ಚಾಮರಾಜನಗರ ಜಿಲ್ಲೆಗೆ ಭೇಟಿಕೊಟ್ಟರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೌಡ್ಯವಷ್ಟೆ, ಜಿಲ್ಲೆಗೆ ಬಂದ ಮೇಲೆ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೇನೆ, ಕುರ್ಚಿಯೂ ಗಟ್ಟಿಯಾಗುತ್ತಲೇ ಇದೆ. ಜಿಲ್ಲೆಗೆ 10 ರಿಂದ 15 ಬಾರಿ ಭೇಟಿ ನೀಡಿದ್ದೇನೆ, ಸಮಾಜದ ಪ್ರಗತಿಗೆ ಅಡ್ಡಿಯಾಗಿರುವ ಮೌಡ್ಯಗಳನ್ನು ತೊಡೆದುಹಾಕಬೇಕಿದೆ ಸಿಎಂ ಸಿದ್ದರಾಮಯ್ಯ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಬೆಳಿಗ್ಗೆ ಮಲೆ ಮಹದೇಶ್ವರನ ದೇಗುಲದಲ್ಲಿ ದೇವರ ದರ್ಶನ ಪಡೆದು ಮಾತನಾಡಿದರು.
“ಮಲೆ ಮಹದೇಶ್ವರನ ಕ್ಷೇತ್ರದಲ್ಲಿ ಶುಚಿತ್ವ, ಮೂಲಸೌಕರ್ಯಕ್ಕೆ ಒತ್ತು ನೀಡುವಂತೆ ಸೂಚನೆ ನೀಡಲಾಗಿದೆ. ಕ್ಷೇತ್ರವನ್ನು ಮದ್ಯಪಾನ ಮುಕ್ತವಾಗಿಸಲು ಹಾಗೂ ತಿರುಪತಿ ಮಾದರಿಯಲ್ಲಿ ಲಡ್ಡು ತಯಾರಿಸಿ ಕಡಿಮೆ ದರದಲ್ಲಿ ಭಕ್ತರಿಗೆ ನೀಡುವಂತೆ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದೇನೆ” ಎಂದು ಸಿಎಂ ತಿಳಿಸಿದರು.
“ಶಾಸಕ ವಿನಯ ಕುಲಕರ್ಣಿ ನಿವಾಸದ ಮೇಲೆ ಇ.ಡಿ ದಾಳಿ ರಾಜಕೀಯ ಪ್ರೇರಿತ. ದ್ವೇಷದ ರಾಜಕಾರಣ ಮಾಡುತ್ತಿರುವ ಕೇಂದ್ರ ಸರ್ಕಾರ ಇಡಿ ಬಳಸಿಕೊಂಡು ದಾಳಿ ಮಾಡಿಸುತ್ತಿದೆ, ಬಿಜೆಪಿ ನಾಯಕರ ಮೇಲೆ ಇ.ಡಿ ದಾಳಿ ಏಕೆ ನಡೆಯುವುದಿಲ್ಲ, ಅವರೆಲ್ಲರೂ ಸಾಚಾಗಳಾ” ಎಂದು ಪ್ರಶ್ನಿಸಿದರು.
“ಪಹಲ್ಗಾಮ್ ಭಯೋತ್ಪಾದನಾ ದಾಳಿ ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯ” ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿದ್ದರಾಮಯ್ಯ ಅವರು ಬೆಳ್ಳಿ ದಂಡುಕೋಲು ಸೇವೆಯಲ್ಲಿ ಭಾಗವಹಿಸಿ ಬೆಳ್ಳಿತೇರಿಗೆ ಪೂಜೆ ಸಲ್ಲಿಸಿದರು. ಇದೇ ವೇಳೆ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹಾಗೂ ದೇವಸ್ಥಾನದ ವತಿಯಿಂದ ಮುಖ್ಯಮಂತ್ರಿಗೆ ಗೌರವ ಸಲ್ಲಿಸಲಾಯಿತು.