ಪ್ರಿಯ ಸರ್ವೋಚ್ಚ ನಾಯಕರೇ, ಆಶ್ರಯ ಪಡೆದಿದ್ದ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ನನ್ನು ಕೊಲ್ಲಲು ಅಮೆರಿಕ ಪಾಕಿಸ್ತಾನವನ್ನು ಪ್ರವೇಶಿಸಿದಾಗ ನಿಮಗೆ ನ್ಯಾಯ ದೊರಕಿತು. ಆದರೆ ಭಾರತ ಪ್ರತಿಕಾರವನ್ನು ನೀವು ಯಾಕೆ ನಿಲ್ಲಿಸಿದ್ದೀರಿ? ನೀವು ಯಾವ ಷರತ್ತುಗಳ ಮೇಲೆ ಕದನ ವಿರಾಮ ಒಪ್ಪಿಕೊಂಡಿದ್ದೀರಿ ಎಂದು ಬಹು ಭಾಷಾ ನಟ ಪ್ರಕಾಶ್ ರಾಜ್ ಪ್ರಶ್ನಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಅಮೆರಿಕದ ದ್ವಂದ್ವ ನೀತಿಯನ್ನು ಕಟುವಾಗಿ ಟೀಕಿಸಿ ಎಕ್ಸ್ ತಾಣದಲ್ಲಿ ಬರೆದುಕೊಂಡಿದ್ದಾರೆ.
“ಪಾಕಿಸ್ತಾನದೊಳಗೆ ನುಗ್ಗಿ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ನನ್ನು ಕೊಲ್ಲುವ ಮೂಲಕ ಅಮೆರಿಕ ನ್ಯಾಯ ದೊರಕಿಸಿಕೊಂಡಿತ್ತು. ಆದರೆ, ನಾವು ಹಾಗೆ ಮಾಡಲು ಹೊರಟಾಗ ‘ಕದನ ವಿರಾಮ ಘೋಷಿಸಲಾಯಿತು’ ಎಂದಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿಯಲ್ಲಿ 22 ಭಾರತೀಯರು ಮೃತಪಟ್ಟಿದ್ದರು. ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಚರಣೆಯನ್ನು ಪಾಕಿಸ್ತಾನ ವಿರುದ್ಧ ಭಾರತ ಕೈಗೊಂಡಿದೆ. ಇದರಿಂದ ಎರಡೂ ದೇಶಗಳ ನಡುವೆ ಸಂಘರ್ಷ ಉದ್ವಿಗ್ನಗೊಂಡಿದೆ.
ಅಮೆರಿಕ ಮಧ್ಯಸ್ಥಿಕೆಯಲ್ಲಿ ಶನಿವಾರ ನಡೆದ ಉಭಯ ರಾಷ್ಟ್ರಗಳ ಮಿಲಿಟರಿ ನಾಯಕರ ಸಭೆ ನಂತರ ಕದನ ವಿರಾಮ ಘೋಷಿಸಲಾಯಿತು. ಆದರೀಗ, ಭಾರತೀಯ ವಾಯುಪಡೆ(ಐಎಎಫ್) ಮಾಹಿತಿ ನೀಡಿದ್ದು, “ಆಪರೇಷನ್ ಸಿಂಧೂರ್ ಮುಂದುವರೆದಿದೆ, ಸರಿಯಾದ ಸಮಯದಲ್ಲಿ ಸೂಕ್ತ ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು” ಎಂದು ತಿಳಿಸಿದೆ.
ಅಮೆರಿಕದ ಮಧ್ಯಸ್ಥಿಕೆಯ ನಂತರ ಭಾರತ – ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದವು. ಆದರೆ ಶನಿವಾರ ರಾತ್ರಿ ಪಾಕಿಸ್ತಾನ ಮತ್ತೆ ಡ್ರೋನ್ ದಾಳಿ ನಡೆಸಿ ಕದನ ವಿರಾಮವನ್ನು ಉಲ್ಲಂಘಿಸಿತ್ತು. ಈಗ ವಾಯುಸೇನೆ ಆಪರೇಷನ್ ಸಿಂಧೂರ್ ಮುಂದುವರಿಯಲಿದೆ ಎಂದು ಅಧಿಕೃತವಾಗಿ ತಿಳಿಸಿದೆ.