ರಾಜ್ಯದ ಕಾಂಗ್ರೆಸ್ ಸರಕಾರದ ಪಾಪದ ಕೊಡ ತುಂಬಿದೆ. ಇವತ್ತಾ ನಾಳೆಯಾ ಎಂಬ ಪರಿಸ್ಥಿತಿಗೆ ಅದು ತಲುಪಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಬೆಂಗಳೂರು ನಗರದ ಫ್ರೀಡಂ ಪಾರ್ಕಿನಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕರ್ನಾಟಕ ರಾಜ್ಯ ಗುತ್ತಿಗೆ ಶುಶ್ರೂಷಾ ಅಧಿಕಾರಿಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದಡಿ ಹೋರಾಟ ನಡೆಸುತ್ತಿರುವ ಶುಶ್ರೂಷಾ ಅಧಿಕಾರಿಗಳ ನೋವಿನಲ್ಲಿ ನನಗೂ ಪಾಲಿದೆ. ನಿಮ್ಮ ಹೋರಾಟದಲ್ಲಿ ನಾನೂ ಜೊತೆಗೂಡುವೆ ಎಂದರು.
ಸದನದಲ್ಲಿ ನಿಮ್ಮ ಸಮಸ್ಯೆಗಳನ್ನು ಪಟ್ಟಿ ಮಾಡಿ ಈ ಸರಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇನೆ. ನಿಮ್ಮ ಸದಸ್ಯನ ರೂಪದಲ್ಲಿ ಅಲ್ಲಿ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು. ಸಂಸದ ಡಾ. ಮಂಜುನಾಥ್ ಅವರಿಂದ ನಿಮ್ಮ ಬೇಡಿಕೆಗಳ ಕುರಿತಂತೆ ವಿವರ ಪಡೆದುಕೊಳ್ಳುವೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ಜೊತೆ ಮಾತನಾಡುವೆ. ಆರೋಗ್ಯ ಸಚಿವರ ಆರೋಗ್ಯ ಸರಿಯಾದರೆ ಅವರ ಜೊತೆಗೂ ಮಾತನಾಡುವೆ ಎಂದು ತಿಳಿಸಿದರು. ಅವರು ವೈದ್ಯರೇನೂ ಅಲ್ಲ; ಆರೋಗ್ಯ ಸಚಿವರಾಗುವ ಯೋಗ್ಯತೆ ಅವರಲ್ಲಿಲ್ಲ ಎಂದು ವ್ಯಂಗ್ಯವಾಡಿದರು. ದನಗಳಿಗೆ ಕೊಡುವ ಔಷಧಿಯನ್ನೂ ಜನರಿಗೆ ಕೊಡುತ್ತಿದ್ದಾರೆ. ಕಳಪೆ ಔಷಧಿ ಖರೀದಿಸುವ ಕೆಲಸವನ್ನೂ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸಂಸದ ಡಾ. ಮಂಜುನಾಥ್ ಅವರು ಮಾತನಾಡಿ, ನಾವು ನಿಮ್ಮ ಜೊತೆ ಇದ್ದೇವೆ. ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಿಸುವುದು, ಖಾಯಂ ಮಾಡುವ ಬಗ್ಗೆ ಒತ್ತಾಯಿಸುತ್ತೇವೆ. ನರ್ಸ್ ಗಳು, ತಂತ್ರಜ್ಞರು ಸೇರಿ ವೈದ್ಯೇತರ ಸಿಬ್ಬಂದಿ ಅತ್ಯಂತ ಅನಿವಾರ್ಯ ಎಂದು ತಿಳಿಸಿದರು.