Homeಕರ್ನಾಟಕಬಣ ಬಡಿದಾಟ ಬದಿಗೊತ್ತಿ ಕೋಲಾರಕ್ಕೆ ಅಚ್ಚರಿ ಅಭ್ಯರ್ಥಿ ಹೆಸರು ಘೋಷಿಸಿದ ಕಾಂಗ್ರೆಸ್

ಬಣ ಬಡಿದಾಟ ಬದಿಗೊತ್ತಿ ಕೋಲಾರಕ್ಕೆ ಅಚ್ಚರಿ ಅಭ್ಯರ್ಥಿ ಹೆಸರು ಘೋಷಿಸಿದ ಕಾಂಗ್ರೆಸ್

ಕಗ್ಗಂಟಾಗಿ ಉಳಿದಿದ್ದಿ ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್‌ ವಿಚಾರದಲ್ಲಿ ಸಚಿವ ಕೆ ಎಚ್‌ ಮುನಿಯಪ್ಪ ಮತ್ತು ಮಾಜಿ ಸಭಾಧ್ಯಕ್ಷ ಕೆ ಆರ್‌ ರಮೇಶ್‌ ಕುಮಾರ್ ಬಣಗಳನ್ನು ಬದಿಗೊತ್ತಿರುವ ಕಾಂಗ್ರೆಸ್‌, ಅಚ್ಚರಿ ಎಂಬಂತೆ ಕೋಲಾರದ ಮಾಜಿ ಮೇಯರ್ ವಿಜಯ್ ಕುಮಾರ್ ಪುತ್ರ ಕೆ ವಿ ಗೌತಮ್‌ ಅವರಿಗೆ ಟಿಕೆಟ್‌ ಘೋಷಿಸಿದೆ.

ಶುಕ್ರವಾರ ಬಾಕಿ ಉಳಿದಿದ್ದ ಚಾಮರಾಜನಗರಕ್ಕೆ ಸಚಿವ ಎಚ್‌ ಸಿ ಮಹದೇವಪ್ಪ ಪುತ್ರ ಸುನಿಲ್‌ ಭೋಸ್‌, ಬಳ್ಳಾರಿಗೆ ಇ ತುಕಾರಾಮ್‌ ಹಾಗೂ ಚಿಕ್ಕಬಳ್ಳಾಪುರಕ್ಕೆ ರಕ್ಷಾ ರಾಮಯ್ಯ ಅವರನ್ನು ಅಭ್ಯರ್ಥಿಗಳಾಗಿ ಘೋಷಿಸಿದ್ದ ಕಾಂಗ್ರೆಸ್‌, ಕೋಲಾರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಇದೀಗ, ಆ ಕ್ಷೇತ್ರಕ್ಕೂ ಅಭ್ಯರ್ಥಿಯನ್ನು ಘೋಷಿಸಿಸುವ ಮೂಲಕ ಎಲ್ಲ 28 ಕ್ಷೇತ್ರಗಳಿಗೂ ಟಿಕೆಟ್‌ ಘೋಷಿಸಿದಂತಾಗಿದೆ.

ಕೋಲಾರದಲ್ಲಿ ಲೋಕಸಭೆ ಚುನಾವಣಾ ಟಿಕೆಟ್‌ ಸಂಬಂಧ ಕಾಂಗ್ರೆಸ್‌ನಲ್ಲಿ ಸಚಿವ ಕೆ ಎಚ್‌ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್‌ ಕುಮಾರ್‌ ಬಣಗಳ ನಡುವೆ ಜಗ್ಗಾಟ ನಡೆಯುತ್ತಿತ್ತು. ಮುನಿಯಪ್ಪ ಅವರು ತಮ್ಮ ಅಳಿಯ ಚಿಕ್ಕ ಪೆದ್ದಣ್ಣ ಅವರಿಗೆ ಟಿಕೆಟ್ ಕೊಡಿಸಲು ಯತ್ನಿಸುತ್ತಿದ್ದರು. ಹನುಮಂತಯ್ಯಗೆ ಟಿಕೆಟ್ ನೀಡಬೇಕೆಂದು ರಮೇಶ್ ಕುಮಾರ್ ಬಣ ಒತ್ತಾಯಿಸಿತ್ತು. ಆದರೆ, ಈ ಎರಡೂ ಬಣಗಳ ಕಿತ್ತಾಟದಿಂದಾಗಿ, ಯಾರಿಗೆ ಟಿಕೆಟ್ ನೀಡಬೇಕು ಎಂಬುದು ಕಾಂಗ್ರೆಸ್‌ಗೆ ತಲೆನೋವಾಗಿತ್ತು.

ಇತ್ತೀಚೆಗೆ ಸಿಎಂ ಮತ್ತು ಡಿಸಿಎಂ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿಯೂ ಜಿಲ್ಲೆಯ ಕೆಲವು ಶಾಸಕರು ಚಿಕ್ಕ ಪೆದ್ದಣ್ಣ ಅವರಿಗೆ ಟಿಕೆಟ್ ನೀಡಿದರೆ, ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದರು. ಇತ್ತ, ‘ರಮೇಶ್ ಕುಮಾರ್ ಮತ್ತು ನಾನು ಒಗ್ಗೂಡಿದರೆ, ಕ್ಷೇತ್ರದಲ್ಲಿ ಕಾಂಗ್ರೆಸ್‌ಅನ್ನು ಗೆಲ್ಲಿಸಬಹುದು’ ಎಂದು ಮುನಿಯಪ್ಪ ಹೇಳಿದ್ದರು.

ಕೋಲಾರ ಟಿಕೆಟ್‌ ಸಮಸ್ಯೆ ಜಟಿಲವಾಗುತ್ತಿರುವುದನ್ನು ಅರಿತ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್, ರಮೇಶ್ ಕುಮಾರ್ ಬಣದ ಹನುಮಂತಯ್ಯ ಮತ್ತು ಮುನಿಯಪ್ಪ ಬಣದ ಚಿಕ್ಕಪೆದ್ದಣ್ಣ ಇಬ್ಬರಿಗೂ ಟಿಕೆಟ್ ನೀಡದೇ, ಬಣಗಳಿಂದ ದೂರ ಉಳಿದಿದ್ದ ಗೌತಮ್ ಅವರಿಗೆ ಟಿಕೆಟ್‌ ನೀಡಿ ಅಚ್ಚರಿ ಮೂಡಿಸಿದೆ. ಎಲ್ಲ ಬಣಗಳ ಮುಖಂಡರೂ, ಕಾರ್ಯಕರ್ತರು ಕ್ಷೇತ್ರದಲ್ಲಿ ಗೌತಮ್ ಗೆಲುವಿಗಾಗಿ ಕೆಲಸ ಮಾಡಬೇಕೆಂಬ ಸಂದೇಶ ರವಾನಿಸಿದೆ.

ಆದರೆ, ಮೂರನೇ ವ್ಯಕ್ತಿಯನ್ನು ಕಣಕ್ಕಿಳಿಸಿ, ಪಕ್ಷ ಸೋತರೆ ಅದಕ್ಕೆ ನಾನು ಜವಾಬ್ದಾರಿಯಲ್ಲ ಎಂದು ಈಗಾಗಲೇ ಸಚಿವ ಮುನಿಯಪ್ಪ ಎಚ್ಚರಿಕೆ ನೀಡಿರುವುದನ್ನು ಇಲ್ಲಿ ಗಮನಿಸಬಹುದು. ರಮೇಶ್‌ ಕುಮಾರ್‌ ಬಣ ಯಾರೇ ಅಭ್ಯರ್ಥಿಯಾದರೂ ನಾವು ಬೆಂಬಲಿಸುತ್ತೇವೆ ಎಂದಿದ್ದಾರೆ. ಆದರೆ ರಮೇಶ್‌ ಕುಮಾರ್‌ ಮಾತ್ರ ಈ ಬಗ್ಗೆ ಎಲ್ಲಿಯೂ ತುಟಿ ಬಿಚ್ಚಿಲ್ಲ.

ಲೋಕಸಭೆ ಚುನಾವಣೆಗೂ ಮುನ್ನವೇ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಅದರಂತೆ, ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲದೊಂದಿಗೆ ಕಣಕ್ಕಿಳಿದಿರುವ ಜೆಡಿಎಸ್ ಅಭ್ಯರ್ಥಿ ಎಂ. ಮಲ್ಲೇಶ್ ಬಾಬು ಸ್ಪರ್ಧೆಯಲ್ಲಿದ್ದಾರೆ.‌

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments