ಶಾಸಕ ಎಚ್ ಡಿ ರೇವಣ್ಣ ಒಳ್ಳೆಯ ನಡವಳಿಕೆ ವ್ಯಕ್ತಿಯಲ್ಲ. ನಾನು ಮತ್ತು ರೇವಣ್ಣ ಇಂಗ್ಲೆಂಡ್ಗೆ ಹೋಗಿದ್ದಾಗ ಅಲ್ಲಿ ಕೂಡ ಹೀಗೆಯೇ ರೇವಣ್ಣ ಸಿಕ್ಕಿಹಾಕಿಕೊಂಡಿದ್ದರು ಎಂದು ಮಂಡ್ಯದ ಬಿಜೆಪಿ ಮುಖಂಡ, ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಹೆಚ್ ಡಿ ದೇವೇಗೌಡರ ಕುಟುಂಬದ ಜೊತೆ ಒಂದು ಕಾಲದಲ್ಲಿ ಆಪ್ತರಾಗಿ ಗುರುತಿಸಿಕೊಂಡಿದ್ದ ಶಿವರಾಮೇಗೌಡ ಶನಿವಾರ ಮಂಡ್ಯದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿ, “ಹಾಸನದಲ್ಲಿ ನಡೆದಂತಹ ಘಟನೆಯೇ ಅಂದು ಇಂಗ್ಲೆಂಡ್ನಲ್ಲೂ ನಡೆದಿತ್ತು” ಎಂದರು.
“ಸಂಸದ ಪ್ರಜ್ವಲ್ ರೇವಣ್ಣ ಮುಂದೆ ಉಮೇಶ್ ರೆಡ್ಡಿ ಕೂಡ ಕಡಿಮೆ. ಬ್ಲೂ ಫಿಲ್ಮ್ ಮಾಡುವವರ ಬಳಿಯೂ ಇಷ್ಟೊಂದು ವಿಡಿಯೋಗಳು ಇರುವುದಿಲ್ಲ. ಎಂಪಿಯಾಗಿ ಐದು ವರ್ಷ ಏನನ್ನು ಮಾಡಿಲ್ಲ. ದಿನಕ್ಕೆ ಮೂವರಂತೆ ಐದು ವರ್ಷ ಇದನ್ನೇ ಮಾಡಿದ್ದಾನೆ” ಎಂದು ಕಿಡಿಕಾರಿದರು.
“ನಮ್ಮಂತವರನ್ನು ತುಳಿದ ಪಾಪದಿಂದ ದೇವೇಗೌಡರಿಗೆ ಇಂತಹ ಪರಿಸ್ಥಿತಿ ಬಂದಿದೆ. ಕುಮಾರಸ್ವಾಮಿ ಅವರು ಸಂತ್ರಸ್ಥೆಯರ ಪರವಾಗಿ ಹೋರಾಟ ಮಾಡಬೇಕು. ಅಲ್ಲದೇ ಕೂಡಲೇ ಎನ್ಡಿಎ ಮೈತ್ರಿಕೂಟದಿಂದ ಜೆಡಿಎಸ್ ಪಕ್ಷವನ್ನು ಹೊರಹಾಕಬೇಕು” ಎಂದು ಆಗ್ರಹಿಸಿದರು.
“ಗಂಗಾಧರ್ ಕೊಲೆ ಕೇಸ್ನಲ್ಲಿ ನನ್ನನ್ನು ಸೇರಿಸಲು ದೇವೇಗೌಡ್ರು ಎಂಟು ಕಿಲೋ ಮೀಟರ್ ಪಾದಯಾತ್ರೆ ಮಾಡಿದ್ದರು. ಇದೀಗ ನೊಂದವರ ಶಾಪವೇ ಇಂದು ಅವರಿಗೆ ತಟ್ಟಿದೆ. ಅನ್ಯಾಯ ಆಗಿರುವುದು ಅವರ ಕುಟುಂಬದಿಂದ. ಹಾಗಾಗಿ ಧಮ್ಕಿ ಹಾಕುವುದನ್ನು ಬಿಟ್ಟುಬಿಡಿ” ಎಂದರು.
“ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ರೇವಣ್ಣ ಅವರನ್ನೂ ಬಂಧಿಸಬೇಕು. ಒಂದು ವೇಳೆ ತಂದೆ-ಮಗ ಇಬ್ಬರೂ ತಪ್ಪಿಲ್ಲದಿದ್ದರೆ ಅದನ್ನೂ ಬಹಿರಂಗಪಡಿಸಲಿ. ಪ್ರಜ್ವಲ್ ರೇವಣ್ಣ ಇಷ್ಟೊಂದೆಲ್ಲ ಮಾಡುವಾಗ ಅವರ ಅಪ್ಪ, ಅಮ್ಮ ಕತ್ತೆ ಕಾಯುತ್ತಿದ್ರಾ? ಇಂತಹ ವಿಕೃತ ಮನಸ್ಥಿತಿಯವರನ್ನು ನಾನು ಎಲ್ಲಿಯೂ ನೋಡೇ ಇಲ್ಲ” ಎಂದು ವಾಗ್ದಾಳಿ ನಡೆಸಿದರು.


