10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಆಯುಷ್ ಇಲಾಖೆ ಇಂದಿನಿಂದ 10 ದಿನಗಳ ಯೋಗೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. ಯೋಗ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ಜನರು ಪ್ರತಿನಿತ್ಯ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಆಗಬೇಕು ರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬೆಂಗಳೂರಿನಲ್ಲಿ ಮಂಗಳವಾರ ಯೋಗೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ 10 ದಿನಗಳಲ್ಲಿ ಯೋಗವನ್ನ ಹೇಳಿಕೊಡಲಾಗುತ್ತದೆ. ಅಲ್ಲದೇ ಆಯುರ್ವೇದ ಚಿಕಿತ್ಸಾ ಪದ್ದತಿಗಳ ಮಾಹಿತಿಯನ್ನ ಸಾರ್ವಜನಿಕರಿಗೆ ತಲುಪಿಸುವ ಕೆಲಸ ಆಗಲಿದೆ” ಎಂದರು.
“ಯೋಗೋತ್ಸವದ ಅಂಗವಾಗಿ ವಿವಿಧ ಸಂಘ-ಸಂಸ್ಥೆಗಳು/ಇಲಾಖೆಗಳು ಆಯುಷ್ಇಲಾಖೆ ಸಹಕಾರದೊಂದಿಗೆ ಜೂನ್ 11 ರಿಂದ 20 ರವರೆಗೆ ಹತ್ತು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿವೆ. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು /ಸಂಘ ಸಂಸ್ಥೆ ಯೋಗೋತ್ಸವದಲ್ಲಿ ಭಾಗವಹಿಸುತ್ತಿದ್ದು, ಈ 04 ಸಂಸ್ಥೆಗಳಲ್ಲಿ ಸುಮಾರು 4 ಲಕ್ಷ ಮಂದಿ ರಾಜ್ಯಾದ್ಯಂತ ಯೋಗ ಪ್ರದರ್ಶನವನ್ನು ಮಾಡುವುದರ ಮೂಲಕ ಯೋಗೋತ್ಸವನ್ನು ಆಚರಿಸಲಿದ್ದಾರೆ” ಎಂದು ಹೇಳಿದರು.
“ಬೆಂಗಳೂರಿನಲ್ಲಿನ ಬೆಂಗಳೂರು ಅಪಾರ್ಟ್ಮೆಂಟ್ ಅಸೋಸಿಯೇಷನ್, ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆ, ಜೈನ್ ಯುನಿರ್ವಸಿಟಿ, ಲೂಲು ಮಾಲ್ ಹಾಗೂ ಮಾಲ್ ಆಫ್ ಏಷ್ಯಾ, ಸ್ಥಳಗಳಲ್ಲಿ ಯೋಗ ತರಬೇತಿ, ಆಯುಷ್ ವೈದ್ಯ ಪದ್ಧತಿಗಳ ಕುರಿತು ಅರಿವು ಹಾಗೂ ಆಯುಷ್ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯುಷ್ ಇಲಾಖಾ ವತಿಯಿಂದ ನಡೆಸಲಾಗುತ್ತಿದೆ” ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಆಯುರ್ವೇದ ಶಬ್ದಕೋಶ, ಯೋಗೋತ್ಸವ ಪೋಸ್ಟರ್, ಯೋಗೋತ್ಸವ ವೆಬ್ಸೈಟ್ ಗೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆಯ ಆಯುಕ್ತರಾದ ಶ್ರೀನಿವಾಸುಲು, ಟ್ರಾನ್ಸ್ ಡಿಸಿಪ್ಲಿನರಿ ವಿಶ್ವವಿದ್ಯಾಲಯದ ಉಪಕುಲಪತಿ ದರ್ಶನ್ ಶಂಕರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.