ಜಿಂದಾಲ್ ಉಕ್ಕು ಕಂಪನಿಗೆ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 3,677 ಎಕರೆ ಜಮೀನನ್ನು ಬಿಜೆಪಿ ಸರ್ಕಾರ ಮಾರಾಟ ಮಾಡಲು ಮುಂದಾಗಿದ್ದಾಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ವಿರೋಧಿಸಿತ್ತು. ಈಗ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅದೇ ಜಿಂದಾಲ್ ಕಂಪನಿ ಜಮೀನು ಮಾರಾಟ ಮಾಡಲು ನಿರ್ಧರಿಸಿದೆ.
ರಾಜ್ಯ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್, “ವಿರೋಧ ಪಕ್ಷದಲ್ಲಿದ್ದಾಗ ಅನೇಕ ಪ್ರಶ್ನೆಗಳನ್ನು ಕೇಳಲಾಗಿತ್ತು. ಈಗ ಉತ್ತ ಸಿಕ್ಕಿದೆ. ಕೋರ್ಟ್ ಸಹ ಆದೇಶ ಮಾಡಿದೆ. ಸ್ಥಳೀಯ ಬೆಲೆಯನ್ನು ನಿಗದಿ ಮಾಡಿ ಮಾರಾಟ ಮಾಡಲಾಗಿದೆ” ಎಂದರು.
“ಜಾಗತೀಕ ಮಟ್ಟದ ಹೂಡಿಕೆದಾರರ ಸಭೆಗಳಲ್ಲಿ ವಿದ್ಯುತ್, ಭೂಮಿ ಬೆಲೆ ಮುಂತಾದವುಗಳಲ್ಲಿ ರಿಯಾಯಿತಿ ನೀಡುವುದಾಗಿ ಕೈಗಾರಿಕೋದ್ಯಮಿಗಳಿಗೆ ಹೇಳಿರುತ್ತೇವೆ. ಇರುವ ಕೈಗಾರಿಕೋದ್ಯಮಿಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಹೊಸಬರನ್ನು ತರಬೇಕಿದೆ. ಜಿಂದಾಲ್ನವರಯ ರಾಜ್ಯದಲ್ಲಿ ಲಕ್ಷಾಂತರ ಕೋಟಿ ರೂ. ಹೂಡಿಕೆ ಮಾಡುತ್ತಿದ್ದಾರೆ. ಅಂತವರಿಗೆ ಅವಕಾಶ ಕಲ್ಪಿಸದಿದ್ದರೆ ರಾಜ್ಯ ಬಿಟ್ಟು ಹೋಗುತ್ತಾರೆ” ಎಂದು ಹೇಳಿದರು.
“ಆಂಧ್ರಪ್ರದೇಶ, ತೆಲಂಗಾಣದಲ್ಲಿ ಉಚಿತವಾಗಿ ಭೂಮಿ ನೀಡುತ್ತೇವೆ ಎಂದು ಮುಕ್ತವಾಗಿ ಹೇಳುತ್ತಿದ್ದಾರೆ. ನಾವು ಭೂಮಿ ಕೊಡಲಿಲ್ಲವೆಂದರೆ ಬೇರೆ ರಾಜ್ಯದವರು ಕೊಡುತ್ತಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸಣ್ಣ ಘಟನೆ ನಡೆದಾಗ ಇಂಡಸ್ಟ್ರಿ ಬಿಟ್ಟು ಹೋಗುವುದಾಗಿ ಹೇಳಿದಾಗ ತಮಿಳುನಾಡು, ಆಂಧ್ರದವರು ನಮ್ಮ ರಾಜ್ಯಕ್ಕೆ ಬರುವಂತೆ ಆಹ್ವಾನಿಸಿದ್ದರು. ಈ ಬಗ್ಗೆ ಬಿಜೆಪಿಯವರು ನಮ್ಮನ್ನು ಆಗ ಮನವರಿಕೆ ಮಾಡಿದ್ದರೆ ನಾವು ಒಪ್ಪುತ್ತಿದ್ದೆವು” ಎಂದು ಸಮರ್ಥಿಸಿದರು.
“ಬೇರೆ ರಾಜ್ಯಗಳ ರಾಜ್ಯಪಾಲರ ನಡತೆ ಮತ್ತು ವರ್ತನೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ಬಗ್ಗೆ ಇಂಡಿಯಾ ಒಕ್ಕೂಟ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಗೊತ್ತಿಲ್ಲ. ಪಕ್ಷದ ರಾಷ್ಟ್ರೀಯ ವರಿಷ್ಟರು ಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯ ಅಧ್ಯಕ್ಷರನ್ನು ಕರೆದಿದ್ದಾರೆ. ನಮ್ಮನ್ನು ಆಹ್ವಾನಿಸಿಲ್ಲ. ಕೆಲ ಸಚಿವರು ಸ್ವಯಂ ಪ್ರೇರಿತವಾಗಿ ಹೋಗುತ್ತಿದ್ದೇವೆ” ಎಂದು ತಿಳಿಸಿದರು.
“ನಮ್ಮ ಇಲಾಖೆಗೆ ಸಂಬಂಧಿಸಿದ ಕೆಲಸಗಳಿವೆ. ಪೊಲೀಸ್ ವಸತಿ ಯೋಜನೆಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಬಗ್ಗೆ ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿಯವರನ್ನು ಭೇಟಿ ಮಾಡಬೇಕಿದೆ” ಎಂದರು.
“ಮುಡಾ ಬಗ್ಗೆ ವಿವರಣೆ ನೀಡಲು ಹೋಗುತ್ತಿಲ್ಲ. ಅಜೆಂಡಾ ಏನಿದೆ ಎಂಬುದು ನನಗೆ ಗೊತ್ತಿಲ್ಲ. ಬೇರೆ ಬೇರೆ ರಾಜ್ಯದಲ್ಲಿಯೂ ಸಹ ಅಲ್ಲಿನ ರಾಜ್ಯಪಾಲರ ವರ್ತನೆ ಬಗ್ಗೆ ಧ್ವನಿ ಎದ್ದಿದೆ. ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳದಲ್ಲಿ ರಾಜ್ಯಪಾಲರ ನಡತೆ ಬಗ್ಗೆ ಪ್ರಶ್ನೆಗಳು ಬಂದಿವೆ. ಈ ಬಗ್ಗೆ ಚರ್ಚೆ ಆಗಬಹುದು” ಎಂದು ಹೇಳಿದರು.
ರಾಜ್ಯಪಾಲರು 11 ಮಸೂದೆಗಳನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಿರುವ ಕುರಿತು ಪ್ರತಿಕ್ರಿಯಿಸಿ, “ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಹೊಂದಾಣಿಕೆ ಇಲ್ಲದಿದ್ದರೆ ಇಂತಹ ಬೆಳವಣಿಗಳು ನಡೆಯುತ್ತವೆ. ಒಂದೆರಡು ಮಸೂದೆಗಳ ಬಗ್ಗೆ ಸ್ಪಷ್ಟೀಕರಣ ಕೇಳಿರುವುದು ಇದೆ. ಈವರೆಗೆ ಸಾರಸಗಟಾಗಿ ಇಷ್ಟೊಂದು ಮಸೂದೆಗಳನ್ನು ವಾಪಸ್ ಕಳುಹಿಸಿರುವ ಉದಾಹರಣೆಗಳಿಲ್ಲ. ಹನ್ನೊಂದು ಬಿಲ್ಗಳನ್ನು ವಾಪಸ್ ಕಳಿಸಿರುವುದು ನೋಡಿದರೆ, ರಾಜ್ಯಪಾಲರಿಗೆ ನಮ್ಮ ಸರ್ಕಾರದ ಮೇಲೆ ವಿಶ್ವಾಸದ ಕೊರತೆ ಆಗಿರುವ ಎಂಬ ಸಂದೇಶ ಸಿಗುತ್ತಿದೆ” ಎಂದರು ಬೇಸರಿಸಿದರು.
“ಬಿಜೆಪಿ ಅಧಿಕಾರವಧಿಯಲ್ಲಿ ನಡೆದ ಹಗರಣಗಳು ಒಂದೊಂದಾಗಿ ಹೊರಬರುತ್ತಿವೆ. ಭೋವಿ ನಿಗಮ, ಜಂತಕಲ್ ಗಣಿ ಹಗರಣ ಈತರದ್ದೆಲ್ಲ ತನಿಖೆ ಮಾಡಿ, ತಾರ್ಕಿಕ ಹಂತಕ್ಕೆ ಕೊಂಡೊಯ್ಯುತ್ತೇವೆ” ಎಂದರು.