ಕನ್ನಡದ ಪ್ರಸಿದ್ಧ ಲೇಖಕಿ ಬಾನು ಮುಷ್ತಾಕ್ ಅವರಿಗೆ ಪ್ರತಿಷ್ಟಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದೆ. ಬಾನು ಅವರು ಬರೆದಿದ್ದ ಹಸೀನಾ ಮತ್ತು ಇತರ ಕತೆಗಳು ಕೃತಿಯನ್ನ ದೀಪಾ ಭಸ್ತಿ ಇಂಗ್ಲಿಷ್ ಗೆ ಅನುವಾದ ಮಾಡಿದ್ದರು. ಈ ಕೃತಿ ಈಗ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಪಾತ್ರವಾಗಿದೆ.
ಬೂಕರ್ ಪ್ರಶಸ್ತಿಗೆ ಬಾನು ಮುಷ್ತಾಕ್ ಅವರ ಇಂಗ್ಲಿಷ್ ಅನುವಾದಿತ ಕೃತಿ ” ಹಾರ್ಟ್ ಲ್ಯಾಂಪ್ ” ಶಾರ್ಟ್ ಲಿಸ್ಟ್ ” ಗೆ ಆಯ್ಕೆಯಾಗಿತ್ತು. ಬೂಕರ್ ಪ್ರಶಸ್ತಿಗಾಗಿ ಲಿಸ್ಟ್ ಆಗಿದ್ದ ಒಟ್ಟು 6 ಕೃತಿಗಳಲ್ಲಿ ಅಂತಿಮವಾಗಿ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಷ್ತಾಕ್ ಅವರ ಕೃತಿ ಪ್ರಶಸ್ತಿಗೆ ಭಾಜನವಾಯಿತು.
ಲಂಡನ್ನಲ್ಲಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಲೇಖಕಿ ಭಾನು ಮುಷ್ತಾಕ್ ಮತ್ತು ಅನುವಾದಕಿ ದೀಪಾ ಭಸ್ತಿ ಅವರು ಇಬ್ಬರು ಪರಸ್ಪರ ಅಪ್ಪಿಕೊಂಡು ಹರ್ಷ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯಕ್ಕೆ ದೊರೆತ ಮೊದಲ ಬೂಕರ್ ಪ್ರಶಸ್ತಿ ಇದಾಗಿದೆ. ಈ ಪ್ರಶಸ್ತಿಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಾಹಿತ್ಯಕ್ಕೆ ಮನ್ನಣೆ ಸಿಕ್ಕಂತಾಗಿದೆ.ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿಯು 50 ಸಾವಿರ ಪೌಂಡ್ ನಗದು ಬಹುಮಾನ ಒಳಗೊಂಡಿದೆ. ಈ ಹಣವನ್ನು ಬಾನು ಮುಷ್ತಾಕ್ ಮತ್ತು ಕೃತಿಯನ್ನು ಇಂಗ್ಲಿಷ್ ಗೆ ಅನುವಾದಿಸಿದ ದೀಪಾ ಭಸ್ತಿ ಅವರಿಗೆ ಹಂಚಲಾಗಿದೆ. ಬೂಕರ್ ಪ್ರಶಸ್ತಿಗೆ ಪಾತ್ರವಾಗಿರುವ ಬಾನು ಮುಷ್ತಾಕ್ ಅವರ ಹಸೀನಾ ಮತ್ತು ಇತರ ಕತೆಗಳು ಕಥಾಸಂಕಲನವು ಮುಸ್ಲಿಂ ಸಮುದಾಯದ ಬಾಲಕಿಯರ ಮತ್ತು ಇತರ ಹೆಣ್ಣುಮಕ್ಕಳ ದೈನಂದಿನ ಜೀವನ ಕುರಿತದ್ದಾಗಿದೆ.
ಲಂಡನ್ ನಲ್ಲಿ ಪ್ರಶಸ್ತಿ ಸ್ವೀಕರಿಸಿದ ಬಾನು ಮುಷ್ತಾಕ್: ಸಣ್ಣ ಕಥಾ ಸಂಕಲನ ‘ಹಾರ್ಟ್ ಲ್ಯಾಂಪ್’ ಬರಹಕ್ಕಾಗಿ ಲಂಡನ್ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಂಗಳವಾರ ರಾತ್ರಿ ಲೇಖಕಿ ಮತ್ತು ವಕೀಲೆ ಬಾನು ಮುಷ್ತಾಕ್ , ಅನುವಾದಕಿ ದೀಪಾ ಭಸ್ತಿ ಅವರೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಿದರು. ಬಳಿಕ ಮಾತನಾಡಿದ ಮುಷ್ತಾಕ್, ತಮ್ಮ ಗೆಲುವನ್ನು ವೈವಿಧ್ಯತೆಯ ಗೆಲುವು ಎಂದು ಬಣ್ಣಿಸಿದರು.
