ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ರಾಜ್ಯಪಾಲರು ರಾಜಭವನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸಂವಿಧಾನದ ಚೌಕಟ್ಟು ಬಿಟ್ಟು ಬಿಜೆಪಿ ನಿರ್ದೇಶನದಂತೆ ಕೆಲಸ ಮಾಡಲು ಆಗಲ್ಲ. ಇದನ್ನು ರಾಜ್ಯಪಾಲರು ಅರ್ಥಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಎಂಎಲ್ಸಿ ಬಿ ಕೆ ಹರಿಪ್ರಸಾದ್ ಹೇಳಿದರು.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ರಾಜ್ಯಪಾಲರು ಬಿಜೆಪಿ ಅಧ್ಯಕ್ಷರಂತೆ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಬಿಜೆಪಿ ಆಪರೇಷನ್ ಕಮಲ ಮೂಲಕ ಸರ್ಕಾರ ಕೆಡವುತ್ತಿತ್ತು. ಆದರೆ ಈಗ ಬೇರೆ ವಾಮ ಮಾರ್ಗದ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದೆ” ಎಂದರು.
“ಸಿಎಂ ಸಿದ್ದರಾಮಯ್ಯ ಅವರಿಗೆ ಸದ್ಯ ಹೈಕೋರ್ಟ್ ರಿಲೀಫ್ ಕೊಟ್ಟಿದೆ. ನಾವು ನ್ಯಾಯಾಂಗ ಹೋರಾಟ ಮಾಡುತ್ತಿದ್ದೇವೆ. ಯಡಿಯೂರಪ್ಪ ಪ್ರಕರಣ 20 ಕೋಟಿ ಚೆಕ್ ಮೂಲಕ ಲಂಚ ಪಡೆದಿರೋದು
ರಾಜ್ಯಪಾಲರು ತೆಗೆದುಕೊಂಡ ನಿರ್ಧಾರದ ವಿರುದ್ದ ಕಾನೂನು ಹೋರಾಟ ಮಾಡುತ್ತಿದ್ದೇವೆ. ಸಂವಿಧಾನಿಕ ಹುದ್ದೆಯಲ್ಲಿರೋ ವಿರುದ್ದ ನಾವು ಹೋರಾಟ ಮಾಡೋದು ಸರಿಯಲ್ಲ” ಎಂದರು.
“ಗಡೀಪಾರಾಗಿದ್ದ ಅಮಿತ್ ಶಾ ಕೂಡ ಮಂತ್ರಿಯಾಗಿಲ್ವಾ? ಬಿಜೆಪಿ ನಾಯಕರ ಮೇಲೆ ಗಂಭೀರ ಆರೋಪಗಳಿತ್ತು, ಈ ಆರೋಪ ಕಪೋಲಕಲ್ಪಿತವಾ? ರಾಜ್ಯಪಾಲರು ಈ ಹಿಂದೆ ದಲಿತ ರಾಜಕಾರಣಿ ಆಗಿದ್ದವರು, ಗೆಹ್ಲೋಟ್ ಅವರನ್ನು ನಾನು ಹತ್ತಿರದಿಂದ ಬಲ್ಲೆ. ಬಿಜೆಪಿಯವರಿಗೆ ದಲಿತರ ಮೇಲೆ ಪ್ರೀತಿ ಇದ್ರೆ ಸಂವಿಧಾನ ಬದಲಾವಣೆ ಅಂತ ಯಾಕೆ ಮಾತನಾಡುತ್ತಿದ್ದರು” ಎಂದು ಪ್ರಶ್ನಿಸಿದರು.