Homeಕರ್ನಾಟಕಇದು ಶೇ.60 ಕಮಿಷನ್‌ ಸರ್ಕಾರ, ಗುತ್ತಿಗೆದಾರರಿಗೆ ನೀಡಲು ಹಣವಿಲ್ಲ: ಆರ್‌.ಅಶೋಕ್

ಇದು ಶೇ.60 ಕಮಿಷನ್‌ ಸರ್ಕಾರ, ಗುತ್ತಿಗೆದಾರರಿಗೆ ನೀಡಲು ಹಣವಿಲ್ಲ: ಆರ್‌.ಅಶೋಕ್

ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ 60 ಪರ್ಸೆಂಟ್‌ ಕಮಿಷನ್‌ ಸರ್ಕಾರ. ಕಾಂಗ್ರೆಸ್‌ನ ಆಡಳಿತದಿಂದಾಗಿ ರಾಜ್ಯದ ದಿವಾಳಿಯ ಕಡೆಗೆ ಸಾಗುತ್ತಿದೆ. ‌ನಿಗಮಗಳಿಗೆ ಕಾಂಗ್ರೆಸ್‌ನಿಂದ ಅನುದಾನ ಕಡಿತವಾಗಿದೆ. ದಲಿತರಿಗೂ ಅನುದಾನವಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪಿಸಿದರು.

ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಹಿಮಾಚಲ ಪ್ರದೇಶ ಹಾಗೂ ಕೇರಳದಂತೆಯೇ ಕರ್ನಾಟಕ ಕೂಡ ದಿವಾಳಿಯ ಕಡೆಗೆ ಹೆಜ್ಜೆ ಇಡುತ್ತಿದೆ. ಗುತ್ತಿಗೆದಾರರಿಗೆ ಪಾವತಿಸಲು ಸರ್ಕಾರದ ಬಳಿ ಹಣವಿಲ್ಲ. ಬಿಜೆಪಿ ಸರ್ಕಾರಕ್ಕೆ 40 ಪರ್ಸೆಂಟ್‌ ಎಂದು ಆರೋಪಿಸಿದ ಗುತ್ತಿಗೆದಾರರು, ಈಗ ಕಾಂಗ್ರೆಸ್‌ ಸರ್ಕಾರ ಶೇ.60 ಕಮಿಶನ್‌ ಸರ್ಕಾರ ಎಂದು ಹೇಳಿ ದಯಾಮರಣಕ್ಕೆ ಅರ್ಜಿ ಸಲ್ಲಿಸಲು ನೋಡುತ್ತಿದ್ದಾರೆ” ಎಂದು ದೂರಿದರು.

“ಬೆಂಗಳೂರಿನಲ್ಲಿ 30-40 ನಿವೇಶನಕ್ಕೆ 10 ಲಕ್ಷ ರೂ. 40-60 ನಿವೇಶನಕ್ಕೆ 20 ಲಕ್ಷ ರೂ. ಇದಕ್ಕೂ ಹೆಚ್ಚಿನ ನಿವೇಶನಗಳಿಗೆ 40 ಲಕ್ಷ ರೂ. ಲಂಚ ಕಮಿಷನ್‌ ಕೊಡಬೇಕಿದೆ. ಗುತ್ತಿಗೆದಾರರಿಗೆ ಸರ್ಕಾರ 32 ಸಾವಿರ ಕೋಟಿ ರೂ. ನೀಡಬೇಕಿದೆ. ಈ ಹಣ ತರಲು ಎಲ್ಲದಕ್ಕೂ ಸರ್ಕಾರ ತೆರಿಗೆ ಹಾಕುತ್ತಿದೆ. ಇಲ್ಲವಾದರೆ ಗುತ್ತಿಗೆದಾರರಿಗೆ ಕೆಲಸ ಸ್ಥಗಿತಗೊಳಿಸುತ್ತಾರೆ. ಇದರ ನಡುವೆ ಆಶಾ ಕಾರ್ಯಕರ್ತೆಯರು ಧರಣಿ ಆರಂಭಿಸಿದ್ದಾರೆ. ಜೊತೆಗೆ ತೊಗರಿ ಖರೀದಿಗೆ ಸರ್ಕಾರದ ಬಳಿ ಹಣವಿಲ್ಲ” ಎಂದರು.

