ಪುಷ್ಪಾ -2 ಸಿನೆಮಾ ನೋಡಲು ಹೋದ ವೇಳೆ ಉಂಟಾದ ಕಾಲ್ತುಳಿದಿಂದ ಮಹಿಳೆ ಸಾವು ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ನಟ ಅಲ್ಲು ಅರ್ಜುನ್ಗೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಈಗಾಗಲೇ ಅಲ್ಲು ಅರ್ಜುನ್ಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ನಾಂಪಲ್ಲಿ ನ್ಯಾಯಾಲಯ ವಿಧಿಸಿತ್ತು, ಇದೀಗ ಹೈಕೋರ್ಟ್ ಮಧ್ಯಂತರ ಜಾಮೀನನ್ನು ಹೈಕೋರ್ಟ್ ನೀಡಿದೆ. ಅಲ್ಲು ಅರ್ಜುನ್ 14 ದಿನಗಳ ಜೈಲು ವಾಸದಿಂದ ತಪ್ಪಿಸಿಕೊಂಡಂತಾಗಿದೆ.
ಅಲ್ಲು ಅರ್ಜುನ್ಗೆ ಬೆಳಿಗ್ಗೆ ಜೈಲು, ಸಂಜೆ ಬೇಲ್ ಆಗಿದೆ. ಆದರೆ ಸೋಮವಾರದ ವರೆಗೆಯಾದರೂ ಜೈಲು ವಾಸ ಅನುಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಎಫ್ಐಆರ್ ರದ್ದು ಕೋರಿ ಅಲ್ಲು ಅರ್ಜುನ್ ಪರ ವಕೀಲರು ತೆಲಂಗಾಣ ಹೈಕೋರ್ಟ್ನಲ್ಲಿ ಅರ್ಜಿ ಹಾಕಿದ್ದರು. ಶಾರುಖ್ ಖಾನ್ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ಉಲ್ಲೇಖ ಮಾಡಿ ಅಲ್ಲು ಅರ್ಜುನ್ ಪರ ವಕೀಲರು ವಾದ ಮಂಡಿಸಿದರು. ಆದರೆ ಹೈಕೋರ್ಟ್ನಲ್ಲಿ ಎಫ್ಐಆರ್ ರದ್ದು ಸಾಧ್ಯವಾಗಲಿಲ್ಲ. ವಾದ ಮುಂದುವರೆಸಿ, ಮಧ್ಯಂತರ ಜಾಮೀನಿನ ಅರ್ಜಿಯ ವಾದ ಮಂಡಿಸಿದ ಅಲ್ಲು ಅರ್ಜುನ್ ಪರ ವಕೀಲರು ಅರ್ನಬ್ ಗೋಸ್ವಾಮಿ ಪ್ರಕರಣ ಉಲ್ಲೇಖಿಸಿ ವಾದ ಮಂಡಿಸಿದರು.
ಅಲ್ಲು ಅರ್ಜುನ್ಗೆ, ರೇವತಿ ಸಾವಿಗೆ ನೇರ ಸಂಬಂಧವೇ ಇಲ್ಲ. ಇದು ಅಚಾನಕ್ಕಾಗಿ ನಡೆದಿರುವ ಘಟನೆ. ಇಂತಹ ಅಪಘಾತಗಳು ಸಾಕಷ್ಟು ನಡೆಯುತ್ತಲೇ ಇರುತ್ತವೆ. ಈ ರೀತಿಯ ಘಟನೆಗಳಿಗೆ ನಟರನ್ನು, ರಾಜಕಾರಣಿಗಳನ್ನು ಕೊಲೆಗಾರರು ಎನ್ನಲಾಗದು ಎಂದು ವಾದಿಸಿದರು. ಹಲವು ಇತರೆ ಪ್ರಕರಣಗಳ ಉಲ್ಲೇಖಗಳನ್ನು ಸಹ ವಕೀಲರು ನ್ಯಾಯಾಲಯದಲ್ಲಿ ಮಾಡಿದರು. ವಾದ ಆಲಿಸಿದ ನ್ಯಾಯಮೂರ್ತಿಗಳು ಅಲ್ಲು ಅರ್ಜುನ್ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದಾರೆ.