ತುಂಗಭದ್ರಾ ಜಲಾಶಯದ ಇತರ ಕ್ರೆಸ್ಟ್ಗೇಟ್ಗಳ ಬಗ್ಗೆ ತಜ್ಞರು ಆಘಾತಕಾರಿ ಮಾಹಿತಿ ನೀಡಿದ್ದು, ಸದ್ಯದ ಪರಿಸ್ಥಿತಿಯಲ್ಲಿ ತುಂಗಭದ್ರಾ ಡ್ಯಾಂನ ಎಲ್ಲ ಗೇಟ್ಗಳನ್ನೂ ಬದಲಾವಣೆ ಮಾಡಬೇಕು ಎಂಬ ಸಲಹೆಯನ್ನು ನೀಡಿದ್ದಾರೆ.
ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ ಇತ್ತೀಚೆಗೆ ಕ್ರೆಸ್ಟ್ಗೇಟ್ ಕೊಚ್ಚಿಕೊಂಡು ಹೋಗಿ ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಒಂದು ವಾರದ ನಿರಂತರ ಪ್ರಯತ್ನದ ಫಲವಾಗಿ ತಾತ್ಕಾಲಿಕ ಗೇಟ್ ಅಳವಡಿಕೆ ಮಾಡಲಾಗಿತ್ತು.
ತುಂಗಭದ್ರಾ ಜಲಾಶಯದ ತಾಂತ್ರಿಕ ತಜ್ಞರ ತಂಡ ಈಗಾಗಲೇ ಎರಡು ಬಾರಿ ಡ್ಯಾಂಗೆ ಭೇಟಿ ನೀಡಿ ಪರಿಶೀಲಿಸಿದೆ. ಕೇಂದ್ರ ಜಲಶಕ್ತಿ ಆಯೋಗದ ಅಧಿಕಾರಿಗಳ ತಂಡ ಕಳೆದ ವಾರ ಜಲಾಶಯಕ್ಕೆ ಭೇಟಿ ನೀಡಿ ಸ್ಥಿತಿಗತಿ ಅಧ್ಯಯನ ಮಾಡಿರುವ ಈ ಬಗ್ಗೆ ತುಂಗಭದ್ರಾ ಜಲಾಶಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
“ಯಾವುದೇ ಜಲಾಶಯದ ಕ್ರೆಸ್ಟ್ಗೇಟ್ಗಳು, ಚೈನ್ ಲಿಂಕ್ಗಳನ್ನು ಪ್ರತಿ 50 ವರ್ಷಕ್ಕೊಮ್ಮೆ ಬದಲಾಯಿಸಬೇಕು. ಆದರೆ ತುಂಗಭದ್ರಾ ಜಲಾಶಯಕ್ಕೆ 70 ವರ್ಷಗಳ ಹಿಂದೆಯೇ ಕ್ರೆಸ್ಟ್ಗೇಟ್, ಚೈನ್ ಲಿಂಕ್ಗಳನ್ನು ಅಳವಡಿಸಲಾಗಿದೆ. ಆ ನಂತರ ಈವರೆಗೆ ಒಮ್ಮೆಯೂ ಬದಲಾಯಿಸಿಲ್ಲ. ಹೀಗಾಗಿ ಎಲ್ಲ 33 ಕ್ರೆಸ್ಟ್ಗೇಟ್ಗಳನ್ನು ಬದಲಿಸಬೇಕು ಎಂದು ಚರ್ಚೆಯಾಗುತ್ತಿದೆ” ಎಂದು ತಿಳಿಸಿದ್ದಾರೆ.
“ಜಲಾಶಯ ನಿರ್ವಹಣೆ ಮಾಡುವುದು ಹೈದರಾಬಾದ್ನಲ್ಲಿರುವ ತುಂಗಭದ್ರಾ ಜಲಾಶಯ ಮಂಡಳಿ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರವಿಲ್ಲ. ಮಂಡಳಿ ಗೇಟ್ ಬದಲಾವಣೆ ಮಾಡುವುದಾದರೆ ನಮ್ಮ ಪಾಲಿನ ಹಣವನ್ನು ನೀಡಲು ಸಿದ್ಧ” ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
“ಬೇಸಿಗೆ ಸಮಯದಲ್ಲಿ ಹೊಸ ಗೇಟ್ಗಳ ಅಳವಡಿಕೆ ಕಾರ್ಯ ಆರಂಭಿಸಲು ಬೇಕಾದ ಸಿದ್ದತೆಯನ್ನು ಈಗಿನಿಂದಲೇ ಆರಂಭಿಸಬೇಕಿದೆ. 33 ಗೇಟ್ಗಳ ಅಳವಡಿಕೆಗೆ ಸಾಕಷ್ಟು ಸಮಯ ಬೇಕಾಗಿರುವುದರಿಂದ ಈಗಲೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು”ಎಂದಿದ್ದಾರೆ.
ತುಂಗಭದ್ರಾ ಜಲಾಶಯ ಕರ್ನಾಟಕದ 4 ಜಿಲ್ಲೆಗಳು, ನೆರೆಯ ತೆಲೆಂಗಾಣ, ಆಂಧ್ರಪ್ರದೇಶ ಲಕ್ಷಾಂತರ ಜನರ ಬದುಕಿಗೆ ಆಶ್ರಯವಾಗಿದೆ. ಕಳೆದ ವರ್ಷ ಬರಗಾಲದಿಂದಾಗಿ ಜಲಾಶಯ ಪೂರ್ಣ ಪ್ರಮಾಣದಲ್ಲಿ ತುಂಬಿರಲಿಲ್ಲ. ಆದರೆ ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಆಗಸ್ಟ್ ಮೊದಲ ವಾರದಲ್ಲಿಯೇ ಭರ್ತಿಯಾಗಿತ್ತು. ಆದರೆ 2024 ರ ಆಗಸ್ಟ್ 10 ರಂದು ರಾತ್ರಿ ಸಮಯದಲ್ಲಿ ಡ್ಯಾಂನ 19 ನೇ ಕ್ರೆಸ್ಟಗೇಟ್ ಕೊಚ್ಚಿಕೊಂಡು ಹೋಗಿ ಅಪಾರ ಪ್ರಮಾಣದ ನೀರು ವ್ಯರ್ಥವಾಗಿತ್ತು. ನಂತರ ತಾತ್ಕಾಲಿಕ ಗೇಟ್ ಅಳವಡಿಕೆಯಿಂದ ಡ್ಯಾಂ ಮತ್ತೆ ಭರ್ತಿಯಾಯಿತು.