ಅನುದಾನ ಕಡಿತ, ಬಳಕೆ ಮಾಡಿಲ್ಲ

“ರಾಜ್ಯ ಬಜೆಟ್‌ನಲ್ಲಿ 3.22 ಲಕ್ಷ ಕೋಟಿ ರೂ. ನಲ್ಲಿ 1.79 ಲಕ್ಷ ಕೋಟಿ ರೂ. ಅಂದರೆ ಶೇ.55.69 ಖರ್ಚಾಗಿದೆ. ಇನ್ನೂ ಶೇ.45ರಷ್ಟು ಎರಡು ತಿಂಗಳಲ್ಲಿ ಖರ್ಚು ಮಾಡಬೇಕಿದೆ. ಎಸ್‌ಸಿಎಸ್‌ಪಿಯಲ್ಲಿ 28,527.02 ಕೋಟಿ ರೂ. ಇದ್ದರೆ, 13,923 ಕೋಟಿ ರೂ. ಅಂದರೆ ಶೇ.48.81 ಖರ್ಚು ಮಾಡಲಾಗಿದೆ. ಟಿಎಸ್‌ಪಿಯಲ್ಲಿ 11,515.39 ಕೋಟಿ ರೂ. ಇದ್ದರೆ, 4,937.59 ಕೋಟಿ ರೂ. ಅಂದರೆ ಶೇ.42.88 ಖರ್ಚಾಗಿದೆ. ವಿಶೇಷ ಅಭಿವೃದ್ಧಿ ಯೋಜನೆಯಡಿ, 3,077 ಕೋಟಿ ರೂ. ಇದ್ದರೆ 1,076 ಕೋಟಿ ರೂ. ಅಂದರೆ ಶೇ.34 ಖರ್ಚಾಗಿದೆ. ನುಡಿದಂತೆ ನಡೆದ ಎಂದು ಹೇಳಿ ಯಾವುದೇ ಅನುದಾನ ಖರ್ಚು ಮಾಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಬಹಳ ಮೋಸ ಮಾಡುತ್ತಾರೆ. ಡಾ.ಬಿ.ಆರ್.ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಗೆ 2022-23 ರಲ್ಲಿ ಬಿಜೆಪಿ ಸರ್ಕಾರ 60 ಕೋಟಿ ರೂ. ಅನುದಾನ ನೀಡಿತ್ತು. 2024-25 ರಲ್ಲಿ ಕಾಂಗ್ರೆಸ್‌ 40 ಕೋಟಿ ರೂ. ನೀಡಿದೆ. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ ಯೋಜನೆಗೆ ಬಿಜೆಪಿ 100 ಕೋಟಿ ರೂ. ನೀಡಿದರೆ, ಕಾಂಗ್ರೆಸ್‌ 45 ಕೋಟಿ ರೂ. ನೀಡಿದೆ. ತಾಂಡಾ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ ಯೋಜನೆಗೆ ಬಿಜೆಪಿ 110 ಕೋಟಿ ರೂ. ನೀಡಿದರೆ ಕಾಂಗ್ರೆಸ್‌ 60 ಕೋಟಿ ರೂ. ನೀಡಿದೆ. ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 100 ಕೋಟಿ ರೂ. ನೀಡಿದರೆ, ಕಾಂಗ್ರೆಸ್‌ 50 ಕೋಟಿ ರೂ. ನೀಡಿದೆ. ಭೋವಿ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 95 ಕೋಟಿ ರೂ. ನೀಡಿದರೆ, ಕಾಂಗ್ರೆಸ್‌ 55 ಕೋಟಿ ರೂ. ನೀಡಿದೆ. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 190 ಕೋಟಿ ರೂ. ನೀಡಿದ್ದರೆ, ಕಾಂಗ್ರೆಸ್‌ 100 ಕೋಟಿ ರೂ. ನೀಡಿದೆ. ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 25 ಕೋಟಿ ರೂ. ನೀಡಿದರೆ, ಕಾಂಗ್ರೆಸ್‌ 13 ಕೋಟಿ ರೂ. ಗೆ ಇಳಿಸಿದೆ” ಎಂದರು.

“ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಿಜೆಪಿ 106 ಕೋಟಿ ರೂ. ನೀಡಿದ್ದರೆ, ಕಾಂಗ್ರೆಸ್‌ 50.10 ಕೋಟಿ ರೂ. ನೀಡಿದೆ. ನಿಜಶರಣ ಅಂಬಿಗರ ಚೌಡಯ್ಯ ನಿಗಮಕ್ಕೆ ಬಿಜೆಪಿ 25 ಕೋಟಿ ರೂ. ನೀಡಿದರೆ, ಕಾಂಗ್ರೆಸ್‌ 5 ಕೋಟಿ ರೂ. ನೀಡಿದೆ. ಉಪ್ಪಾರ ನಿಗಮಕ್ಕೆ ಬಿಜೆಪಿ 15 ಕೋಟಿ ರೂ. ನೀಡಿದರೆ ಕಾಂಗ್ರೆಸ್‌ 8 ಕೋಟಿ ರೂ. ನೀಡಿದೆ. ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 100 ಕೋಟಿ ರೂ. ನೀಡಿದ್ದರೆ, ಕಾಂಗ್ರೆಸ್‌ 60 ಕೋಟಿ ರೂ.ಗೆ ರಿಯಾಯಿತಿ ಮಾಡಿದೆ. ದೇವಾಲಯಗಳು ಮತ್ತು ಇತರೆ ಧಾರ್ಮಿಕ ಸಂಸ್ಥೆಗಳಿಗೆ ಅನುದಾನ ಬಿಜೆಪಿ 274.68 ಕೋಟಿ ರೂ. ನೀಡಿದರೆ, ಕಾಂಗ್ರೆಸ್‌ ಕೇವಲ 17.50 ಕೋಟಿ ರೂ. ನೀಡಿದೆ. ವಿವಿಧ ಮಠ ಹಾಗೂ ದೇವಾಲಯಗಳಿಗೆ ಮುಖ್ಯಮಂತ್ರಿಗಳ ವಿಶೇಷ ಸಹಾಯಧನದಡಿ ಬಿಜೆಪಿ 154.85 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 30 ಕೋಟಿ ರೂ. ನೀಡಿ ಅನ್ನಕ್ಕೂ ಕನ್ನ ಹಾಕಿದೆ” ಎಂದು ದೂರಿದರು.

