ಕೈಗಾರಿಕಾ ಬೆಳವಣಿಗೆಗೆ ಒತ್ತು ನೀಡಿರುವ ರಾಜ್ಯ ಸರಕಾರವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರ ಕೋಲಾರ ಅಥವಾ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಫಾರ್ಮಸುಟಿಕಲ್ ಪಾರ್ಕ್ ಸ್ಥಾಪಿಸಲು ತೀರ್ಮಾನಿಸಿದೆ. ಇದಕ್ಕೆ ಔಷಧ ತಯಾರಿಕಾ ಕ್ಷೇತ್ರದಲ್ಲಿರುವ ಪರಿಣತ ಉದ್ಯಮಿಗಳು ಮತ್ತು ವಿಜ್ಞಾನಿಗಳ ಸಲಹೆಗಳನ್ನು ಪಡೆಯಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಅವರು ಬುಧವಾರ ಬೆಂಗಳೂರಿನ ಖನಿಜ ಭವನದಲ್ಲಿ ನಡೆದ ಇಂಡಸ್ಟ್ರಿ 5.0 ಮತ್ತು ಫಾರ್ಮಾಸುಟಿಕಲ್ಸ್ ವಿಷನ್ ಗ್ರೂಪ್ಗಳ ವರ್ಚುವಲ್ ಸಭೆಯಲ್ಲಿ ಪಾಲ್ಗೊಂಡು, ವಿವಿಧ ಔಷಧ ತಯಾರಿಕೆ ಕಂಪನಿಗಳ ಪ್ರಮುಖರೊಂದಿಗೆ ಮಾತನಾಡಿದರು. ಸಚಿವರ ಈ ಘೋಷಣೆಯನ್ನು ಉದ್ಯಮಿಗಳು ಸ್ವಾಗತಿಸಿದ್ದಾರೆ.
“ವಿದೇಶಿ ಹೂಡಿಕೆದಾರರು ಭಾರತದಲ್ಲಿ ಬಂಡವಾಳ ಹೂಡಲು ಹತ್ತು ಕ್ಷೇತ್ರಗಳನ್ನು ಆಕರ್ಷಣೀಯವೆಂದು ಗುರುತಿಸಿದ್ದು, ಇವುಗಳಲ್ಲಿ ಫಾರ್ಮಸುಟಿಕಲ್ಸ್ ಕೂಡ ಒಂದಾಗಿದೆ. ಈ ಕ್ಷೇತ್ರವು ವರ್ಷಕ್ಕೆ ಶೇ.11ರ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದ್ದು, ಮುಂದಿನ ಆರು ವರ್ಷಗಳಲ್ಲಿ ಇದರ ವಾರ್ಷಿಕ ವಹಿವಾಟು 130 ಬಿಲಿಯನ್ ಡಾಲರ್ ಮುಟ್ಟಲಿದೆ. ಕೈಗೆಟುಕುವಂತಹ ಔಷಧಿಗಳು, ಲಸಿಕೆಗಳು ಮತ್ತು ಔಷಧೋತ್ಪನ್ನಗಳ ಗರಿಷ್ಠ ರಫ್ತು ವಹಿವಾಟು ಇದಕ್ಕೆ ಕಾರಣಗಳಾಗಿವೆ” ಎಂದು ತಿಳಿಸಿದ್ದಾರೆ.
“ಔಷಧ ಕ್ಷೇತ್ರದಿಂದ ಬರುತ್ತಿರುವ ವರಮಾನದಲ್ಲಿ ರಾಜ್ಯದ ಕೊಡುಗೆ ಶೇ.11ರಷ್ಟಿದೆ. ಜೊತೆಗೆ ಬಯೋಟೆಕ್ ವಲಯದ ಆದಾಯ ಮತ್ತು ನಿರ್ಯಾತದಲ್ಲಿ ನಮ್ಮ ಕೊಡುಗೆ ಶೇ.60ರಷ್ಟಿದೆ. ಬೇರೆ ಯಾವ ರಾಜ್ಯಗಳೂ ಈ ವಿಷಯದಲ್ಲಿ ನಮ್ಮ ಸನಿಹದಲ್ಲೂ ಇಲ್ಲ. ಈ ಸಾಧನೆಯನ್ನು ಇನ್ನಷ್ಟು ವ್ಯಾಪಕಗೊಳಿಸಿ, ಬಂಡವಾಳವನ್ನು ಆಕರ್ಷಿಸಲಾಗುವುದು” ಎಂದು ನುಡಿದರು.
ಕ್ವಿನ್ ಸಿಟಿಯಲ್ಲಿ ನಾವೀನ್ಯತೆಗೆ ಆದ್ಯತೆ
ಇಂಡಸ್ಟ್ರಿ 5.0 ವಿಷನ್ ಗ್ರೂಪ್ ಸಭೆಯಲ್ಲಿ ಮಾತನಾಡಿದ ಎಂ ಬಿ ಪಾಟೀಲ, “ಡಾಬಸಪೇಟೆ ಬಳಿ ಅಸ್ತಿತ್ವಕ್ಕೆ ಬರುತ್ತಿರುವ ಕ್ವಿನ್ ಸಿಟಿಯನ್ನು ಜಾಗತಿಕ ಮಟ್ಟದ ನಾವೀನ್ಯತೆಯ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಉದ್ಯಮಗಳನ್ನು ಹೊಸಹೊಸ ತಂತ್ರಜ್ಞಾನವನ್ನು ಆವಿಷ್ಕರಿಸುವಂತಹ ನವೋದ್ಯಮಗಳೊಂದಿಗೆ ಬೆಸೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ, ಮುಂಬರುವ ಫೆಬ್ರವರಿಯಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ನವೋದ್ಯಮಗಳು ತಮ್ಮ ಸಂಶೋಧನೆಗಳ ಮೂಲಮಾತೃಕೆಗಳನ್ನು ಪ್ರದರ್ಶಿಸಲು ಸೂಕ್ತ ವ್ಯವಸ್ಥೆ ಮಾಡಬೇಕೆಂಬ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು” ಎಂದು ವಿವರಿಸಿದ್ದಾರೆ.
ಸಭೆಯಲ್ಲಿ ಉದ್ಯಮಿಗಳಾದ ರೆಡ್ಡಿ ಲ್ಯಾಬೊರೇಟರೀಸ್ ಮುಖ್ಯಸ್ಥ ಜಿ ವಿ ಪ್ರಸಾದ್, ಬಯೋಕಾನ್ ಸಿಇಒ ಸಿದ್ಧಾರ್ಥ ಮಿತ್ತಲ್, ಶಿಲ್ಪಾ ಬಯೊಲಾಜಿಕಲ್ಸ್ ನಿರ್ದೇಶಕ ವಿಷ್ಣುಕಾಂತ್ ಭೂತದ, ಸಿಪ್ಲಾ ಉನ್ನತಾಧಿಕಾರಿ ರಾಜೀವ್ ಕುಮಾರ್ ಸಿನ್ಹಾ, ಲಾಗ್9 ಸಂಸ್ಥಾಪಕ ಅಕ್ಷಯ್ ಸಿಂಘಾಲ್, ಬೆಲಾಟ್ರೆಕ್ಸ್ ಸಿಇಒ ಅಭಿಲಾಷ್, ನೋಪೋ ನ್ಯಾನೋಟೆಕ್ನಾಲಜೀಸ್ ಸಿಇಒ ಗದಾಧರ ರೆಡ್ಡಿ, ಎಥರಿಯಲ್ ಮಶೀನ್ಸ್ ಸಿಇಒ ಕೌಶಿಕ್ ಮುದ್ದಾ ಉಪಸ್ಥಿತರಿದ್ದರು.