ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣದಲ್ಲಿ ಒಂಟಿ ಮನೆ ಹಾಗೂ ಕಾರಿನಲ್ಲಿ ಸ್ಕ್ಯಾನಿಂಗ್ ಮಾಡುತ್ತಿದ್ದ ಆರು ಆರೋಪಿಗಳನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದು, ಇವರ ಬಂಧನದಿಂದ ಪ್ರಕರಣದಲ್ಲಿ ಸೆರೆಯಾದವರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.
ಬನ್ನೂರಿನ ರಾಮಕೃಷ್ಣ, ಗುರು, ಮೈಸೂರಿನ ಸೋಮಶೇಖರ್ ಪಟೇಲ್, ಪಾಂಡವಪುರ ತಾಲೂಕಿನ ಹಿರೇಮರಳಿ ಗ್ರಾಮದ ನವೀನ್, ಹರಳಹಳ್ಳಿಯ ಜಬ್ಬರ್, ಕೆ ಆರ್ ನಗರದ ಶಂಕರ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳು ಒಂದು ಹೆಣ್ಣುಭ್ರೂಣ ಹತ್ಯೆಗೆ 10ರಿಂದ 50 ಸಾವಿರದವರೆಗೆ ಶುಲ್ಕ ಸಂಗ್ರಹಿಸುತ್ತಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಮಂಡ್ಯ ಹಾಗೂ ಮೈಸೂರು ಜಿಲ್ಲೆಯಲ್ಲಿ ಕ್ರಿಯಾಶೀಲವಾಗಿದ್ದ ತಂಡವು ಕಳೆದ ಹಲವು ವರ್ಷಗಳಿಂದ ಕರಾಳದಂಧೆ ನಡೆಸುತ್ತಿತ್ತು. ಆರೋಪಿಗಳು ಪೊಲೀಸ್, ಆರೋಗ್ಯ ಇಲಾಖೆಯ ಕಣ್ತಪ್ಪಿಸಿ ದಂಧೆ ನಡೆಸುತ್ತಿದ್ದರು. ಬಂಧಿತರಿಂದ ಸ್ಕ್ಸಾನಿಂಗ್ ಮಶೀನ್, ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಇದುವರೆಗೂ 50ಕ್ಕೂ ಹೆಚ್ಚು ಹೆಣ್ಣುಭ್ರೂಣ ಹತ್ಯೆ ಮಾಡಿರುವುದು ಬಯಲಾಗಿದೆ.
ಆಸ್ಪತ್ರೆಗೆ ಸೋನೋಗ್ರಫಿ ಟೆಸ್ಟ್ ಮಾಡಿಸಿಕೊಳ್ಳಲು ಬರುವವರನ್ನೇ ಈ ಆರೋಪಿಗಳು ಟಾರ್ಗೆಟ್ ಮಾಡುತ್ತಿದ್ದರು. ವಾರದ ಹಿಂದೆ ಕಿಂಗ್ ಪಿನ್ ಅಭಿಷೇಕ್ ಹಾಗೂ ವಿರೇಶ್ ಸೇರಿ 12 ಮಂದಿ ಆರೋಪಿಗಳನ್ನು ಬಂಧಿಸಿ ಮತ್ತೆ 6 ಮಂದಿ ಜೊತೆಗೆ ಇದೀಗ ಮತ್ತೆ 6 ಜನರನ್ನು ಬಂಧಿಸಲಾಗಿದೆ.
ಪ್ರಕರಣ ಭೇದಿಸಲು ಏಳು ತಂಡ ರಚನೆ ಮಾಡಲಾಗಿದೆ. ಪ್ರಕರಣದಲ್ಲಿ ಕೆಲ ವೈದ್ಯರು ಭಾಗಿಯಾಗಿದ್ದಾರೆ. ಅವರ ಬಂಧನಕ್ಕೂ ಖಾಕಿ ಮುಂದಾಗಿದೆ. ಮೇಲುಕೋಟೆ, ಪಾಂಡವಪುರ, ಬೆಳ್ಳೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ.
ಪ್ರಕರಣ ಹಿನ್ನೆಲೆ
ಮೊದಲಿಗೆ ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ಆಲೆಮನೆಯಲ್ಲಿ ನಡೆಯುತ್ತಿದ್ದ ಕರಾಳದಂಧೆಯನ್ನ ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಭೇದಿಸಿ ಹಲವು ಮಂದಿಯನ್ನ ಬಂಧಿಸಿದ್ದರು. ಆನಂತರ ಈ ಪ್ರಕರಣವನ್ನ ಸಿಐಡಿಗೂ ವಹಿಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಕಿಂಗ್ ಪಿನ್ ಆಗಿದ್ದ ಅಭಿಷೇಕ್ ಬಂಧನವಾಗದೇ ತಲೆ ಮರೆಸಿಕೊಂಡಿದ್ದ.
ಆನಂತರ ಪಾಂಡವಪುರದ ಹೆಲ್ತ್ ಕ್ವಾಟ್ರಸ್, ಮೇಲೆಕೋಟೆ, ನಾಗಮಂಗಲ ಸೇರಿದಂತೆ ಹಲವು ಕಡೆಗಳಲ್ಲಿ ನಡೆಯುತ್ತಿದ್ದ ಕರಾಳದಂಧೆ ಬೇಧಿಸಿ ಹಲವು ಆರೋಪಿಗಳನ್ನ ಬಂಧನ ಮಾಡಲಾಗಿತ್ತು. ಆದರೆ ಐದು ಪ್ರಕರಣಗಳಲ್ಲಿ ಸಿಐಡಿ ಪೊಲೀಸರು ಸೇರಿದಂತೆ ಮಂಡ್ಯ ಜಿಲ್ಲೆಯ ಪೊಲೀಸರಿಗೆ ಚಳ್ಳೆಯನ್ನು ತಿನ್ನಿಸಿ ಕಿಂಗ್ ಪಿನ್ ಅಭಿಷೇಕ್ ಕರಾಳದಂಧೆಯನ್ನ ಮುಂದುವರೆಸಿಕೊಂಡು ಹೋಗಿದ್ದ. ಈತನ ಬಂಧನಕ್ಕಾಗಿಯೇ ಏಳು ತಂಡಗಳನ್ನ ರಚನೆ ಮಾಡಲಾಗಿತ್ತು. ಕೊನೆಗೂ ಐನಾತಿ ಅಭಿಷೇಕ್ ಬಂಧನವಾಗಿದೆ.