ದೇಶದಲ್ಲೇ ಮೊದಲ ಎನ್ನಲಾದ, ಬಹು ಮಹತ್ವಾಕಾಂಕ್ಷೆಯ ‘ನಾಲೆಡ್ಜ್, ಹೆಲ್ತ್ ಇನ್ನೋವೇಶನ್ ಮತ್ತು ರೀಸರ್ಚ್ ಸಿಟಿ’ (ಕೆಎಚ್ಐಆರ್ ಸಿಟಿ) ಯೋಜನೆಯ ಮೊದಲನೇ ಹಂತಕ್ಕೆ ಆ.23ರ ಶುಕ್ರವಾರ ಚಾಲನೆ ನೀಡಲಾಗುವುದು ಎಂದು ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ.
ಶನಿವಾರ ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, “ನಗರದಿಂದ 60 ಕಿ.ಮೀ. ದೂರದಲ್ಲಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಒಟ್ಟು 2,000 ಎಕರೆಯಲ್ಲಿ ಕೆಎಚ್ಐಆರ್ ಸಿಟಿ ಅಭಿವೃದ್ಧಿಪಡಿಸಲಾಗುವುದು. ಮೊದಲ ಹಂತದಲ್ಲಿ ಒಂದು ಸಾವಿರ ಎಕರೆ ಜಾಗದಲ್ಲಿ ಯೋಜನೆ ತಲೆ ಎತ್ತಲಿದೆ. ಒಟ್ಟು ಎರಡೂ ಹಂತಗಳಲ್ಲಿ 40 ಸಾವಿರ ಕೋಟಿ ರೂ.ಗಳಿಗಿಂತಲೂ ಹೆಚ್ಚು ಹೂಡಿಕೆ ಆಗಲಿದ್ದು, 50 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ” ಎಂದು ಹೇಳಿದ್ದಾರೆ.
“ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಉದ್ಯಮ ವಲಯದ ಪ್ರಮುಖರು ಕೂಡ ಭಾಗವಹಿಸಲಿದ್ದು, ಹೆಸರುಗಳು ಅಂತಿಮವಾಗುತ್ತಿವೆ. ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿಯೂ ವಿಶೇಷ ನಗರಗಳ ಪರಿಕಲ್ಪನೆ ಇದೆ. ಕೇಂದ್ರ ಸರ್ಕಾರ ಕೂಡ ಇದೇ ಮಾದರಿಯನ್ನು ಅನುಸರಿಸುತ್ತದೆ” ಎಂದಿದ್ದಾರೆ.
“ಕೆಎಚ್ಐಆರ್ ಸಿಟಿಯಲ್ಲಿ ನಾಲ್ಕೂ ವಲಯಗಳಲ್ಲಿನ ಜಾಗತಿಕ ಮಟ್ಟದ ಅತ್ಯುನ್ನತ ಕಂಪನಿಗಳು ನೆಲೆಯೂರಲಿವೆ. ಇದಕ್ಕೆ ಬೇಕಾದ ಜಮೀನು, ವಿದ್ಯುತ್, ನೀರು, ರಸ್ತೆ ಮತ್ತಿತರ ಸೌಲಭ್ಯಗಳನ್ನು ರಾಜ್ಯ ಸರಕಾರ ಒದಗಿಸಲಿದೆ. ಇದರಿಂದ ಆರ್ಥಿಕ ವರಮಾನ ಹೆಚ್ಚಳದ ಜೊತೆಗೆ ರಫ್ತು ವಹಿವಾಟು ಕೂಡ ವೃದ್ಧಿಸಲಿದೆ. ಇದರಿಂದಾಗಿ ಬೆಂಗಳೂರು ನಗರವು ಇನ್ನೊಂದು ಸ್ತರ ಮೇಲೇರಲಿದೆ” ಎಂದು ಹೇಳಿದ್ದಾರೆ.