ರಾಜ್ಯ ರಾಜಕಾರಣದಲ್ಲಿ ಇದೀಗ ಹನಿಟ್ರ್ಯಾಪ್ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡತೊಡಗಿದೆ. ಕಾಂಗ್ರೆಸ್ ಪ್ರಭಾವಿ ನಾಯಕರ ಆಣತಿಯಂತೆ ಈ ಪ್ರಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಮಂತ್ರಿಗಳನ್ನು ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿಸಲು ಯತ್ನ ನಡೆದಿದೆ. ಇದು ಅತ್ಯಂತ ಕೆಟ್ಟ ರಾಜಕಾರಣವಾಗಿದ್ದು, ಇದರ ವಿರುದ್ಧ ಹೈಕಮಾಂಡ್ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ದೂರು ನೀಡಿರುವ ಬೆನ್ನಲ್ಲೇ ಸಚಿವ ಸತೀಶ ಜಾರಕಿಹೊಳಿ ಇದನ್ನು ಬೆಂಬಲಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳಿ, “ಪ್ರಭಾವಿ ಸಚಿವರ ಮೇಲೆ ಎರಡು ಸಲ ಹನಿಟ್ರ್ಯಾಪ್ ಯತ್ನ ಆಗಿದೆ. ಅದನ್ನು ಕೆಲವರು ಬಂಡವಾಳ ಮಾಡಿಕೊಂಡಿದ್ದಾರೆ. ಸಂಬಂಧಪಟ್ಟ ಸಚಿವರಿಗೆ ಮುಖ್ಯಮಂತ್ರಿ ಮತ್ತು ಹೈಕಮಾಂಡ್ಗೆ ದೂರು ಕೊಡಲು ಹೇಳಿದ್ದೇನೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ತಕ್ಷಣವೇ ಇದಕ್ಕೆ ಕಡಿವಾಣ ಹಾಕಬೇಕು” ಎಂದು ಒತ್ತಾಯಿಸಿದರು.
“ಹನಿಟ್ರ್ಯಾಪ್ ಪ್ರಕರಣ ದೊಡ್ಡ ಮಟ್ಟದಲ್ಲಿ ನಡೆದಿದೆ. ಇದರಲ್ಲಿ ಕೇವಲ ಆಡಳಿತರೂಢ ಕಾಂಗ್ರೆಸ್ ಪಕ್ಷದ ನಾಯಕರು ಮಾತ್ರ ಸಿಲುಕಿಲ್ಲ. ಪ್ರತಿಪಕ್ಷಗಳ ಹಲವು ಮುಖಂಡರುಗಳು ಕೂಡಾ ಇದರಲ್ಲಿ ಸಿಲುಕಿದ್ದಾರೆ. ಈ ಬಗ್ಗೆ ಎಲ್ಲರಲ್ಲೂ ಮಾಹಿತಿ ಇದೆ. ತಾವು ಎಲ್ಲ ವಿವರಗಳೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಹಾಗೆಯೇ ಗೃಹ ಸಚಿವರಿಗೂ ವಿವರ ನೀಡಿದ್ದು ಕಡಿವಾಣ ಹಾಕಲು ಆಗ್ರಹಿಸಿದ್ದೇನೆ” ಎಂದು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ನಿನ್ನೆಯಷ್ಟೇ ಹೈಕಮಾಂಡ್ ನಾಯಕರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಇದೀಗ ಮಂತ್ರಿ ಸತೀಶ್ ಜಾರಕಿಹೊಳಿ ಕೂಡ ಇದರ ವಿರುದ್ಧ ಧ್ವನಿ ಎತ್ತಿರುವುದು ಕುತೂಹಲ ಮೂಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಬ್ಯಾಟಿಂಗ್ ಮಾಡುತ್ತಿರುವ ತುಮಕೂರು ಜಿಲ್ಲೆಯ ಪ್ರಭಾವಿ ಮಂತ್ರಿಯೊಬ್ಬರನ್ನು ಈ ಜಾಲದಲ್ಲಿ ಸಿಲುಕಿಸಲು ಎರಡು ಬಾರಿ ಪ್ರಯತ್ನ ನಡೆದಿದೆ ಒಮ್ಮೆ ಬೆಂಗಳೂರಿನಲ್ಲಿ ಮತ್ತೊಮ್ಮೆ ತುಮಕೂರಿನಲ್ಲೂ ಇಂತಹ ಯತ್ನ ನಡೆದಿದೆ. ಹನಿಟ್ರ್ಯಾಪ್ ಬಗ್ಗೆ ಅವರಿಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಎಚ್ಚರಗೊಂಡಿದ್ದಾರೆ ಎನ್ನಲಾಗಿದೆ.