ಸಂಸ್ಕೃತಿ, ಮಾತೆ ಎನ್ನುತ್ತಾ ಮಹಿಳೆಯರ ರಕ್ಷಣೆಯ ನಕಲಿ ಗುತ್ತಿಗೆ ಪಡೆದಿದ್ದ ಬಿಜೆಪಿಯಿಂದ,ಇತ್ತೀಚಿಗೆ ಸಬ್ ಕಾಂಟ್ರ್ಯಕ್ಟರ್ ಪಡೆದಿರುವಂತೆ ವರ್ತಿಸುತ್ತಿರುವ ಈ ಛಲವೇ ಇಲ್ಲದ ಛಲವಾದಿ ನಾರಾಯಣಸ್ವಾಮಿ
ಪುಂಖಾನುಪುಂಖವಾಗಿ ಮಹಿಳೆಯರ ಬಗ್ಗೆ ಮಾತಾಡುವ ಕನಿಷ್ಟ ನೈತಿಕತೆಯನ್ನಾದರೂ ಉಳಿಸಿಕೊಂಡಿದ್ದಾರೆಯೇ? ಮಹಿಳೆಯರನ್ನು ಪ್ರತಿ ಕ್ಷಣವೂ ಅವಮಾನಿಸುವ, ಎರಡನೇ ದರ್ಜೆಯಾಗಿ ಕಾಣುವ ಪ್ರಧಾನಿಯಿಂದ ಹಿಡಿದು ರಾಜ್ಯದ ಬಿಜೆಪಿಯ “ಹ್ಯಾಬಿಚುವಲ್ ಅಫೆಂಡರ್”ಗಳಿಂದ ನಾನು ಪಾಠ ಕಲಿಯಬೇಕಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.
“ಚಿಂತಕರ ಚಾವಡಿ” ಎನಿಸಿಕೊಂಡಿರುವ ಸದನದಲ್ಲಿ ನಾರಾಯಣಸ್ವಾಮಿ ಸಮ್ಮುಖದಲ್ಲೇ, ಬಿಜೆಪಿಯ ಸದಸ್ಯನೊಬ್ಬ ಮಹಿಳಾ ಸಚಿವರಿಗೆ ಬಳಸಿದ ಅತ್ಯಂತ ಹೊಲಸು,ಅಸಭ್ಯ ಹಾಗೂ ಅಸಂಸದೀಯ ಪದ ಕೇಳಿಯೂ ತೇಪೆ ಮುಖ ಹಾಕಿಕೊಂಡು ಕೂತಾಗ ಮಹಿಳಾ ನಕಲಿ ರಕ್ಷಣೆಯ ಸಬ್ ಕಾಂಟ್ರ್ಯಕ್ಟರ್ ಗೆ ರಿನಿವಲ್ ಸಿಕ್ಕರಲಿಲ್ವಾ? ಅಥವಾ ಆಗ ಇಡೀ ಮಹಿಳೆಯರ ಕುಲಕ್ಕೆ ಗೌರವಕ್ಕೆ ಅಪಮಾನಿಸಲಿಲ್ವಾ? ಆಗ ಪ್ರಶ್ನೆ ಮಾಡುವ ದೈರ್ಯ ಅಥವಾ “ಛಲ” ಇರಲಿಲ್ವೇ” ಎಂದು ಎಕ್ಸ್ ತಾಣದಲ್ಲಿ ಪ್ರಶ್ನಿಸಿದ್ದಾರೆ.
“ಆಪರೇಷನ್ ಸಿಂಧೂರ”ದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸಿದೇ ಭಯೋತ್ಪಾದಕರ ವಿರುದ್ಧ ಹೋರಾಡಿ ನಾಯಕತ್ವ ನೀಡಿದ, ನಮ್ಮ ಹೆಮ್ಮೆಯ ಕರ್ನಲ್ ಸೋಫಿಯಾ ಖುರೇಷಿಯ ಬಗ್ಗೆ ಬಿಜೆಪಿಯ ಸಚಿವನೇ ” ಭಯೋತ್ಪಾದಕರ ಸಹೋದರಿ”ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದಾಗ ಎಲ್ಲಿ ಅಡಗಿತ್ತು ಈ ಉತ್ತರ ಕುಮಾರನ ಪೌರುಷ? ಸುಪ್ರೀಂಕೋರ್ಟ್ ಸ್ವಯಂಕೃತ ದೂರು ದಾಖಲಿಸಿಕೊಂಡು ಛೀಮಾರಿ ಹಾಕಿದರೂ ಇಲ್ಲಿವರೆಗೂ ಬಿಜೆಪಿಯವರು ತುಟಿ ಬಿಚ್ಚುತ್ತಿಲ್ಲ” ಎಂದು ಕುಟುಕಿದ್ದಾರೆ.
“ದೇಶದ ರಾಷ್ಟ್ರಪತಿಗಳಿಂದಲೇ ಅತ್ಯುತ್ತಮ ಅಧಿಕಾರಿ ಎಂದು ಶ್ಲಾಘನೆ ಪಡೆದ ಕಲ್ಬುರ್ಗಿಯ ಜಿಲ್ಲಾಧಿಕಾರಿಯನ್ನು ಬಿಜೆಪಿ ಪಕ್ಷದ ಪರಿಷತ್ ಸದಸ್ಯ”ಪಾಕಿಸ್ತಾನದಿಂದ ಬಂದವರಂತೆ ಕಾಣುತ್ತಾರೆ”ಎಂದು ಅವರ ಆತ್ಮಸ್ತೈರ್ಯವನ್ನೇ ಕುಗ್ಗಿಸಿ ಅವಮಾನಿಸಿದಾಗ ಕನಿಷ್ಟಪಕ್ಷ ಖಂಡಿಸುವ ಧೈರ್ಯವಾದರೂ ನನ್ನಲ್ಲಿ ಉಳಿಸಿಕೊಂಡಿಲ್ಲ ಎಂದು ಸಾಬೀತು ಮಾಡಿದ್ದು ಮರೆತಂತಿದೆ. ರಾಜ್ಯದ ಉನ್ನತ ಸ್ಥಾನದಲ್ಲಿ ಮಹಿಳಾ ಅಧಿಕಾರಿಯನ್ನು “ರಾತ್ರಿ ಸರ್ಕಾರದ ಕೆಲಸ, ಹಗಲು ಸಿದ್ದರಾಮಯ್ಯನವರ ಕೆಲಸ ಮಾಡ್ತಾರೆ” ಎಂದು ಅತ್ಯಂತ ಕೀಳು ಮನಸ್ಥಿತಿಯ ಮಾತಿಗಳನ್ನಾಡಿದ ಬಿಜೆಪಿಯ ಪರಿಷತ್ ಸದಸ್ಯನ ಮಾತನ್ನು ಕೇಳಿಯ ಗಹಗಹಿಸಿ ನಕ್ಕ ನಿಮ್ಮ ಹೀನ ಮನಸ್ಥಿತಿ ರಾಜ್ಯದ ಜನ ಮರೆತಿಲ್ಲ. ಹೊಲಸು ಮಾತುಗಳನ್ನು ಕೇಳಿಯೂ ಖಂಡಿಸದೆ ಯಾವ “ಕೇಶವನ ಕೃಪದ” ಮೂಲೆಯಲ್ಲಿ ಅಡುಗಿ ಕುಳಿತುಕೊಂಡಿದ್ರಿ” ಎಂದು ಲೇವಡಿ ಮಾಡಿದ್ದಾರೆ.
“ಮಹಿಳೆಯರಿಗೆ ಗೌರವ ನೀಡುವುದನ್ನ ಬಿಜೆಪಿಯ ಮನುವಾದಿ ಮನಸ್ಥಿತಿಯವರಿಂದ ಕಲಿಯುವ ದಾರಿದ್ರ್ಯ ನನಗೆ ಬಂದಿಲ್ಲ. ನನ್ನ ಹಿನ್ನಡೆ ಮುನ್ನಡೆಯ ಬಗ್ಗೆ ಬಿಜೆಪಿ ಪಕ್ಷದವರು ಹೆಚ್ಚು ತಲೆಕೆಡಸಿಕೊಂಡು ಮಾನಸಿಕವಾಗಿರುವಂತಿದೆ. ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನ ಮಾನ ಸಿಗಲು ನಿಮ್ಮಂತೆ ಬಳಸಿ ಬಿಸಾಡಿದ ಚೆಡ್ಡಿ ಹೊತ್ತು ತಿರುಗಿದಂತೆ ಅಲ್ಲ. ನನ್ನ ಹಿನ್ನಡೆ ಯಾವತ್ತೂ ಆಗುವುದಿಲ್ಲ, ಸೈದ್ದಾಂತಿಕ ಬದ್ಧತೆ ಸತ್ಯ,ಪ್ರಾಮಾಣಿಕತೆ, ಪಕ್ಷನಿಷ್ಠೆಗೆ ಯಾವತ್ತೂ ಸ್ಥಾನಮಾನ ಬೇಕಾಗಿಲ್ಲ, ಸಾಮಾಜಿಕ ಬದ್ದತೆ, ಎದೆಗಾರಿಕೆ ಇರಬೇಕು. ಅದು ನನ್ನಲ್ಲಿ ಹುಟ್ಟಿನೊಂದಿಗೆ ಬಂದಿದೆ. ನಿಮ್ಮ ಹಾಗೇ ಅಧಿಕಾರ, ಆಸೆ, ಆಮೀಷಕ್ಕೆ ಒಳಗಾಗಿ ಸಿದ್ದಾಂತವನ್ನೇ ಬದಲಾಯಿಸಿ, ಬೆಳಸಿದವರನ್ನೇ ದೂರುತ್ತಾ ರಾಜಕೀಯ ನಡೆಸುವ ಹೀನ ಸಂಸ್ಕೃತಿಯಂತೂ ನನ್ನದಲ್ಲ” ಎಂದಿದ್ದಾರೆ.