ಸಂವಿಧಾನ ದಿನವಾದ ನವೆಂಬರ್ 26ರಿಂದ ಆರಂಭವಾಗಲಿರುವ ಮೂರು ದಿನಗಳ ಸಾಂವಿಧಾನಿಕ ಸಾಕ್ಷರತೆಯ ಬಗ್ಗೆ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ. ಭಾರತವು ಬಾಬಾ ಸಾಹೇಬ್ ಅಂಬೇಡ್ಕರ್ ರಚಿತ ಸಂವಿಧಾನವನ್ನು ಅಂಗೀಕರಿಸಿ, ಸಂವಿಧಾನವನ್ನು ನಮಗೆ ನಾವೇ ವಿಧಿಸಿಕೊಂಡು 75ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ರಾಜ್ಯದಾದ್ಯಂತ ಈ ಅಭಿಯಾನ ನಡೆಯಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಎಕ್ಸ್ ತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿತರುವ ಅವರು, “ಸಂವಿಧಾನ ನಮ್ಮೆಲ್ಲರಿಗೂ ಹಕ್ಕುಗಳನ್ನು ನೀಡಿದೆ, ಘನತೆಯ ಬದುಕನ್ನು ನೀಡಿದೆ. ಸಮಾನತೆಯನ್ನು ಪ್ರತಿಪಾದಿಸಿದೆ. ಸಂವಿಧಾನವನ್ನು ನಾವು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ. ಧರ್ಮೋ ರಕ್ಷತಿ ರಕ್ಷಿತಃ ಎನ್ನುವುದಕ್ಕಿಂತ “ಸಂವಿಧಾನ ರಕ್ಷತಿ ರಕ್ಷಿತಃ“ ಎನ್ನುವುದು ನಮ್ಮೆಲ್ಲರ ಧ್ಯೇಯವಾಕ್ಯವಾಗಬೇಕು” ಎಂದಿದ್ದಾರೆ.
“ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯದ ತತ್ವಗಳನ್ನು ಎತ್ತಿ ತೋರಿಸಲಾಗುತ್ತದೆ, ಜೊತೆಗೆ ಸಾರ್ವಜನಿಕ ಆಸ್ತಿ, ನೈಸರ್ಗಿಕ ಸಂಪನ್ಮೂಲಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಸಕ್ರಿಯ ಪೌರತ್ವಕ್ಕಾಗಿ ಸಾರ್ವಜನಕರಿಗೆ ಅಭಿಯಾನದಲ್ಲಿ ಕರೆ ನೀಡಲಾಗುವುದು” ಎಂದು ಹೇಳಿದ್ದಾರೆ.
- ಸಂವಿಧಾನ ದಿನವನ್ನು ಆಚರಿಸಲು ಮತ್ತು ಸಾಂವಿಧಾನಿಕ ಮೌಲ್ಯಗಳ ಜಾಗೃತಿಯನ್ನು ಉತ್ತೇಜಿಸಲು, ಕರ್ನಾಟಕದಾದ್ಯಂತ ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಸಂವಿಧಾನ ಸಾಕ್ಷರತಾ ಕಾರ್ಯಕ್ರಮವನ್ನು ನಡೆಸಲಾಗುವುದು.
- ಸಂವಿಧಾನದ ಮೂಲ ಮೌಲ್ಯಗಳನ್ನು ಅರಿಯಲು ನಾಗರಿಕರನ್ನು ಪ್ರೇರೇಪಿಸುವಂತೆ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದ್ದು ಸಂವಿಧಾನದ ಸುಸ್ಥಿರತೆ, ಸಾಂಸ್ಕೃತಿಕ ಸಂರಕ್ಷಣೆ ಮತ್ತು ಸಮುದಾಯ ಯೋಗಕ್ಷೇಮವನ್ನು ಬೆಂಬಲಿಸುವ ಕ್ರಮಗಳಿಗೆ ಒತ್ತು ನೀಡಲಾಗುವುದು.
- ಸಂವಾದಾತ್ಮಕ ಚರ್ಚೆಗಳು, ಸೃಜನಶೀಲ ಚಟುವಟಿಕೆಗಳು ಮತ್ತು ಸಮುದಾಯ ಕಾರ್ಯಕ್ರಮಗಳ ಮೂಲಕ ಸಂವಿಧಾನವನ್ನು ಜನಜೀವನದ ಹತ್ತಿರ ತೆಗೆದುಕೊಂಡು ಹೋಗಲು ಪ್ರಯತ್ನಿಸಲಾಗುವುದು.
- ಉದ್ಘಾಟನಾ ಸಮಾರಂಭದ ಅಂಗವಾಗಿ, ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿರುವ ಗ್ರಾಮೀಣ ಗ್ರಂಥಾಲಯಗಳಲ್ಲಿ ನಾಗರಿಕರಿಂದ ಏಕಕಾಲದಲ್ಲಿ ಸಂವಿಧಾನ ಪೀಠಿಕೆಯ ಪಠಣ ನಡೆಯಲಿದೆ. ಮೂರು ದಿನಗಳ ಅಭಿಯಾನವು ಸಂವಿಧಾನ ಹೇಳುವ ನಾಲ್ಕು ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ.