ಯಾವುದೇ ಕಥೆ ಚಿಕ್ಕದಲ್ಲ:ಯಾವುದೇ ಕಥೆ ಎಂದಿಗೂ ಚಿಕ್ಕದಲ್ಲ, ಮಾನವ ಅನುಭವದ ವಸ್ತ್ರದಲ್ಲಿ ಪ್ರತಿಯೊಂದು ದಾರವು ತನ್ನದೇ ಆದ ತೂಕ ಹೊಂದಿರುತ್ತದೆ ಎಂಬ ನಂಬಿಕೆಯಿಂದ ಹುಟ್ಟಿದೆ ಎಂದು ಮುಷ್ತಾಕ್ ಬಣ್ಣಿಸಿದ್ದಾರೆ. ನಮ್ಮನ್ನು ವಿಭಜಿಸಲು ಪ್ರಯತ್ನಿಸುವ ಜಗತ್ತಿನಲ್ಲಿ, ಸಾಹಿತ್ಯವು ಕಳೆದುಹೋದ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಅಲ್ಲಿ ನಾವು ಪರಸ್ಪರರ ಮನಸ್ಸಿನಲ್ಲಿ ಕೆಲವು ಪುಟಗಳವರೆಗೆ ವಾಸಿಸಬಹುದು” ಎಂದು ಮುಷ್ತಾಕ್ ಬಣ್ಣಿಸಿದ್ದಾರೆ.
ಅನುವಾದಕಿ ದೀಪಾ ಭಸ್ತಿ ಮಾತನಾಡಿ, “ನನ್ನ ಸುಂದರ ಭಾಷೆಗೆ ಇದು ಎಂತಹ ಸುಂದರವಾದ ಗೆಲುವು ಎನ್ನುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ತೀರ್ಪುಗಾರರ ಮನಗೆದ್ದ ಕೃತಿ:ಕುಟುಂಬ ಮತ್ತು ಸಮುದಾಯದ ಉದ್ವಿಗ್ನತೆಗಳ ಭಾವಚಿತ್ರಗಳನ್ನು ಸೆರೆಹಿಡಿಯುವ ಹಾಗೂ ಆಡುಮಾತಿನ, ಹೃದಯಸ್ಪರ್ಶಿ ಮತ್ತು ರೋಮಾಂಚಕ ಶೈಲಿಗಾಗಿ ತೀರ್ಪುಗಾರರ ಮನಗೆಲ್ಲುವಲ್ಲಿ ಮುಷ್ತಾಕ್ ಅವರ ಕೃತಿ ಯಶಸ್ವಿಯಾಗಿದೆ.
ತೀರ್ಪುಗಾರರ ಅಧ್ಯಕ್ಷರು ಹೇಳಿದ್ದಿಷ್ಟು:2025ರ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ತೀರ್ಪುಗಾರರ ಅಧ್ಯಕ್ಷರಾದ ಮ್ಯಾಕ್ಸ್ ಪೋರ್ಟರ್ ಮಾತನಾಡಿ, “ಈ ಪಟ್ಟಿಯು ಮಾನವೀಯತೆಯ ಬಗ್ಗೆ ಒತ್ತುವ ಮತ್ತು ಆಶ್ಚರ್ಯಕರ ಸಂಭಾಷಣೆಗಳಿಗೆ ಒಂದು ವಾಹಕವಾದ ಕಾದಂಬರಿಗಳ ಆಚರಣೆಯಾಗಿದೆ ಎಂದು ಬಣ್ಣಿಸಿದ್ದಾರೆ.
ಪ್ರತಿ ಶಾರ್ಟ್ಲಿಸ್ಟ್ ಮಾಡಿದ ಇತರ ಶೀರ್ಷಿಕೆಗಳಿಗೆ 5,000 ಪೌಂಡ್ ಬಹುಮಾನ ನೀಡಲಾಗುತ್ತದೆ. ಈ ಮೊತ್ತವನ್ನು ಲೇಖಕ ಮತ್ತು ಅನುವಾದಕರು ಹಂಚಿಕೊಳ್ಳುತ್ತಾರೆ ಮತ್ತು ವಿಜೇತ ಕೃತಿಗೆ ಸಿಕ್ಕ ಬಹುಮಾನದ ಹಣವನ್ನು ಮುಷ್ತಾಕ್ ಮತ್ತು ಭಸ್ತಿ ನಡುವೆ ಹಂಚಲಾಗುತ್ತದೆ. ಅವರು ತಲಾ 25,000 ಪೌಂಡ್ ಪಡೆಯುತ್ತಾರೆ.
ಸಿಎಂ ಸಿದ್ದರಾಮಯ್ಯ ನಾಯಕರರಿಂದ ಅಭಿನಂದನೆ
“ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಸ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಸಂಭ್ರಮಿಸುವ ಹೊತ್ತು. ಈ ನೆಲದ ಸೌಹಾರ್ದತೆ, ಜಾತ್ಯತೀತತೆ ಮತ್ತು ಸೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ಬಾನು ಮುಸ್ತಾಕ್ ಅವರು ಕನ್ನಡದ ಹಿರಿಮೆಯ ಬಾವುಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ನಮಗೆಲ್ಲ ಗೌರವ ತಂದುಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ವ್ಯಕ್ತಪಡಿಸಿದ್ದಾರೆ.
“ಅವರು ಇನ್ನಷ್ಟು ಕಾಲ ಸತ್ವಯುತವಾಗಿ ಬರೆಯುತ್ತಾ ಕನ್ನಡದ ಕಂಪನ್ನು ಜಗದಗಲಕ್ಕೆ ಪಸರಿಸುತ್ತಾ ಇರಲಿ ಎಂದು ಹಾರೈಸುತ್ತೇನೆ. ಬೂಕರ್ ಪ್ರಶಸ್ತಿಗೆ ಭಾಜನವಾಗಿರುವ ಅವರ ಕೃತಿ ‘ಹೃದಯ ದೀಪ’ವನ್ನು ಇಂಗ್ಲೀಷ್ ಗೆ ಅನುವಾದಿಸಿರುವ ಪ್ರತಿಭಾವಂತ ಲೇಖಕಿ ದೀಪಾ ಭಸ್ತಿ ಅವರಿಗೂ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದಿದ್ದಾರೆ.
ಭಾರತೀಯತೆಯ ಬೆಸುಗೆಗೆ ಬೂಕರ್ ಮನ್ನಣೆ: ಕೆ.ವಿ.ಪ್ರಭಾಕರ್ ಸಂತಸ
ಬೆಂಗಳೂರು ಮೇ 21: ಬೂಕರ್ ವೇದಿಕೆಯಲ್ಲಿ ಕನ್ನಡದ ಸಾಹಿತ್ಯದ ಹಿರಿಮೆಯನ್ನು ಎತ್ತಿ ಹಿಡಿದ ಲೇಖಕಿ, ಪತ್ರಕರ್ತೆ, ಕತೆಗಾರ್ತಿ ಭಾನು ಮುಷ್ತಾಕ್ ಅವರಿಗೆ ಅಂತಾರಾಷ್ಟ್ರೀಯ ಭೂಕರ್ ಪ್ರಶಸ್ತಿ ಲಭಿಸಿರುವುದು ಅವರ ಕತೆಗಳಲ್ಲಿ ಬೆಸೆದಿರುವ ಭಾರತೀಯತೆಯ ಬೆಸುಗೆಗೆ ಸಿಕ್ಕಿರುವ ಅಂತಾರಾಷ್ಟ್ರೀಯ ಮನ್ನಣೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಸಂತಸ ವ್ಯಕ್ತಪಡಿಸಿದ್ದಾರೆ.
ತಮ್ಮ ಲೇಖನ, ಭಾಷಣ ಮತ್ತು ಕತೆಗಳಲ್ಲಿ ನಮ್ಮ ನೆಲದ ಮೂಲ ಸತ್ವ ಮತ್ತು ಮೂಲ ತತ್ವ ಆಗಿರುವ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಮೌಲ್ಯವನ್ನು ಮತ್ತು ಜಾತ್ಯತೀತತೆಯನ್ನು ಬೆಸೆಯುವ ಕಾರ್ಯ ಮಾಡುತ್ತಲೇ ಬರುತ್ತಿದ್ದಾರೆ. ಇವರಿಗೆ ಬೂಕರ್ ಪ್ರಶಸ್ತಿ ಬಂದಿರುವುದು ಕನ್ನಡ ಸಾಹಿತ್ಯ ಮತ್ತು ಕನ್ನಡತನದ ಹಿರಿಮೆಯನ್ನು ಹೆಚ್ಚಿಸಿದ್ದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆ ಪಡಬೇಕಾದ ಸಂದರ್ಭ ಇದಾಗಿದೆ. ವಿಶ್ವ ಮಾನವತೆಯ ಸದಾಶಯವನ್ನು ಎತ್ತಿ ಹಿಡಿಯುವ ಭಾನು ಮುಷ್ತಾಕ್ ಅವರ ಕತೆಗಳು ವಿಶ್ವದ ಎಲ್ಲಾ ಭಾಷೆಗಳಿಗೂ ಅನುವಾದಗೊಳ್ಳಬೇಕು ಎನ್ನುವುದು ನನ್ನ ಆಶಯ. ಭಾನು ಮುಷ್ತಾಕ್ ಅವರ ಹಸೀನಾ ಮತ್ತು ಇತರ ಕೃತೆಗಳು ನನಗೆ ಬಹಳ ಇಷ್ಟವಾದ ಸಂಕಲನ. ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ ಎಂದಿದ್ದಾರೆ.