ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಹನಿಟ್ರ್ಯಾಪ್ ಗದ್ದಲ ಶುಕ್ರವಾರವೂ ಸದನದಲ್ಲಿ ಗದ್ದಲ ಸೃಷ್ಟಿಸಿತು. ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿ ವಿಧಾನಸಭೆಯ ಸದನದ ಬಾವಿಗೆ ಇಳಿದು ಬಿಜೆಪಿ ಮತ್ತು ಜಡಿಎಸ್ ಸದಸ್ಯರು ಧರಣಿ ನಡೆಸಿದರು.
ಸದನದ ಭಾವಿಯಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಸಿ.ಡಿ ಪ್ರದರ್ಶನ ಮಾಡಿದರು. ಬಿಜೆಪಿ ಹಾಗೂ ಜೆಡಿಎಸ್ ಸದಸ್ಯದು ಸಿ.ಡಿ ಮಾಲೀಕ ಯಾರಯ್ಯ ಎಂದು ಘೋಷಣೆ ಕೂಗಿದರು. ‘ಕರಿಮಣಿ ಮಾಲೀಕ ಯಾರಿಲ್ಲ, ಸಿ.ಡಿ ಮಾಲೀಕ ಯಾರಯ್ಯ’ ಎಂದು ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರಹಾಕಿದರು.
ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಧರಣಿಯ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮೇಲಿನ ಉತ್ತರವನ್ನು ಓದಿದರು.
ಬಿಜೆಪಿ ಶಾಸಕ ಮುನಿರತ್ನ ಏರುಧ್ವನಿಯಲ್ಲಿ, “ಸಿಡಿ ಫ್ಯಾಕ್ಟರಿ ಎಂದು ಘೋಷಣೆ ಕೂಗಿ, ಸದಾಶಿವನಗರ ಸಿಡಿ ಫ್ಯಾಕ್ಟರಿಯನ್ನು ಬಂದ್ ಮಾಡಿ” ಎಂದು ಆಗ್ರಹಿಸಿದರು.
ನಿಮ್ಮ ಕ್ಯಾಬಿನೆಟ್ನ ಒಬ್ಬ ಸಚಿವರ ಮರ್ಯಾದೆ ಹೋಗುತ್ತಿದೆ. ಅದನ್ನು ರಕ್ಷಣೆ ಮಾಡಲು ತಯಾರಿಲ್ಲ ಎಂದು ಉತ್ತರ ಕೊಡುತ್ತಿದ್ದೀರಿ. ರಾಜಣ್ಣ ವಾಲ್ಮೀಕಿ ಜನಾಂಗದ ನಾಯಕರ ಅವರ ರಕ್ಷಣೆ ಆಗುತ್ತಿಲ್ಲ. ಇನ್ನೂ ರಾಜ್ಯದ ಜನರ ರಕ್ಷಣೆ ಹೇಗೆ ಮಾಡುತ್ತೀರಾ ಎಂದು ಜೆಡಿಎಸ್ನ ಸುರೇಶ್ ಬಾಬು ವಾಗ್ದಾಳಿ ನಡೆಸಿದರು.