“ಹಿಂದೂ ರುದ್ರಭೂಮಿಗಳ ನಿರ್ವಹಣೆಗೆ ಬಿಜೆಪಿ 25 ಕೋಟಿ ರೂ. ನೀಡಿದರೆ, ಕಾಂಗ್ರೆಸ್‌ 10 ಕೋಟಿ ರೂ. ಗೆ ಇಳಿಸಿದೆ. ನೇಕಾರರ ಯೋಜನೆಗೆ ಬಿಜೆಪಿ 125.77 ಕೋಟಿ ರೂ. ಕೊಟ್ಟರೆ, ಕಾಂಗ್ರೆಸ್‌ 10 ಕೋಟಿ ರೂ. ಕೊಟ್ಟಿದೆ. ಕಮಿಷನ್‌ ದಂಧೆಗಾಗಿ ಸರ್ಕಾರ ಇಡೀ ರಾಜ್ಯವನ್ನು ಕತ್ತಲೆಗೆ ದೂಡಿದೆ. ಸಚಿವ ಪ್ರಿಯಾಂಕ್‌ ಖರ್ಗೆಯವರ ಆಪ್ತರನ್ನು ಇನ್ನೂ ಬಂಧಿಸಿಲ್ಲ. ಬಹುಶಃ ಸುರಕ್ಷತೆ ದೃಷ್ಟಿಯಿಂದ ಅವರನ್ನು ಪೊಲೀಸರು ಕಬ್ಬಿನ್‌ ಗದ್ದೆಯಲ್ಲಿ ಇರಿಸಿರಬಹುದು. ಅವರ ಆಪ್ತರು ರೌಡಿಶೀಟರ್‌ ಪಟ್ಟಿಯಲ್ಲಿದ್ದು, ಆ ಪಟ್ಟಿಯಿಂದ ಹೆಸರು ತೆಗೆಸಿದ್ದೇ ಕಾಂಗ್ರೆಸ್‌ ನಾಯಕರು” ಎಂದರು.

“ಸಚಿವ ರಾಮಲಿಂಗಾರೆಡ್ಡಿ ಹಳೆಯ ಸುದ್ದಿ ಹೇಳಿದ್ದಾರೆ. ನಾನು ಸಚಿವನಾಗಿದ್ದಾಗ ಸಾರಿಗೆ ನಿಗಮಗಳನ್ನು ನಷ್ಟಕ್ಕೆ ದೂಡಲಿಲ್ಲ. ಎಲ್ಲ ಕಡೆ ಬಸ್‌ ನಿಲ್ದಾಣ ನಿರ್ಮಿಸಿ ಬಾಡಿಗೆ ಮೂಲಕ ಆದಾಯ ಬರುವಂತೆ ಮಾಡಲಾಗಿತ್ತು. ಈಗ ಸರ್ಕಾರ ಎಲ್ಲೂ ನಿಲ್ದಾಣ ನಿರ್ಮಿಸಿಲ್ಲ. ನಾನು ಸಚಿವ ಸ್ಥಾನದಿಂದ ಹೊರಬಂದಾಗ ಬಿಎಂಟಿಸಿ ಲಾಭದಲ್ಲಿತ್ತು. ಕೋವಿಡ್‌ ಸಮಯದಲ್ಲಿ ಆರ್ಥಿಕ ನಷ್ಟವಾಗಿದ್ದಾಗಲೂ ಟಿಕೆಟ್‌ ದರ ಏರಿಸಲಿಲ್ಲ. ಗ್ಯಾರಂಟಿಗಳಿಂದಾಗಿ ಈಗ ಟಿಕೆಟ್‌ ದರ ಏರಿಸಿದ್ದಾರೆ” ಎಂದು ಹೇಳಿದರು.

ಎಚ್‌ಎಂಪಿವಿ, ಸಿದ್ಧತೆ ಅಗತ್ಯ

“ಎಚ್‌ಎಂಪಿವಿ ಹೊಸ ವೈರಸ್‌ ಹರಡುತ್ತಿರುವುದರಿಂದ ಸರ್ಕಾರ ಟಾಸ್ಕ್‌ ಫೋರ್ಸ್‌ ರಚಿಸಿ ಸಿದ್ಧತೆ ಮಾಡಿಕೊಳ್ಳಬೇಕು. ಆಕ್ಸಿಜನ್‌ ವ್ಯವಸ್ಥೆ ಮಾಡಬೇಕು. ಜಿಲ್ಲಾ, ತಾಲೂಕು ಕೇಂದ್ರದಲ್ಲಿ ಅಧಿಕಾರಿಗಳು ಆಡಿಟ್‌ ಮಾಡಬೇಕು. ಸರ್ಕಾರ ಕೂಡಲೇ ಸಿದ್ಧತೆ ಮಾಡಿಕೊಳ್ಳಲಿ” ಎಂದು ಆಗ್ರಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments