Homeಕರ್ನಾಟಕನರ್ಸ್‌ಗಳ ನವೀಕರಣಕ್ಕೆ ಡಿಜಿಟಲ್‌ ಸೇವಾ ಸೌಲಭ್ಯ

ನರ್ಸ್‌ಗಳ ನವೀಕರಣಕ್ಕೆ ಡಿಜಿಟಲ್‌ ಸೇವಾ ಸೌಲಭ್ಯ

– ವೃತ್ತಿ ಅರ್ಹತೆ ಬಗ್ಗೆ ನೋಂದಣಿ ಅಥವಾ ನವೀಕರಣ ಮಾಡಲು ಆನ್‌ಲೈನ್‌ ವ್ಯವಸ್ಥೆ

– ರಾಷ್ಟ್ರೀಯ ಮಟ್ಟದಲ್ಲಿ ಮೊದಲ ಬಾರಿಗೆ ಆಧಾರ್-ಡಿಜಿಲಾಕರ್ ಮೂಲಕ 2,000ಕ್ಕೂ ಹೆಚ್ಚು ಪ್ರಮಾಣಪತ್ರ ವಿತರಣೆ

ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಾಯಿಸಲಾದ ಲಕ್ಷಾಂತರ ಶುಶ್ರೂಷಕರು ತಮ್ಮ ವೃತ್ತಿಪರ ಅರ್ಹತೆಗಳನ್ನು ನವೀಕರಿಸಲು ಈಗ ಸುಲಲಿತ, ಸುಲಭ ವ್ಯವಸ್ಥೆ ಮಾಡಲಾಗಿದೆ.

ಎಲ್ಲೇ ಇದ್ದರೂ ನರ್ಸ್‌ಗಳು ಈಗ ತಮ್ಮ ವೃತ್ತಿ ಅರ್ಹತೆ ನೋಂದಣಿ ಅಥವಾ ನವೀಕರಣವನ್ನು ಆನ್‌ಲೈನ್‌ ಮೂಲಕ ಮಾಡಿಕೊಳ್ಳಬಹುದಾಗಿದೆ.

ಬೆಂಗಳೂರಿನ ಹೃದಯಭಾಗದಲ್ಲಿರುವ ಜನನಿಬಿಡ ಗಾಂಧಿನಗರ ರಸ್ತೆಗಳಲ್ಲಿ ನರ್ಸ್‌ಗಳ ಅಲೆದಾಡಬೇಕಾದ ಅವಶ್ಯಕತ ಇಲ್ಲ. ಭಾರತ ಮತ್ತು ವಿದೇಶಗಳಲ್ಲಿರುವ ಶುಶ್ರೂಷಕರು ಆಧಾರ್-ಡಿಜಿಲಾಕರ್ ಪ್ಲಾಟ್‌ಫಾರ್ಮ್ ಮೂಲಕ ತಮ್ಮ ನೋಂದಣಿ ನವೀಕರಣವನ್ನು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಲು ಕೌನ್ಸಿಲ್ ಅನುವು ಮಾಡಿಕೊಟ್ಟಿದೆ.

ಇತ್ತೀಚಿನವರೆಗೂ, ಕರ್ನಾಟಕ ಮೂಲದ ಸಂಸ್ಥೆಗಳಿಂದ ಕೋರ್ಸ್ಅನ್ನು ಪೂರ್ಣಗೊಳಿಸಿದ ಯಾವುದೇ ನರ್ಸ್, ಪ್ರತಿ ಐದು ವರ್ಷಗಳಿಗೊಮ್ಮೆ, ಗಾಂಧಿನಗರದಲ್ಲಿರುವ ಜನದಟ್ಟಣೆಯ ಕೌನ್ಸಿಲ್ ಕಚೇರಿಗೆ ಖುದ್ದಾಗಿ ಭೇಟಿ ನೀಡಬೇಕಾಗಿತ್ತು.

ಈಗ ಹೊಸ ವ್ಯವಸ್ಥೆ ಜಾರಿಗೆ ಬಂದಿರುವುದರಿಂದ ಯಾವುದೇ ಮೂಲೆಯಿಂದಾದರೂ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಬಹುದು. ಕೆಲವೇ ದಿನಗಳಲ್ಲಿ, ಕೌನ್ಸಿಲ್ ರಿಜಿಸ್ಟ್ರಾರ್ ಡಾ. ಕೆ. ಮಲ್ಲು ಅರ್ಜಿಯನ್ನು ಪರಿಶೀಲಿಸಿ ಅನುಮೋದಿಸುತ್ತಾರೆ ಮತ್ತು ನವೀಕರಿಸಿದ ಪ್ರಮಾಣಪತ್ರವನ್ನು ಅರ್ಜಿದಾರರ ಡಿಜಿಲಾಕರ್ ಖಾತೆಗೆ ನೇರವಾಗಿ ಕಳುಹಿಸಿಕೊಡಲಾಗುತ್ತದೆ.

ಕರ್ನಾಟಕದಲ್ಲಿ ನರ್ಸಿಂಗ್ ವೃತ್ತಿಪರರಲ್ಲಿ ಹೆಚ್ಚಿನವರು ಮಹಿಳೆಯರಾಗಿದ್ದು, ಕೇರಳದಿಂದ ರಾಜ್ಯದಲ್ಲಿ ನರ್ಸಿಂಗ್ ಶಿಕ್ಷಣವನ್ನು ಪಡೆಯಲು ಬಂದವರ ಸಂಖ್ಯೆಯೂ ಗಣನೀಯವಾಗಿದೆ.

ಡಿಜಿಲಾಕರ್ ಆಧಾರಿತ ವ್ಯವಸ್ಥೆಯನ್ನು ಆಗಸ್ಟ್ 2025 ರಲ್ಲಿ ಪರಿಚಯಿಸಲಾಗಿದ್ದರೂ, ಆರಂಭದಲ್ಲಿ ಇದು ಹೊಸ ನೋಂದಣಿಗಳಿಗೆ ಮಾತ್ರ ಲಭ್ಯವಿತ್ತು. *ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ್* ನರ್ಸ್‌ಗಳ ಸಮಸ್ಯೆಯನ್ನು ಕಂಡು ಕೂಡಲೇ ಪರಿಹಾರ ಸೂಚಿಸಲು ಕೌನ್ಸಿಲ್‌ಗೆ ನಿರ್ದೇಶನ ನೀಡಿದರು.

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (BMCRI) ಸಭಾಂಗಣದಲ್ಲಿ ನಡೆದ ಸಮಾರಂಭಲ್ಲಿ, ಸಚಿವ ಡಾ. ಪಾಟೀಲ್ ಡಿಜಿಟಲೀಕೃತ ನವೀಕರಣ ಪ್ರಕ್ರಿಯೆಯನ್ನು ಮಂಗಳವಾರ ಔಪಚಾರಿಕವಾಗಿ ಉದ್ಘಾಟಿಸಿದರು.

“ಇಡೀ ದೇಶದಲ್ಲಿ ಮೊದಲ ಬಾರಿಗೆ, 2,000 ಕ್ಕೂ ಹೆಚ್ಚು ಹೊಸ ದಾದಿಯರು ಆಧಾರ್-ಡಿಜಿಲಾಕರ್ ಮೂಲಕ ತಮ್ಮ ನೋಂದಣಿ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ. ಇದಕ್ಕೂ ಮೊದಲು, ದಾದಿಯರು ಕೌನ್ಸಿಲ್ ಕಚೇರಿಗೆ ಖುದ್ದಾಗಿ ಭೇಟಿ ನೀಡಬೇಕಾಗಿತ್ತು, ಅದು ತುಂಬಾ ಅನಾನುಕೂಲಕರವಾಗಿತ್ತು. ಈ ಕಷ್ಟವನ್ನು ಗುರುತಿಸಿ, ನೋಂದಣಿ ಮತ್ತು ನವೀಕರಣ ಎರಡಕ್ಕೂ ನಾವು ಈಗ ತಡೆರಹಿತ ಆನ್‌ಲೈನ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ,” ಎಂದರು,

ಈ ಡಿಜಿಟಲ್‌ ಸೇವೆ ಜಾರಿಗೆ ತರಲು ಪ್ರಮುಖ ಪಾತ್ರ ವಹಿಸಿದ ರಿಜಿಸ್ಟ್ರಾರ್ ಡಾ. ಕೆ. ಮಲ್ಲು ಅವರ ಕಾರ್ಯವನ್ನು ಸಚಿವರು ಶ್ಲಾಘಿಸಿದರು.

ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ. ಬಿ.ಎಲ್. ಸುಜಾತಾ ರಾಥೋಡ್, ಇಲಾಖೆಯ ಹಣಕಾಸು ಸಲಹೆಗಾರ ಡಾ. ಹನುಮಂತೇಗೌಡ ಮತ್ತು ಇತರ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments