₹18,174 ಕೋಟಿ ರಾಜ್ಯದ ಬರಪರಿಹಾರ ಕೊಡಲು ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದೇವು. ಆದರೆ, ₹3,454 ಕೋಟಿ ಬರ ಪರಿಹಾರ ಕೊಡಲಾಗಿದೆ ಎಂಬುದು ಮಾಧ್ಯಮಗಳ ಮೂಲಕ ತಿಳಿದಿದೆ. ನಾವು ಕೇಳಿದ್ದರಲ್ಲಿ 1/4 ಕ್ಕಿಂತಲೂ ಕಡಿಮೆ ಇದೆ. ಇದು ಯಾವುದಕ್ಕೆ ಸಾಲುತ್ತೆ? ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚಿಸಿ ನಮ್ಮ ನಿಲುವು ತಿಳಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಕಲಬುರಗಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ದೇಶದಲ್ಲಿ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ನ ಕದ ತಟ್ಟಿದ್ದೇವೆ. ಸುಪ್ರೀಂ ಕೋರ್ಟ್ ತಿಳಿಸಿದ ಮೇಲೆ ಇಷ್ಟು ಕಡಿಮೆ ಬರಪರಿಹಾರ ಕೊಟ್ಟಿದೆ. ಏ.28ರಂದು ಸುಪ್ರೀಂ ಕೋರ್ಟ್ನಲ್ಲಿ ಈ ಬಗ್ಗೆ ವಿಚಾರಣೆ ಇದೆ. ಅಧಿಕಾರಿಗಳ ಜೊತೆ ಚರ್ಚಿಸಿ ನಮ್ಮ ವಾದ ಮಂಡಿಸುತ್ತೇವೆ” ಎಂದರು.
“ಸುಪ್ರೀಂ ಕೋರ್ಟ್ ಮುಂದೆ ರಾಜ್ಯ ಸರ್ಕಾರಗಳು ಬರುವುದು ಸರಿಯಲ್ಲ ಎಂದು ಸುಪ್ರೀಂ ಕೇಂದ್ರಕ್ಕೆ ಹೇಳಿದೆ. ಕೂಡಲೇ ಸರಿಪಡಿಸಿಕೊಳ್ಳಿ ಎಂದಿದೆ. ಹೀಗಾಗಿ ನಾಳೆ ವಿಚಾರಣೆ ಇದೆ. ಇಂದು ಬರಪರಿಹಾರ ಬಿಡುಗಡೆಯಾಗಿದೆ” ಎಂದರು.
“ನಾವು ಕಳೆದ ಸೆಪ್ಟೆಂಬರ್ನಲ್ಲೇ ಬರ ಪರಿಹಾರ ಕೇಳಿದ್ದೇವೆ. ₹35 ಸಾವಿರ ಕೋಟಿ ಬೆಳೆ ನಷ್ಟವಾಗಿದೆ. 48 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬೆಳೆ ನಷ್ಟವಾಗಿದೆ. ಈ ಬಗ್ಗೆ ನಾವು ಕೇಂದ್ರದ ಗಮನ ಸೆಳೆದಾಗ ಏನು ಹೇಳಿದ್ರು? ಮನವಿ ಕೊಡಲು ವಿಳಂಬವಾಗಿದೆ ಎಂದು ನಮ್ಮ ಮೇಲೆಯೇ ಗೂಬೆ ಕೂರಿಸಿದರು. ಬರಗಾಲಕ್ಕೆ ಮನವಿ ಕೊಟ್ಟಿಲ್ಲ, ಗ್ಯಾರಂಟಿಗಾಗಿ ದುಡ್ಡು ಕೇಳಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ನಾವು ನಮ್ಮ ಗ್ಯಾರಂಟಿಗಾಗಿ ಕೇಂದ್ರದ ಹತ್ತಿರ ₹1 ಕೂಡ ಕೇಳಲ್ಲ” ಎಂದರು.
“ಡಿಸೆಂಬರ್19 ರಂದು ಮೋದಿ ಅವರನ್ನು ಭೇಟಿ ಮಾಡಿದ್ದೆ. ಅವತ್ತು ಬರ ಪರಿಹಾರದ ಬಗ್ಗೆ ಗಮನಕ್ಕೆ ತಂದಿದ್ದೆ. ಸಂಬಂಧಿಸಿದವರಿಗೆ ಹೇಳುತ್ತೇನೆ ಎಂದು ಮೋದಿ ಭರವಸೆ ನೀಡಿದ್ದರು. ಡಿಸೆಂಬರ್ 20ಕ್ಕೆ ಅಮಿತ್ ಶಾ ಅವರನ್ನು ಕೃಷ್ಣಬೈರೇಗೌಡರ ಜೊತೆ ಭೇಟಿ ಆದೆ. ರಾಜ್ಯದ ಮನವಿಯನ್ನು ನಿರ್ಲಕ್ಷಿಸುತ್ತ ಬಂದ ಕೇಂದ್ರ ಸರ್ಕಾರ ಸುಪ್ರೀಂ ಹೇಳಿದ ಮೇಲೆ ಎಚ್ಚೆತ್ತುಕೊಂಡಿದೆ” ಎಂದು ಹೇಳಿದರು.