Homeಕರ್ನಾಟಕಕಾಂಗ್ರೆಸ್‌ ಸೇರಲ್ಲ; ಕುಟುಂಬದ ಹಿಡಿತದಿಂದ ಬಿಜೆಪಿ ಹೊರ ತರುವೆ: ಸದಾನಂದಗೌಡ

ಕಾಂಗ್ರೆಸ್‌ ಸೇರಲ್ಲ; ಕುಟುಂಬದ ಹಿಡಿತದಿಂದ ಬಿಜೆಪಿ ಹೊರ ತರುವೆ: ಸದಾನಂದಗೌಡ

ಬಿಜೆಪಿಗಾಗಿ ದುಡಿದವರನ್ನು ಈಗಿನ ನಾಯಕರು ಕಡೆಗಣಿಸುತ್ತಿದ್ದಾರೆ. ಸರ್ವಾಧಿಕಾರ ರಾಜಕೀಯದಲ್ಲಿ ನಡೆಯಲ್ಲ. ಬಿಜೆಪಿ ಶುದ್ದೀಕರಣ ಆಗುವವರೆಗೆ ನಾನು ವಿರಮಿಸುದಿಲ್ಲ ಎಂದು ಸಂಸದ, ಮಾಜಿ ಸಿಎಂ ಡಿ ವಿ ಸದಾನಂದಗೌಡ ವಾಗ್ದಾನ ಮಾಡಿದರು.

ಬೆಂಗಳೂರಿನ ಸಂಜಯ ನಗರ ನಿವಾಸದಲ್ಲಿ ಗುರುವಾರ ತುರ್ತು ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, “ಲೋಕಸಭಾ ಚುನಾವಣೆಯ ಬಳಿಕ ಪಕ್ಷದ ಶುದ್ದೀಕರಣ ಕಾರ್ಯಕ್ಕೆ ವೇಗ ಕೊಡಲಾಗುವುದು” ಎಂದರು.

“ಪಕ್ಷದ ಜವಾಬ್ದಾರಿ ವಹಿಸಿದವರು ಸ್ವಾರ್ಥಿಗಳಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಕುಟುಂಬ,‌ ಮಕ್ಕಳು, ಜಾತಿ, ತನ್ನವರಿಗೆ ಸೀಮಿತ ಮಾಡಿದ್ದಾರೆ. ಮೋದಿಯವರ ಮೇರಾ ದೇಶ್ ಮೇರಾ ಪರಿವಾರ್ ಆಗಬೇಕು ಬಿಜೆಪಿ ಎಂದು ಅಭಿಪ್ರಾಯಪಟ್ಟರು. ಆದರೆ, ಅದು ಆಗುತ್ತಿಲ್ಲ” ಎಂದು ಬೇಸರ ಹೊರಹಾಕಿದರು.

“ಮೋದಿ, ಬಿಜೆಪಿ ಕರ್ನಾಟಕದಲ್ಲಿ ಇರಬೇಕು. ಪರಿವಾರವಾದ, ಭ್ರಷ್ಟಾಚಾರವಾದ, ಜಾತಿವಾದ ಮುಕ್ತವಾದ ಪಕ್ಷ ಬಿಜೆಪಿ ಆಗಬೇಕು. ಶುದ್ದೀಕರಣದ ಅಭಿಯಾನಕ್ಕೆ ವೇಗ ಕೊಡಲು ನನ್ನಿಂದ ಮಾತ್ರ ಸಾಧ್ಯ” ಎಂದರು.

“ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರವಾದ ವಾತಾವರಣ ಸೃಷ್ಟಿಯಾಗಬೇಕು. ಅವರು ಪರಿವರ್ತನೆಯ ಹರಿಕಾರ. ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು. ಇದಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಜನರ ಪರವಾದ ಹಾಗೂ ಜನರು ಒಪ್ಪಿಕೊಳ್ಳುವ ಪಕ್ಷವಾಗಬೇಕು” ಎಂದು ಹೇಳಿದರು.

ಆರತಿ ಎತ್ತಿ ಕರೆದು ಮಂಗಳಾರತಿ ಮಾಡಿದ್ರು!

“ನನ್ನನ್ನು ಚೆಂದ ಆರತಿ ಎತ್ತಿ, ‘ಬನ್ನಿ, ಸ್ಪರ್ಧೆ ಮಾಡಿ’ ಎಂದು ಕರೆದರು. ಆದರೆ ಈಗ ಮಂಗಳಾರತಿ ಮಾಡಿ ಕಳಿಸಿದ್ದಾರೆ” ಎಂದು ಪರೋಕ್ಷವಾಗಿ ಯಡಿಯೂರಪ್ಪ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

“ನಾನು ಪಕ್ಷಕ್ಕಾಗಿ ಕೆಲಸ ಮಾಡಿದ ನಿಷ್ಠಾವಂತ ಕಾರ್ಯಕರ್ತ. ನಾನು ಸಿಂಗಲ್ ಮ್ಯಾನ್ ಆರ್ಮಿ ಅಲ್ಲ. ಪಕ್ಷದಲ್ಲಿ ಒಂದಷ್ಟು ಜನರು ಶುದ್ಧೀಕರಣ ಬಯಸುತ್ತಿದ್ದಾರೆ. ಅವರನ್ನು ಕ್ರೋಢೀಕರಿಸಲಾಗುತ್ತದೆ” ಎಂದು ತಿಳಿಸಿದರು.

ಕಾಂಗ್ರೆಸ್‌ನಿಂದ ನನಗೆ ಆಹ್ವಾನ ಬಂದಿದೆ

“ಕಾಂಗ್ರೆಸ್‌ನಿಂದ ನನಗೆ ಆಹ್ವಾನ ಬಂದಿರುವುದು ನಿಜ. ನಾವು ನಿಮಗೆ ಟಿಕೆಟ್ ಕೊಡುತ್ತೇವೆ. ನಿಮ್ಮನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಆಹ್ವಾನ ಬಂದಿತ್ತು. ಆದರೆ, ನಾನು ಕಾಂಗ್ರೆಸ್‌ ಸೇರಲ್ಲ. ನಾನು ಪಕ್ಷ ಶುದ್ದೀಕರಣ ಮಾಡುವತ್ತ ಗಮನ ಹರಿಸುತ್ತೇನೆ. ಟಿಕೆಟ್ ಕೈತಪ್ಪಿದ್ದರಿಂದ ನೋವಾಗಿದ್ದು ನಿಜ. ಆದರೆ ನನ್ನ ಈ ಸ್ಥಿತಿಗೆ ಕಾರಣರಾದವರು ಪಶ್ಚಾತ್ತಾಪ ಅನುಭವಿಸುತ್ತಾರೆ” ಎಂದು ಹೇಳಿದರು.

“ಯಾವುದೇ ಬೆಲೆ ತೆತ್ತಾದರೂ ನಾನು ಪಕ್ಷ ಶುದ್ದೀಕರಣ ಕೆಲಸ ಮಾಡುತ್ತೇನೆ. ಆಡಳಿತ ಮಾಡುವವರು ಸತ್ಯವಂತರಾಗಬೇಕು. ಸುಳ್ಳು ಹೇಳಬಾರದು. ಕೆ ಎಸ್ ಈಶ್ವರಪ್ಪ ಈಗಾಗಲೇ ಹಲವಾರು ಸಂಗತಿ ಹೇಳಿದ್ದಾರೆ” ಎಂದು ಮಾರ್ಮಿಕವಾಗಿ ಹೇಳಿದರು.

ಶೋಭಾ ಕರಂದ್ಲಾಜೆ ಅವರಿಗೆ ಬೆಂಬಲ ಕೊಡುತ್ತೀರಾ?’ ಎಂಬ ಪ್ರಶ್ನೆಗೆ, “ಶೋಭಾ ಕರಂದ್ಲಾಜೆ ಪರವಾಗಿ ನಾನು ಈಗಾಗಲೇ ಪ್ರಚಾರ ಮಾಡಿದ್ದೇನೆ. ಅವರಿಗೆ ಬೆಂಬಲ ಕೊಡದೆ ಇರುವ ಪ್ರಶ್ನೆ ಇಲ್ಲ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments