ಅತ್ಯಂತ ಬಡ ರೈತನ ಮಗನಾದ ನನಗೆ ಈ ದೇಶದ ಸಂವಿಧಾನ ಎಲ್ಲವನ್ನೂ ಕೊಟ್ಟಿದೆ ಎಂದು ರಾಜ್ಯಸಭೆಯಲ್ಲಿ ಮಂಗಳವಾರ ಭಾವಪೂರ್ಣವಾಗಿ ಮಾತನಾಡಿದ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು, “ಸಂವಿಧಾನದ ಬಲದಿಂದಲೇ ನಾನು ಮುಖ್ಯಮಂತ್ರಿ, ಪ್ರಧಾನಮಂತ್ರಿ” ಆಗುವಂತೆ ಆಯಿತು ಎಂದರು.
ಸಂವಿಧಾನವನ್ನು ಅಳವಡಿಸಿಕೊಂಡ 75 ವರ್ಷಗಳ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಭಾಷಣ ಮಾಡಿದ ಅವರು; “ಸಂವಿಧಾನ ನನಗೆ ಎಲ್ಲವನ್ನೂ ಕೊಟ್ಟಿದೆ. ಒಬ್ಬ ಬಡ ರೈತನ ಮಗನಾಗಿ, ದೂರದ ಹಳ್ಳಿಯಿಂದ ಮತ್ತು ಜಾತಿ ಸ್ತರದ ಕೆಳಮದಿಂದ ನಾನು ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಲು ಸಾಧ್ಯವಾಗಿದ್ದರೆ ಅದು ನಮ್ಮ ಸಂವಿಧಾನದಿಂದ” ಮಾತ್ರ ಎಂದರು.
ಕಳೆದ 75 ವರ್ಷಗಳ ಅವಧಿಯಲ್ಲಿ ಸಂವಿಧಾನದ ಚೌಕಟ್ಟಿನಲ್ಲಿ ಭಾರತದ ಬೆಳೆದ ರೀತಿ, ಮಾಡಿದ ಸಾಧನೆಗಳ ಬಗ್ಗೆ ಮಾಜಿ ಪ್ರಧಾನಿಗಳು ಅನೇಕ ಮಹತ್ವಪೂರ್ಣ ಅಂಶಗಳನ್ನು ಸದನದಲ್ಲಿ ಹಂಚಿಕೊಂಡರು. “ಆಧುನಿಕ ಭಾರತವನ್ನು ರೂಪಿಸುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿಯ ಸಂವಿಧಾನ ಅಸಾಧಾರಣ ಕೊಡುಗೆ ನೀಡಿದೆ. ಬಾಬಾ ಸಾಹೇಬ್ ಅವರ ನೇತೃತ್ವದಲ್ಲಿ ರಚನೆಯಾದ ನಮ್ಮ ಸಂವಿಧಾನವು ಅನೇಕ ಒತ್ತಡಗಳು ಮತ್ತು ನಮ್ಮ ಕಾಲದ ರಾಜಕೀಯವನ್ನು ತಡೆದುಕೊಂಡು ನಿಂತಿದೆ” ಎಂದು ಅವರು ಹೇಳಿದರು.
“ತುರ್ತು ಪರಿಸ್ಥಿತಿಯ ಕಾಲ ಕರಾಳ ಅವಧಿ. ಐವತ್ತು ವರ್ಷಗಳ ಹಿಂದೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ, ಈ ರಾಷ್ಟ್ರದ ಬಹುತೇಕ ರಾಜಕೀಯ ವಿರೋಧಿಗಳೆಲ್ಲರೂ ಜೈಲು ಪಾಲಾದರು. ಸರಕಾರದ ವಿರುದ್ಧ ಟೀಕೆ ಮಾಡುತ್ತಿದ್ದವರು ಎಲ್ಲರನ್ನೂ ಜೈಲಿಗೆ ಕಳುಹಿಸಲಾಯಿತು. ನನ್ನನ್ನೂ ಜೈಲಿಗೆ ಕಳುಹಿಸಲಾಯಿತು. ನನ್ನ ಸೆರೆವಾಸವು ನನ್ನ ತಂದೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿ ಕುಟುಂಬದ ಮೇಲೆ ಮಾನಸಿಕ ಒತ್ತಡ ಉಂಟು ಮಾಡಿತು. ಕೊನೆಗೆ ಆ ನೋವಿನಲ್ಲಿಯೇ ತಂದೆಯವರು ವಿಧಿವಶರಾದರು. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ಮತ್ತು ತಮ್ಮ ರಾಜಕೀಯ ನಂಬಿಕೆಗಳ ಜತೆ ನಿಂತಿದ್ದ ಅನೇಕರಿಗೆ ಇದು ಆಘಾತಕಾರಿ ಸಮಯವಾಗಿತ್ತು” ಎಂದು ತಿಳಿಸಿದರು.
“ತುರ್ತು ಪರಿಸ್ಥಿತಿ ಅವಧಿಯಲ್ಲಿ ಭಾರತ ಅನೇಕ ಪಾಠಗಳನ್ನು ಕಳಿತುಕೊಂಡಿತು. ಆ ಸಮಯದಲ್ಲಿಯೇ ರಾಷ್ಟ್ರವು ಸಂವಿಧಾನವು ನಮಗೆ ನೀಡಿದ ಸ್ವಾತಂತ್ರ್ಯ ಎಂತಹುದು ಎಂಬುದನ್ನು ಅರಿತುಕೊಂಡಿತು. ಯುವ ಪೀಳಿಗೆಯು ಪ್ರಜಾಪ್ರಭುತ್ವವನ್ನು ಸಂರಕ್ಷಿಸಲು ತುರ್ತು ಪರಿಸ್ಥಿತಿ ಸಮಯದಲ್ಲಿ ಅನೇಕರು ಮಾಡಿದ ತ್ಯಾಗವನ್ನು ಸ್ಮರಿಸಬೇಕು. ನಮ್ಮ ಸಂವಿಧಾನ ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದು. ಅಂತಹ ಮಹೋನ್ನತ ಸಂವಿಧಾನವನ್ನು ನಾವು ಹೊಂದಿದ್ದೇವೆ. ಇದರ ಸಂರಚನೆ ನಮ್ಮ ವೈವಿಧ್ಯತೆ ಮತ್ತು ಒಕ್ಕೂಟ ವ್ಯವಸ್ಥೆಯ ರಚನೆಯನ್ನು ಗುರುತಿಸುವಾಗ ಪ್ರಜಾಪ್ರಭುತ್ವದ ವಿವಿಧ ಸಾಂಸ್ಥಿಕ ಸ್ತಂಭಗಳ ನಡುವೆ ಅಧಿಕಾರದ ಸಮತೋಲನವನ್ನು ಸಂವಿಧಾನವು ಅತ್ಯಂತ ಬಲವಾಗಿ ಎತ್ತಿ ಹಿಡಿದಿದೆ” ಎಂದು ಅವರು ಹೇಳಿದರು.
“1977ರ ನಂತರ ಭಾರತದಲ್ಲಿ ಸಮ್ಮಿಶ್ರ ಸರಕಾರಗಳ ಯಶಸ್ಸು ಸಂವಿಧಾನದ ಸದೃಢತೆಗೆ ಹಿಡಿದ ಕನ್ನಡಿ. ನಾನು ಮೊದಲ ಬಾರಿಗೆ 13 ಪಕ್ಷಗಳ ಒಕ್ಕೂಟವನ್ನು ಮುನ್ನಡೆಸಿದ್ದೇನೆ. ಆ ಸರಕಾರದ ಆರ್ಥಿಕ ಸಾಧನೆಯ ಪ್ರಜಾಪ್ರಭುತ್ವದೆಡೆಗಿನ ಹೆಗ್ಗುರುತುಗಳನ್ನು ಗಮನಿಸಿದರೆ ನಮ್ಮ ಸಂವಿಧಾನದ ಶಕ್ತಿ ಎಂತದ್ದು ಎನ್ನುವುದು ಅರ್ಥವಾಗುತ್ತದೆ. ನಾನು ಅನುಸರಿಸಿದ ಸರಳ ನಿಯಮವೆಂದರೆ, ನೀವು ಸಂವಿಧಾನವನ್ನು ನಿಕಟವಾಗಿ ಮತ್ತು ನಿಷ್ಠೆಯಿಂದ ಅನುಸರಿಸಿದರೆ, ನಾವು ದೊಡ್ಡ ತಪ್ಪುಗಳನ್ನು ತಪ್ಪಿಸಬಹುದು” ಎಂದರು.
“ಸಂವಿಧಾನದ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯಲು ನಿರಂತರ ಪ್ರಯತ್ನಗಳು ನಡೆಯಬೇಕು. ಇಂತಹ ಪ್ರಯತ್ನವನ್ನು ನಾವು ಎಂದಿಗೂ ಕೈಬಿಡಬಾರದು. ನಾವು ನಮ್ಮ ಸಂವಿಧಾನ ಅಳವಡಿಸಿಕೊಂಡ ಶತಮಾನೋತ್ಸವವನ್ನು ಆಚರಿಸೋಣ ಮತ್ತು ಈ ರಾಷ್ಟ್ರದ ಭವ್ಯ ಭವಿಷ್ಯದಲ್ಲಿ ಅದರ ಅನೇಕ ಶತಮಾನಗಳನ್ನು ಆಚರಿಸೋಣ” ಎಂದು ಕರೆ ನೀಡಿ ಸಂವಿಧಾನಕ್ಕೆ ಕೊಡುಗೆ ನೀಡಿದ ಡಾ.ಅಂಬೇಡ್ಕರ್ ಮತ್ತು ಇತರರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.