ನಮ್ಮ ಸಿ ಟಿ ರವಿ ಅವರಿಗೆ ಅನ್ಯಾಯ ಆಗಿರುವುದನ್ನು ಒಪ್ಪಿಕೊಳ್ಳುವೆ. ಬರುವ ದಿನಗಳಲ್ಲಿ ಅವರಿಗೆ ವಿಧಾನಸಭೆ ಅಥವಾ ವಿಧಾನ ಪರಿಷತ್ತಿನಲ್ಲಿ ಅವಕಾಶ ಕಲ್ಪಿಸಿ, ಅನ್ಯಾಯ ಸರಿಪಡಿಸಲಾಗುವುದು ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ಹೇಳಿದರು.
ಕಡೂರು ತಾಲ್ಲೂಕಿನ ಸಖರಾಯಪಟ್ಟಣದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಗುರುವಾರ ಮತನಾಡಿದ ಅವರು, “ವಿಧಾನಸಭೆಯಲ್ಲಿ ಗುಡುಗಬೇಕಿದ್ದವರು ಈಗ ಹೊರಗಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಸೂಕ್ತ ಅವಕಾಶ ಸಿಗಲೇಬೇಕು” ಎಂದರು.
ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ಮುಖಂಡ ಸಿ ಟಿ ರವಿ, “ನಮ್ಮ ನಾಯಕರ ಹೆಸರನ್ನೇ ಹೇಳಿಕೊಂಡು ವಿಧಾನಸಭೆ ಚುನಾವಣೆಯಲ್ಲಿ ಅಪಪ್ರಚಾರ ನಡೆಯಿತು. ಇದರಿಂದ ನಾನು ಸೋಲಬೇಕಾಯಿತು” ಎಂದು ತಿಳಿಸಿದರು.
“ಮಾದರಸನ ಕೆರೆ, ದಾಸರಹಳ್ಳಿ ಕೆರೆ ತುಂಬಿಸಿದಾಗ ಮತ್ತೆ ಮತ ಕೇಳಲು ಬರುವುದು ಬೇಡ, ನಾವೇ ಮತ ಹಾಕುತ್ತೇವೆ ಎಂದು ಜನ ಹೇಳಿದ್ದರು. ಚುನಾವಣೆ ಸಂದರ್ಭದಲ್ಲಿ ಕೆಲಸದ ಚರ್ಚೆ ಆಗದೇ, ನನ್ನ ವಿರುದ್ಧ ಅಪಪ್ರಚಾರ ನಡೆಯಿತು. ಜೆಡಿಎಸ್ನವರೂ ಅವರಿಗೇ ಬೆಂಬಲ ನೀಡಿದರು” ಎಂದರು.
“ಕಾಂಗ್ರೆಸ್ಗೆ ಮತ ಹಾಕಿ ಗೂಟ ಹೊಡೆಸಿಕೊಳ್ಳಬೇಕಾಯಿತು. ದುಡಿಯುವ ಎತ್ತಿಗೆ ಮೇವು ಹಾಕಬೇಕು ಎಂಬುದನ್ನು ಜನ ಯೋಚನೆ ಮಾಡಬೇಕಿತ್ತು. ಮುಂದೆ ಗೂಟ ಹೊಡೆಸಿಕೊಳ್ಳಬಾರದು ಎಂದಾದರೆ ಬಿಜೆಪಿಗೆ ಮತ ಹಾಕಿ” ಎಂದು ಹೇಳಿದರು.