ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಐವರು ಸದಸ್ಯರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.
ಜನವರಿಯಲ್ಲಿ ಹಿರಿಯ ವಕೀಲ ಮತ್ತು ಮಾಜಿ ಅಡ್ವೊಕೇಟ್ ಜನರಲ್ ಮಧುಸೂದನ್ ನಾಯಕ್ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ, ಆಯೋಗದ ಸದಸ್ಯರ ನೇಮಕ ವಿಳಂಬವಾಗಿತ್ತು. ಇದೀಗ ರಾಜ್ಯ ಸರ್ಕಾರ ಐದು ಮಂದಿ ಸದಸ್ಯರನ್ನು ನೇಮಿಸಿ ಆದೇಶಿಸಿದೆ.
ಮೈಸೂರಿನ ಶಿವಣ್ಣಗೌಡ, ಧಾರವಾಡದ ಡಾ.ಸಿ.ಎಂ.ಕುಂದಗೋಳ, ಕಲಬುರ್ಗಿಯ ಚಂದ್ರಪ್ಪ, ರಾಮನಗರದ ಡಾ.ಜಿ.ಎನ್.ಶ್ರೀಕಂಠಯ್ಯ, ದಕ್ಷಿಣ ಕನ್ನಡದ ಪ್ರತಿಭಾ ಕುಲಾಯಿರನ್ನು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಹಿಂದುಳಿದ ವರ್ಗಗಳ ಜಾತಿ ಮರು ಸಮೀಕ್ಷೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದ್ದ ಈ ಹಿಂದಿನ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಕಾಂಗ್ರೆಸ್ ಸರ್ಕಾರ ಕೈ ಬಿಟ್ಟಿದೆ. ಈ ಹಿನ್ನೆಲೆ ಹೊಸದಾಗಿ ಮರು ಸಮೀಕ್ಷೆ ಮಾಡಲು ತೀರ್ಮಾನಿಸಲಾಗಿದೆ.
90 ದಿನಗಳಲ್ಲಿ ಮರುಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಎಲ್ಲ ಸದಸ್ಯರನ್ನು ನೇಮಕ ಮಾಡುವುದು ಬಾಕಿ ಉಳಿದುಕೊಂಡಿತ್ತು. ಇದೀಗ ಆಯೋಗದ ಸದಸ್ಯರನ್ನು ನೇಮಿಸಲಾಗಿದೆ.