ಸಾರ್ವಜನಿಕ ಆಸ್ತಿ ರಕ್ಷಣೆ: ಆರ್ಟಿಕಲ್ 51A(i)ನಲ್ಲಿ ಹೇಳಿರವಂತೆ ಈ ಥೀಮ್ ಸರೋವರಗಳು, ಉದ್ಯಾನವನಗಳು ಮತ್ತು ಸ್ಮಾರಕಗಳಂತಹ ಸಾರ್ವಜನಿಕ ಸ್ಥಳಗಳನ್ನು ಸಂರಕ್ಷಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.
ನೈಸರ್ಗಿಕ ಸಂಪನ್ಮೂಲಗಳು ಮತ್ತು ಸುಸ್ಥಿರತೆ: ಆರ್ಟಿಕಲ್ 48Aಯಿಂದ ಸ್ಫೂರ್ತಿ ಪಡೆದ ಈ ಥೀಮ್ ಪರಿಸರ ಸಂರಕ್ಷಣೆ, ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಅಭ್ಯಾಸಗಳ ಮೇಲೆ ಕೇಂದ್ರೀಕರಿಸುತ್ತದೆ.
ವೈಜ್ಞಾನಿಕ ಮನೋಧರ್ಮ ಮತ್ತು ತರ್ಕಬದ್ಧ ಚಿಂತನೆ: ಆರ್ಟಿಕಲ್ 51A(hನಲ್ಲಿ ಲಭ್ಯವಾಗಿರುವ ಈ ವಿಷಯವು ವಿಚಾರಣೆ, ನಾವೀನ್ಯತೆ ಮತ್ತು ತರ್ಕಬದ್ಧ ಚಿಂತನೆಯ ಮನೋಭಾವವನ್ನು ಬೆಳೆಸಲು ನಾಗರಿಕರನ್ನು ಪ್ರೋತ್ಸಾಹಿಸುತ್ತದೆ.
“ಕಾರ್ಯಕ್ರಮದ ಭಾಗವಾಗಿ, ಎಲ್ಲ ವಯೋಮಾನದ ನಾಗರಿಕರು ಸಾಂವಿಧಾನಿಕ ಮೌಲ್ಯಗಳಲ್ಲಿ ಬೇರೂರಿರುವ ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ನಾಗರಿಕರನ್ನು ತೊಡಗಿಸಿಕೊಳ್ಳಲು ರಸಪ್ರಶ್ನೆಗಳು, ಒಗಟುಗಳು ಮತ್ತು ಪ್ರಬಂಧ ಬರವಣಿಗೆ ಸೇರಿದಂತೆ ವಿವಿಧ ಸಂವಾದಾತ್ಮಕ ಕಾರ್ಯಗಳನ್ನು ಗ್ರಾಮೀಣ ಗ್ರಂಥಾಲಯಗಳು ಆಯೋಜಿಸುತ್ತವೆ. ಸುಸ್ಥಿರತೆ, ವೈವಿಧ್ಯತೆ, ವೈಜ್ಞಾನಿಕ ಅರಿವು ಮತ್ತು ನಾಗರಿಕ ಕರ್ತವ್ಯಗಳ ಮೇಲೆ ಕೇಂದ್ರೀಕರಿಸಿದ ತಜ್ಞರ ಮಾತುಕತೆಗಳು ಮತ್ತು ಸಂವಾದಾತ್ಮಕ ಚರ್ಚೆಗಳನ್ನು ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ನಡೆಸಲಾಗುವುದು” ಎಂದು ವಿವರಿಸಿದ್ದಾರೆ.
“ಇಡೀ ವರ್ಷ ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು, ವರ್ಷದುದ್ದಕ್ಕೂ, ಅರಿವು ಕೇಂದ್ರಗಳಲ್ಲಿ ಮಾಸಿಕ ಕಾರ್ಯಕ್ರಮಗಳ ಮೂಲಕ ನಾಗರಿಕರನ್ನು ಚರ್ಚೆಗಳು ಮತ್ತು ಸಂವಾದಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸುತ್ತದೆ. ಸಂವಿಧಾನವನ್ನು ಜೀವಂತ ದಾಖಲೆಯನ್ನಾಗಿ ಮಾಡಲು, ಪ್ರಜಾಪ್ರಭುತ್ವದಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಮತ್ತು ಅಂತರ್ಗತ ಮತ್ತು ಜಾಗೃತ ಸಮಾಜವನ್ನು ಬೆಳೆಸಲು ಸರ್ಕಾರವು ಬದ್ಧತೆ ಹೊಂದಿದೆ” ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.