ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅವಹೇಳನ ಮಾಡಿರುವುದನ್ನು ವಿರೋಧಿಸಿ ಆಡಳಿತ ಪಕ್ಷದ ಸದಸ್ಯರು ಗುರುವಾರ ಸದನದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಅಮಿತ್ ಶಾ ಅವರನ್ನು ಸಮರ್ಥಿಸಿ ಸದನದಿಂದ ಹೊರ ನಡೆದರು. ಬಳಿಕ ಆಡಳಿತ ಪಕ್ಷದ ಸದಸ್ಯರು ತಮ್ಮ ಆಸನಗಳ ಎದುರು ಅಂಬೇಡ್ಕರ್ ಅವರ ಭಾವಚಿತ್ರವನ್ನು ಅತ್ಯಂತ ಜೋಡಿಸಿಟ್ಟರು. ಇಡೀ ಸದನ ಅಂಬೇಡ್ಕರ್ ಪ್ರಭೆಯಿಂದ ಕಂಗೊಳಿಸಿತು.
ಕಾಂಗ್ರೆಸ್ ಸಚಿವರು, ಶಾಸಕರು ಅಂಬೇಡ್ಕರ್ ಭಾವಚಿತ್ರ ಹಿಡಿದು ಧಿಕ್ಕಾರ ಬಿಜೆಪಿ ವಿರುದ್ಧ ಮತ್ತು ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿದರು. ವಿಧಾನಸಭೆ ಬಾವಿಗಿಳಿದು ಪ್ರತಿಭಟನೆಯ ಮೂಲಕ ಆಕ್ರೋಶ ಹೊರಹಾಕಿದರು.
ಅಂಬೇಡ್ಕರ್ ಫೋಟೋ ಹಿಡಿದು ಧರಣಿ ವಿಚಾರಕ್ಕೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದರು. ಅಂಬೇಡ್ಕರ್ ಪೋಟೋ ಹಿಡಿಯೋ ಯೋಗ್ಯತೆ ಇದೆಯಾ? ಎರಡು ಬಾರಿ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿದೆ. ಅಂಬೇಡ್ಕರ್ ಸತ್ತಾಗ ದೆಹಲಿಯಲ್ಲಿ ಜಾಗ ಕೊಡಲಿಲ್ಲ. ಮಹಾರಾಷ್ಟ್ರದಲ್ಲಿ ಅವರನ್ನು ಸಮಾಧಿ ಮಾಡಲಾಯಿತು” ಎಂದು ಕಿಡಿಕಾರಿದರು.
“ಅಂಬೇಡ್ಕರ್ಗೆ ಭಾರತ ರತ್ನ ಕೊಡಲಿಲ್ಲ. ನಾವು ಅವರಿಗೆ ಭಾರತರತ್ನ ಕೊಟ್ಟಿದ್ದೇವೆ. ಇವರಿಗೆ ಯಾವ ನೈತಿಕತೆ ಇದೆ. ಕುತಂತ್ರ ಮಾಡಿ ಸದನ ಹಾಳುಮಾಡುತ್ತಿದ್ದಾರೆ. ಇವರ ನಡೆಯನ್ನು ನಾವು ಖಂಡಿಸುತ್ತೇವೆ. ಮೋದಿ,ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ. ಸಭಾಧ್ಯಕ್ಷರು ಸಮಸ್ಯೆ ಚರ್ಚೆಗೆ ಅವಕಾಶ ಕೊಡಬೇಕು. ಈ ರೀತಿ ಮಾಡಲು ಬಿಡಬಾರದು” ಎಂದು ಹೇಳಿ ಬಿಜೆಪಿ ಸದಸ್ಯರು ಸಭಾ ತ್ಯಾಗ ಮಾಡಿದರು.
