ಬಹುಭಾಷಾ ನಟ ಕಮಲ್ ಹಾಸನ್ ನಟಿಸಿರುವ ಥಗ್ ಲೈಫ್ ಚಿತ್ರ ಬಿಡುಗಡೆಗೆ ಪೊಲೀಸ್ ರಕ್ಷಣೆ ಕೋರಿರುವುದಕ್ಕೆ ಹೈಕೋರ್ಟ್ ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ʼಥಗ್ ಲೈಫ್ʼ ಸಿನಿಮಾ ಹಂಚಿಕೆ ಮತ್ತು ಬಿಡುಗಡೆಗೆ ಅಗತ್ಯ ಬಂದೋಬಸ್ತ್ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ರಾಜ್ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ ನಾರಾಯಣ್ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಥಗ್ ಲೈಫ್ ಚಿತ್ರ ನಿರ್ಮಾಣ ಸಂಸ್ಥೆ ಪ್ರತಿನಿಧಿಸಿದ್ದ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು “ಕಮಲ್ ಹಾಸನ್ ಅವರು ನೀಡಿರುವ ಹೇಳಿಕೆಯನ್ನು ಆಧರಿಸಿ ಥಗ್ ಲೈಫ್ ಚಿತ್ರದ ಬಿಡುಗಡೆಗೆ ನಿಷೇಧ ವಿಧಿಸಲಾಗಿದೆ. ಇಡೀ ಹೇಳಿಕೆಯನ್ನು ನಾನು ನೋಡಿದ್ದೇನೆ. ಕನ್ನಡ ಚಿತ್ರರಂಗದ ಸೂಪರ್ಸ್ಟಾರ್ ಶಿವರಾಜ್ ಕುಮಾರ್ ಅವರು ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಮಲ್ ನೀಡಿರುವ ಹೇಳಿಕೆಯನ್ನು ವ್ಯಾಪ್ತಿ ಮೀರಿ ಅರ್ಥೈಸಿಕೊಂಡು ಅವರು ಕನ್ನಡದ ವಿರುದ್ಧ ಏನೋ ಹೇಳಿದ್ದಾರೆ ಎಂದು ಹೇಳುವುದು ಸರಿಯಲ್ಲ. ಹೇಳಿಕೆ ನೀಡಿದ ನಂತರ ಕಮಲ್ ಹಾಸನ್ ಸ್ಪಷ್ಟನೆ ನೀಡಿದ್ದಾರೆ. ಕಮಲ್ ಯಾವ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದನ್ನು ನೋಡಬೇಕು” ಎಂದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಹೈಕೋರ್ಟ್, “ಕನ್ನಡ ತಮಿಳಿನಿಂದ ಹುಟ್ಟಿದೆ ಎಂಬ ಹೇಳಿಕೆ ನೀಡಲು ಕಮಲ್ ಹಾಸನ್ ಭಾಷಾ ತಜ್ಞರೇ? ಅಥವಾ ಇತಿಹಾಸಕಾರರೇ?” ಎನ್ನುವ ಮೂಲಕ ಹರಿಹಾಯ್ದಿದೆ.
“ನನ್ನ ಪ್ರಕಾರ ಜಲ, ನೆಲ, ಭಾಷೆ ಈ ಮೂರು ವಿಚಾರಗಳು ಯಾವುದೇ ವ್ಯಕ್ತಿಗೆ ಅತ್ಯಂತ ಮುಖ್ಯ. ಈ ದೇಶ ವಿಭಜನೆಯಾಗಿದ್ದುದು ಭಾಷೆಯ ಆಧಾರದಲ್ಲಿ. ರಾಜ್ಯಗಳು ಭಾಷೆಗಳ ಮೇಲೆ ರಚನೆಯಾಗಿವೆ. ಇದು ಭಾಷೆಯ ಪ್ರಾಮುಖ್ಯತೆಯನ್ನು ತಿಳಿಸುತ್ತದೆ” ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಹೇಳಿದರು.
“ವಿವಾದ ಸೃಷ್ಟಿಯಾದ ನಂತರ ಕಮಲ್ ಹಾಸನ್ ಬರೆದಿರುವ ಪ್ರತಿಕ್ರಿಯೆಯಲ್ಲಿ ಕ್ಷಮೆ ಕೋರಿದ್ದರೆ ಅದನ್ನು ಒಪ್ಪಿಕೊಳ್ಳಲಾಗುವುದು. ಇದರಲ್ಲಿ ಯಾವುದೇ ಕ್ಷಮೆ ಇಲ್ಲ. ನೀವು ಕಮಲ್ ಹಾಸನ್ ಅಥವಾ ಬೇರೆ ಯಾರೇ ಆಗಿರಬಹುದು. ಜನರ ಭಾವನೆಗಳನ್ನು ನೀವು ನೋಯಿಸಲಾಗದು. ಭಾಷೆಯ ಆಧಾರದಲ್ಲಿ ಈ ದೇಶ ವಿಭಜನೆಯಾಗಿದೆ. ಸಾರ್ವಜನಿಕ ವ್ಯಕ್ತಿತ್ವದ ಕಮಲ್ ಹಾಸನ್ ಅವರು ಅಂಥ ಹೇಳಿಕೆ ನೀಡಲಾಗದು. ಇದರಿಂದ ಅಶಾಂತಿ ಮತ್ತು ಕ್ಷೋಭೆ ಉಂಟಾಗಿದೆ” ಎಂದರು.
“1950ರಲ್ಲಿ ರಾಜಗೋಪಾಲಚಾರಿಯವರು ಇಂಥದ್ಧೇ ಹೇಳಿಕೆ ನೀಡಿ, ಆನಂತರ ಬಹಿರಂಗವಾಗಿ ಕ್ಷಮೆ ಕೋರಿದ್ದರು. ಈಗ ಸಿನಿಮಾ ಬಿಡುಗಡೆಗೆ ಕಮಲ್ ನಿರ್ಮಾಣ ಸಂಸ್ಥೆ ರಕ್ಷಣೆ ಕೋರುತ್ತಿದ್ದಾರೆ. ಕ್ಷಮೆ ಕೇಳಿದ್ದರೆ ಇದು ಇರುತ್ತಲೇ ಇರಲಿಲ್ಲ” ಎಂದು ನ್ಯಾಯಾಧೀಶರು ಹೇಳಿದರು.