ಮಾತಿನ ಸಮರದಿಂದ ಕಂಗಾಲಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಶಾಂತಿ ಮಂತ್ರ ಭೋಧಿಸಿರುವ ಹಿರಿಯ ನಾಯಕ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಪಕ್ಷ ಮತ್ತು ಸರ್ಕಾರದ ಹಿತದೃಷ್ಟಿಯಿಂದ ಸಿಎಂ, ಡಿಸಿಎಂ ಮತ್ತು ನಾನು ಸೇರಿದಂತೆ ಎಲ್ಲರೂ ಮೌನವಾಗಿರಬೇಕು ಎಂದು ಹೇಳಿದ್ದಾರೆ.
ಪಕ್ಷದ ಹಲವು ಸಚಿವರು ಮತ್ತು ಶಾಸಕರು ಕಳೆದೆರಡು ವರ್ಷಗಳಿಂದ ಸಿಎಂ ಇಲ್ಲವೇ ಡಿಸಿಎಂ ಪರವಾಗಿ ಹೇಳಿಕೆಗಳನ್ನು ನೀಡುತ್ತಾ ಗೊಂದಲ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿ ಸರ್ಕಾರದ ಹಿರಿಯ ಸಚಿವರೊಬ್ಬರು ಎಚ್ಚರಿಕೆ ಮಿಶ್ರಿತ ಶಾಂತಿ ಮಂತ್ರ ಭೋಧಿಸಿದ್ದಾರೆ.
“ಕಳೆದ ಕೆಲ ದಿನಗಳಿಂದ ಸಚಿವರು ಮತ್ತು ಶಾಸಕರ ಮಾತಿನ ಬಾಂಬುಗಳಿಂದ ಪಕ್ಷ ಮತ್ತು ಸರ್ಕಾರ ಕಂಗಾಲಾಗಿರುವ ಹಿನ್ನೆಲೆಯಲ್ಲಿ ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಮತ್ತು ಸರ್ಕಾರದ ಹಿತದೃಷ್ಟಿಯಿಂದ ಎಲ್ಲರೂ ಮೌನವಾಗಿರುವುದು ಒಳ್ಳೆಯದು” ಎಂದರು.
“ಸಿಎಂ,ಡಿಸಿಎಂ ಅಂತಲ್ಲ,ನಾನು ಸೇರಿದಂತೆ ಎಲ್ಲ ಸಚಿವರು,ಶಾಸಕರು ಮೌನವಾಗಿದ್ದರೆ ಒಳ್ಲೆಯದು ಎಂದ ಅವರು,ಇಂತಹ ಹೇಳಿಕೆಗಳ ಸಮರಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಹೈಕಮಾಂಡ್ ಬ್ರೇಕ್ ಹಾಕಬೇಕು.ಯಾರೂ ಮಾತನಾಡಿದಂತೆ ಸೂಚನೆ ನೀಡಬೇಕು” ಎಂದು ಒತ್ತಾಯ ಮಾಡಿದರು.
“ಸುಮ್ಮನಿದ್ದರೆ 2028 ರಲ್ಲೂ ನಾವೂ ಅಧಿಕಾರಕ್ಕೆ ಬರುತ್ತೇವೆ. 2033 ರವರೆಗೂ ನಮ್ಮದೇ ಸರ್ಕಾರ ಇರುತ್ತದೆ. ಬಿಜೆಪಿ ಮತ್ತು ಜೆಡಿಎಸ್ ಖಾಯಂ ಪ್ರತಿಪಕ್ಷಗಳಾಗಿ ಉಳಿದುಕೊಳ್ಳಲಿವೆ” ಎಂದರು.
“ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನ ನಮಗೆ ಬಹುಮತ ನೀಡಿದ್ದಾರೆ. ನೂರಾ ಮೂವತ್ತೈದು ಕ್ಷೇತ್ರಗಳಲ್ಲಿ ಗೆಲುವು ದಕ್ಕಿಸಿಕೊಟ್ಟಿದ್ದಾರೆ. ಹೀಗಿರುವಾಗ ನಾವು ಹೆಚ್ಚು ಮಾತನಾಡದೆ ಕೆಲಸ ಮಾಡುವುದು ಒಳ್ಳೆಯದು” ಎಂದು ನುಡಿದರು.
ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹಲವು ಬಣಗಳಾಗಿ ಒಡೆದು ಹೋಗಿದೆ ಎಂಬ ಪ್ರತಿಪಕ್ಷ ಬಿಜೆಪಿ ನಾಯಕರ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, “ಬಿಜೆಪಿಯವರು ಮೊದಲು ತಮ್ಮ ಮನೆ ನೆಟ್ಟಗಿದೆಯಾ? ಎಂದು ನೋಡಿಕೊಳ್ಳಲಿ. ಇವತ್ತು ಬಿಜೆಪಿಯೇ ಮೂರ್ನಾಲ್ಕು ಬಣಗಳಾಗಿ ಒಡೆದು ಹೋಗಿದೆ. ಏನೇ ಮಾಡಿದರೂ ಬಿಜೆಪಿ ಪ್ರತಿಪಕ್ಷದ ಸ್ಥಾನದಲ್ಲಿ ಕೂರುವುದು ಗ್ಯಾರಂಟಿ” ಎಂದು ಹೇಳಿದರು.