ಜೆಡಿಎಸ್ ಜೊತೆಗೆ ಮೈತ್ರಿ ಆದರೆ ಒಳಒಪ್ಪಂದ ಯಾರ ಜೊತೆಗೆ ಎಂಬುದನ್ನು ಬಿ ಎಸ್ ಯಡಿಯೂರಪ್ಪ ಮತ್ತು ಮಕ್ಕಳು ಸ್ಪಷ್ಟಪಡಿಸಬೇಕು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಶಿವಮೊಗ್ಗದ ತಮ್ಮ ಚುನಾವಣೆ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, “ನಾನು ಯೋಚಿಸಿಯೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವೆ. ರಾಜಕೀಯ ಬಲಿದಾನಕ್ಕೂ ನಾನು ಸಿದ್ಧ. ಬಿಜೆಪಿಯಲ್ಲಿ ಮಗನಿಗೆ ಭವಿಷ್ಯ ಸಿಗಲ್ಲ, ನನಗೂ ಭವಿಷ್ಯ ಇಲ್ಲ ಎಂದೇ ತೀರ್ಮಾನಿಸಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಜನ ಕೈಹಿಡಿಯಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಯಡಿಯೂರಪ್ಪ ಜೆಡಿಎಸ್ ಎಂದು ಪ್ರಸ್ತಾಪಿಸದೇ ಮೈತ್ರಿ ಮುಂದುವರಿಯುತ್ತೆ ಅಂದಿದ್ದಾರೆ. ಹಾಗಾದರೆ, ಅವರ ಒಳ ಒಪ್ಪಂದ ಯಾರ ಜತೆಗಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದರು” ಎಂದು ಆರೋಪಿಸಿದರು.
“ಒಳ ಒಪ್ಪಂದ ವ್ಯವಸ್ಥೆ ಬಿಜೆಪಿಯಲ್ಲಿ ಇರಲಿಲ್ಲ. ನಾವು ನೇರವಾಗಿ ಕಾಂಗ್ರೆಸ್ ಗೆ ಶೆಡ್ಡು ಹೊಡೆದು 108 ಸೀಟು ಪಡೆದಿದ್ದೇವು. ಹಿಂದುತ್ವ ವಿಚಾರ ಪಕ್ಕಕ್ಕೆ ಸರಿಸಿ, ಜಾತಿ ರಾಜಕಾರಣ ಮತ್ತು ಒಳ ಒಪ್ಪಂದಿಂದಾಗಿ 60ಕ್ಕೆ ಬಂದು ಬಿಜೆಪಿ ತಲುಪಿದೆ. ಹೀಗೆ ಮುಂದುವರಿದರೆ ರಾಜ್ಯದಲ್ಲಿ ದೊಡ್ಡ ಆಘಾತ ಆಗಲಿದೆ” ಎಂದರು.
ಈಶ್ವರಪ್ಪ ಅಂದರೆ ಯಾರು ಎಂದು ನನಗೆ ಗೊತ್ತಿಲ್ಲ ಎಂದಿದ್ದ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ಅವರಿಗೆ ಈಶ್ವರಪ್ಪ ನೀಡಿ, “ರಾಧಾಮೋಹನ್ ಅಗರ್ವಾಲ್ ಅವರಿಗೆ ನಾನು ಯಾರೆಂದು ಗೊತ್ತಿಲ್ಲವೆಂದ ಮೇಲೆ ಈ ಹಿಂದೆ ನನ್ನ ಮನೆಗೇಕೆ ಬಂದಿದ್ದರು” ಎಂದು ಪ್ರಶ್ನಿಸಿದರು.
“ತಾಕತ್ತಿದ್ದರೆ ವಿಜಯೇಂದ್ರನೂ ಇನ್ಮುಂದೆ ಮಾತಾಡ್ಲಿ ನೋಡೋಣ. ಶೇ.70 ಬಿಜೆಪಿ ಕಾರ್ಯಕರ್ತರು ನನ್ನ ಜತೆಗಿದ್ದಾರೆ. ರಾಘವೇಂದ್ರ ಅವರ ಮನೆಗೆ ಭೇಟಿಯೇ ಮಾಡಿಲ್ಲ. ಸಿದ್ಧಾಂತ ಒಪ್ಪಿಯೇ ಬೆಂಬಲಿಸುತ್ತಿದ್ದಾರೆ.
ಅಭಿವೃದ್ಧಿ ಮಾಡೇ ಮಾಡುತ್ತೇನೆ. ಅದು ಜನರಿಗೂ ಗೊತ್ತಿದೆ. ಹೀಗಾಗಿಯೇ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿಲ್ಲ. ಮಾಡುವುದೂ ಇಲ್ಲ. ಸುಳ್ಳು ಭರವಸೆ ನೀಡಲ್ಲ” ಎಂದರು.
ಮೋದಿ ಚಿತ್ರ ಹೃದಯದಿಂದ ತೆಗೆಯಲು ಸಾಧ್ಯವೇ?
“ನ್ಯಾಯಾಲಯ ಯಾವುದೇ ತೀರ್ಪು ನೀಡಲಿ. ಹೃದಯದಿಂದ ಮೋದಿ ಚಿತ್ರ ತೆಗೆಯಕ್ಕಾಗುತ್ತಾ? ರಾಮನ ಸಂಸ್ಕೃತಿಯನ್ನು ಎಲ್ಲ ರಾಷ್ಟ್ರಗಳಲ್ಲಿ ಅಳವಡಿಸುವ ಕೆಲಸ ಮೋದಿ ಮಾಡುತ್ತಿದ್ದಾರೆ. ಮೋದಿ ಆಡಳಿತವನ್ನು ಮೆಚ್ಚುತ್ತಿದೆ. ವಿಶ್ವಶಾಂತಿಗೂ ಇದು ನಾಂದಿ ಆಗಲಿದೆ. ಎಲ್ಲರಿಗೂ ರಾಮನವಮಿ ಶುಭಾಶಯಗಳು” ಎಂದು ತಿಳಿಸಿದರು.