ಶುಕ್ರವಾರ ಇಸ್ರೇಲ್ ನಡೆಸಿದ ಮಾರಣಾಂತಿಕ ದಾಳಿಗೆ ಇರಾನ್ ಪ್ರತ್ಯುತ್ತರ ನೀಡಿದೆ. ಶನಿವಾರ ಬೆಳಗ್ಗೆ ಇಸ್ರೇಲ್ ಮೇಲೆ ಇರಾನ್ ಹೊಸದಾಗಿ ಕ್ಷಿಪಣಿ ದಾಳಿಯನ್ನು ಆರಂಭಿಸಿದೆ.
ವಿಶೇಷವಾಗಿ, ಯಹೂದಿ ರಾಷ್ಟ್ರದ ಉತ್ತರ ಭಾಗವನ್ನು ಗುರಿಯಾಗಿಸಿಕೊಂಡು ಇರಾನ್ ಈ ದಾಳಿ ನಡೆಸುತ್ತಿದೆ. ಇಸ್ರೇಲ್ ರಾಜಧಾನಿ ಟೆಲ್ ಅವೀವ್ನಲ್ಲಿ ನಡೆದ ಡ್ರೋನ್ ಹಾಗೂ ಕ್ಷಿಪಣಿ ದಾಳಿಯಲ್ಲಿ ಹಲವಾರು ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ದಾಳಿ ಕುರಿತು ಮಾಹಿತಿ ನೀಡಿರುವ ಇರಾನ್ ಸೇನೆ, ‘ಇಸ್ರೇಲ್ ತನ್ನ ಪರಮಾಣು ನೆಲೆಗಳ ಮೇಲೆ ನೇರ ದಾಳಿ ನಡೆಸಿದೆ. ಇದರಲ್ಲಿ ಪರಮಾಣು ತಜ್ಞರು ಸೇರಿದಂತೆ ಪ್ರಮುಖರು ಹತ್ಯೆಗೆ ಈಡಾಗಿದ್ದಾರೆ. ಇದು ನಮಗೆ ಆಘಾತ ಉಂಟುಮಾಡಿದೆ. ಇದಕ್ಕೆ ನಾವು ಪ್ರತಿಕಾರ ತೀರಿಸಿಕೊಳ್ಳುತ್ತೇವೆ. ಈಗಾಗಲೇ ಇಸ್ರೇಲ್ನ ಹಲವು ನಗರಗಳ ಮೇಲೆ ನೂರಾರು ಕ್ಷಿಪಣಿಗಳನ್ನು ಹಾರಿಸಲಾಗಿದೆ’ ಎಂದು ಹೇಳಿದೆ.
ಇರಾನ್ ವಿರುದ್ಧ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ ನಂತರ ಪಶ್ಚಿಮ ಏಷ್ಯಾ ಸಂಘರ್ಷದತ್ತ ಸಾಗಿದೆ. ಶುಕ್ರವಾರ ಇರಾನ್ನ ಪರಮಾಣು ಘಟಕ ಮತ್ತು ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ದಾಳಿ 78 ಜನ ಮೃತಪಟ್ಟಿದ್ದು, 320ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಇರಾನ್ ರಾಯಭಾರಿ ಮಾಹಿತಿ ನೀಡಿದ್ದಾರೆ.
ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿಯಲ್ಲಿ ಇರಾನ್ನ ಸೇನಾಪಡೆಗಳ ಮುಖ್ಯಸ್ಥನ ಹತ್ಯೆಗೈಯಲಾಗಿದೆ ಎಂದು ವರದಿಯಾಗಿದೆ. ಈ ಕುರಿತು ಇಸ್ರೇಲ್ ಸೇನೆ ತಿಳಿಸಿದ್ದು, ವೈಮಾನಿಕ ದಾಳಿಯಲ್ಲಿ ಇರಾನ್ನ ಸೇನಾಪಡೆಗಳ ಮುಖ್ಯಸ್ಥ ಮೊಹಮ್ಮದ್ ಬಘೇರಿ ಹತ್ಯೆಗೀಡಾಗಿದ್ದಾನೆ ಎಂದು ಹೇಳಿದೆ. ಇರಾನ್ ಪರಮಾಣು ಯೋಜನೆಯ ಇಬ್ಬರು ವಿಜ್ಞಾನಿಗಳು ಹತರಾಗಿರುವ ಸಾಧ್ಯತೆಯಿದೆ ಎಂದೂ ಸಹ ಇಸ್ರೇಲ್ ಸೇನೆ ಹೇಳಿದೆ.
ಹಾಗೆಯೇ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮುಖ್ಯಸ್ಥ ಜನರಲ್ ಹುಸೇನ್ ಸಲಾಮಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಸರ್ಕಾರಿ ಟಿವಿ ದೃಢಪಡಿಸಿದೆ. ರೆವಲ್ಯೂಷನರಿ ಗಾರ್ಡ್ಸ್, ಇರಾನ್ ದೇಶದ ಶಕ್ತಿಕೇಂದ್ರ ಎಂದು ಬಿಂಬಿತವಾಗಿದೆ. ಹಾಗಾಗಿ, ಇದನ್ನೇ ಕೇಂದ್ರೀಕರಿಸಿ ಇಸ್ರೇಲ್ ದಾಳಿ ನಡೆಸಿದ್ದು, ಇರಾನ್ ದೇಶದ ಸ್ವಾಭಿಮಾನಕ್ಕೆ ದೊಡ್ಡ ಪೆಟ್ಟು ಕೊಟ್ಟಂತಾಗಿದೆ.