿಕೊಡುತ್ತಾರೆ ಕುಮಾರಸ್ವಾಮಿ” ಎಂದು ಪ್ರಶ್ನಿಸಿದರು.
“ಕುಮಾರಸ್ವಾಮಿ ಮನಸು ಮಾಡಿದ್ದರೆ ಮಗನನ್ನು ಮಂಡ್ಯದಲ್ಲಿ ಲೋಕಸಭೆ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಬಹುದಿತ್ತು. ಆದರೆ, ಕೇಂದ್ರ ಸಚಿವರಾಗುವ ತವಕದಿಂದ ತಾವೇ ಅಲ್ಲಿ ಸ್ಪರ್ಧಿಸಿದರು. ಮಗನನ್ನು ಬಲಿಕೊಟ್ಟರು” ಎಂದರು.
“ದೇವೇಗೌಡರು ದೈತ್ಯ ಶಕ್ತಿ ಎಂದು ಈ ಹಿಂದೆಯೇ ಹೇಳಿದ್ದೇನೆ. ಅದು ಸತ್ಯ. ಆದರೆ, ಅವರಿಗೆ ವಯಸ್ಸಾಗಿದೆ. ಅವರನ್ನು ಜನ ಚುನಾವಣೆಯಲ್ಲಿ ತಿರಸ್ಕರಿಸಿದ್ದಾರೆ. ಹೀಗಾಗಿ ಅವರಿಗೆ ವಿಶ್ರಾಂತ ಜೀವನ ನಡೆಸಲು ಇದು ಸೂಕ್ತ ಕಾಲ. ಈ ಚುನಾವಣೆ ಫಲಿತಾಂಶ ಜೆಡಿಎಸ್ ಕೊನೆಯ ಕ್ಷಣಗಳನ್ನು ಎಣಿಸುತ್ತಿದೆ” ಲೇವಡಿ ಮಾಡಿದರು.
ಡಿ ಕೆ ಸುರೇಶ್ ಬೆಂಬಲಕ್ಕೆ ಬಂದರು
ಡಿ ಕೆ ಸಹೋದರರ ಸಹಕಾರಕ್ಕೆ ಧನ್ಯವಾದ ತಿಳಿಸುವೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಡಾ. ಮಂಜುನಾಥ್ ಪರ ಕೆಲಸ ಮಾಡಿ, ಡಿ ಕೆ ಸುರೇಶ್ ಅವರನ್ನು ಸೋಲಿಸಿದ್ದೆ. ಆದರೆ, ಈ ಚುನಾವಣೆಯಲ್ಲಿ ಅದೇ ಡಿ ಕೆ ಸುರೇಶ್ ಯಾವುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಹೆಗಲಿಗೆ ಹೆಗಲು ಕೊಟ್ಟು ನನ್ನನ್ನು ಗೆಲ್ಲಿಸಿದರು” ಎಂದು ಕೃತಜ್ಞತೆಯಿಂದ ಹೇಳಿದರು.
“ದೇವೇಗೌಡರ ಕುಟುಂಬ ವರ್ಚಸ್ಸು ವರ್ಷದಿಂದ ವರ್ಷಕ್ಕೆ ಕುಗ್ಗುತ್ತಿದೆ. ಅವರದ್ದು ಕೇವಲ ಸ್ವಾರ್ಥದ ರಾಜಕಾರಣ. ಜನಪರ ಕಾಳಜಿ ಇದ್ದಿದ್ದರೆ ಜನ ಬೆಂಬಲಿಸುತ್ತಿದ್ದರು. ಆದರೆ, ಅವರದ್ದು ಕೇವಲ ಸ್ವಾರ್ಥದ ರಾಜಕಾರಣ. ಹಾಗಾಗಿ ಜನರು ಅವರನ್ನು ತಿರಸ್ಕರಿಸಿದ್ದಾರೆ” ಎಂದರು.
ಬಿಎಸ್ವೈ ಕುಟುಂಬದ ವಿರುದ್ಧ ವಾಗ್ದಾಳಿ
ಬಿಎಸ್ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ವಿರುದ್ಧವೂ ಯೋಗೇಶ್ವರ್ ಕಿಡಿಕಾರಿದರು. ಹಿಂದೆ ಯಡಿಯೂರಪ್ಪನವರು ರಾಜಕೀಯವಾಗಿ ಸಂಕಷ್ಟಕ್ಕೆ ಸಿಲುಕಿದಾಗ ಅವರಿಗೆ ನೆರವಾಗಿದ್ದೆ. ಅವರು ಕುಟುಂಬ ರಾಜಕಾರಣ ಸ್ವಾರ್ಥದಲ್ಲಿ ನನ್ನನ್ನು ಕಡೆಗಣಿಸಿದರು. ಅವರಿಗೆ ಸೂಕ್ತ ಉತ್ತರ ದೊರೆತಿದೆ” ಎಂದು ಹೇಳಿದರು.
“ನನಗೆ ಚುನಾವಣೆ ಎಂಬುದು ಟಿ20 ಕ್ರಿಕೆಟ್ ಇದ್ದಂತೆ. ಒಮ್ಮೆ ಆ ಪಕ್ಷದಿಂದ ಮತ್ತೊಮ್ಮೆ ಈ ಪಕ್ಷದಿಂದ ಸ್ಪರ್ಧಿಸಿದ್ದೇನೆ. ನಾನು ಎಲ್ಲಿ ಹೋಗುತ್ತೇನೆ ಆ ಪಕ್ಷವನ್ನು ಗೆಲ್ಲಿಸುತ್ತೇನೆ. ಜನ ನನ್ನ ಕೈಹಿಡಿಯುತ್ತಾರೆ” ಎಂದರು.