ನಾನು ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ಹೇಳಿದ ನಂತರ ಕೋಲಾರ ಚುನಾವಣಾ ಪ್ರಚಾರಕ್ಕೆ ಹೋಗಿದ್ದೆ. ಸೋಲಿಗೆ ಯಾರು ಕಾರಣ ಅನ್ನೋದು ಜನಜನಿತವಾಗಿದೆ. ಇದನ್ನು ಹೈಕಮಾಂಡ್, ರಾಜ್ಯ ನಾಯಕರು ಕೇಳಬೇಕು.ಅವರನ್ನು ಕರೆಸಿ ಬುದ್ದಿ ಹೇಳಬೇಕು. ನನ್ನ ಕಡೆಯಿಂದ ಯಾವುದೇ ಕಾರಣಕ್ಕೂ ಒಳೇಟು ಬಿದ್ದಿಲ್ಲ ಎಂದು ಸಚಿವ ಕೆ ಎಚ್ ಮುನಿಯಪ್ಪ ಹೇಳಿದರು.
ಬೆಂಗಳೂರಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ, “ಕೋಲಾರ ಸೋಲಿನ ಬಗ್ಗೆ ಜವಾಬ್ದಾರಿ ತೆಗೆದುಕೊಂಡ ಜನರು ಇದಕ್ಕೆ ಉತ್ತರ ಹೇಳಬೇಕಿದೆ. ಯಾರು ನಮ್ಮ ಕುಟುಂಬಕ್ಕೆ ಟಿಕೆಟ್ ಕೊಡಬಾರದು ಎಂದರೋ ಅವರು ಹೇಳಬೇಕು. ಮುನಿಯಪ್ಪಗೆ ಬೇಡ ನಾವು ಗೆಲ್ಲಿಸಿಕೊಂಡು ಬರುತ್ತೇವೆ ಎಂದಿದ್ದರು. ಆ ನಾಯಕರು ಉತ್ತರಿಸಲಿ” ಎಂದರು.
“ನಮಗೆ ರಾಜ್ಯದಲ್ಲಿ 15ರಿಂದ 20 ಸ್ಥಾನಗಳು ಬರಬಹುದೆಂಬ ನಿರೀಕ್ಷೆ ಇತ್ತು. ಬಿಜೆಪಿ- ಜೆಡಿಎಸ್ ಒಂದಾದ ಕಾರಣಕ್ಕೆ ನಮ್ಮ ಫಲಿತಾಂಶದಲ್ಲಿ ವ್ಯತ್ಯಾಸವಾಗಿದೆ. ಕೋಲಾರ, ಚಿಕ್ಕಬಳ್ಳಾಪುರ ಮಾತ್ರವಲ್ಲ ಇನ್ನೂ ಕೆಲವು ಕಡೆ ಫಲಿತಾಂಶದಲ್ಲಿ ವ್ಯತ್ಯಾಸವಾಗಿದೆ. ಸ್ಥಳೀಯವಾಗಿ ಕೆಲವರು ಒಟ್ಟಾಗಿ ಕೆಲಸ ಮಾಡಿಲ್ಲ. ಈ ಕಾರಣಕ್ಕೂ ಫಲಿತಾಂಶದಲ್ಲಿ ವ್ಯತ್ಯಾಸವಾಗಿದೆ. ಇದನ್ನು ಹೈಕಮಾಂಡ್ ಗಮನಕ್ಕೂ ತಂದಿದ್ದೇನೆ’ ಎಂದು ಹೇಳಿದರು.
“ಚುನಾವಣೆ ಯಲ್ಲಿ ಸಿಎಂ, ಡಿಸಿಎಂ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದಾರೆ. ನಾಯಕತ್ವ ಬದಲಾವಣೆ ಕೂಗಿಗೂ ಫಲಿತಾಂಶಕ್ಕೂ ಸಂಬಂಧ ಇಲ್ಲ. ಕೆಲವೊಮ್ಮೆ ರಾಜಕೀಯವಾಗಿ ಫಲಿತಾಂಶದಲ್ಲಿ ಬದಲಾವಣೆ ಆಗುತ್ತದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ವಿಷಯ ನಮ್ಮ ಮುಂದೆ ಇಲ್ಲ. ಕೋರ್ ಕಮಿಟಿ ಮಾಡಬೇಕೆಂದು ಮೊದಲಿನಿಂದಲೂ ಹೇಳುತ್ತಿದ್ದೇನೆ. ಅದು ಬೇಕೇ ಬೇಕು ಎಂದು ಹೈಕಮಾಂಡ್ ಗೆ ಹೇಳಿದ್ದೇನೆ. ನೀತಿ, ನಿರ್ಣಯಗಳನ್ನು ಕೈಗೊಳ್ಳುವ ವಿಚಾರದಲ್ಲಿ ಅದು ಬಹಳ ಮುಖ್ಯ” ಎಂದು ತಿಳಿಸಿದರು.