ಸಂಸದ ಪ್ರಜ್ವಲ್ ರೇವಣ್ಣ ವಿಚಾರವಾಗಿ ವಿದೇಶಾಂಗ ಇಲಾಖೆಗೆ ಎಸ್ಐಟಿ ಪತ್ರ ಬರೆದಿದೆ. ಪಾಸಪೋರ್ಟ್ ರದ್ದು ಮಾಡಬೇಕಾಗುತ್ತೆ. ಪಾಸ್ಪೋರ್ಟ್ ರದ್ದು ಮಾಡುವ ಅಧಿಕಾರ ಕೇಂದ್ರಕ್ಕೆ ಮಾತ್ರ ಇದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಈ ವಿಚಾರವಾಗಿ ಪಿಎಂಗೆ ಪತ್ರ ಬರೆದಿದ್ದಾರೆ. ತಕ್ಷಣ ಕೇಂದ್ರ ಸರ್ಕಾರ ಸ್ಪಂದನೆ ಮಾಡಬೇಕು” ಎಂದರು.
“ವಿದೇಶದಲ್ಲಿರುವ ಸಂಸದ ಪ್ರಜ್ವಲ್ನನ್ನು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ದೇಶಕ್ಕೆ ವಾಪಸ್ ಆಗುವಂತೆ ಕರೆದಿದ್ದು ಅವರ ಕುಟುಂಬ ವಿಚಾರ. ಅವರು ವಿದೇಶದಿಂದ ವಾಪಸ್ ಬಂದು ತನಿಖೆಯನ್ನು ಎದುರಿಸಲಿ” ಎಂದು ಹೇಳಿದರು.
“ಎಚ್ಡಿಕೆ ಕುಟುಂಬದ ಪೋನ್ ಟ್ಯಾಪ್ ಮಾಡಿಲ್ಲ. ನಿಖರ ಮಾಹಿತಿ ಇದ್ದರೆ ಕೊಡಲಿ, ತನಿಖೆ ಮಾಡುತ್ತೇವೆ. ಈ ವಿಚಾರವಾಗಿ ಎಸ್ ಐಟಿ ನಿರಂತರ ತನಿಖೆ ಮಾಡುತ್ತಿದೆ. ಎಸ್ಐಟಿಗೆ ನಾವು ಫ್ರೀಡಂ ಕೊಟ್ಟಿದ್ದೇವೆ. ಸರ್ಕಾರಕ್ಕೆ ಬಹಳ ಕೆಲಸ ಇದೆ. ಇಷ್ಟು ದಿನ ಬರಗಾಲ ಇತ್ತು ನೀರು, ಮೇವು ಕೋಡಬೇಕಿತ್ತು. ಸರ್ಕಾರದ ಮುಂದೆ ಕೆಲಸ ಬಹಳ ಇದೆ” ಎಂದರು.
ಸರ್ಕಾರ ವಿಫಲವಾಗಿದೆ, ರಾಜ್ಯಪಾಲರು ವಜಾ ಮಾಡಬೇಕೆಂಬ ಬಿಜೆಪಿ ಆಗ್ರಹಕ್ಕೆ ಪ್ರತಿಕ್ರಿಯಿಸಿ, “ಒಂದು ವರ್ಷದಲ್ಲಿ ಸರ್ಕಾರ ಅನೇಕ ಸಾಧನೆ ಮಾಡಿದೆ. ಅಭಿವೃದ್ಧಿ, ನೀರಾವರಿ ಕೆಲಸಗಳು ನಿಂತಿಲ್ಲ. ಎಲ್ಲಿ ವಿಫಲರಾಗಿದ್ದೀವಿ ಅಂತ ಬಿಜೆಪಿಯವರು ಹೇಳಲಿ? ವಿಪಕ್ಷ ಆಗಿ ಸುಮ್ನೆ ಆರೋಪ ಮಾಡುವುದು ಸರಿಯಲ್ಲ” ಎಂದರು.
ರೇವ್ ಪಾರ್ಟಿ; ಗಾಂಜಾ, ಡ್ರಗ್ಸ್ ಹಾಗೂ ಸಿಂಥೆಟಿಕ್ ಡ್ರಗ್ಸ್ ಸಿಕ್ಕಿದೆ
ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಫಾರ್ಮ್ ಹೌಸ್ನಲ್ಲಿ ನಡೆದ ರೇವ್ ಪಾರ್ಟಿಯ ಮೇಲೆ ಪೊಲೀಸ್ ದಾಳಿಯ ಸಂದರ್ಭದಲ್ಲಿ ಗಾಂಜಾ, ಡ್ರಗ್ಸ್ ಹಾಗೂ ಸಿಂಥೆಟಿಕ್ ಡ್ರಗ್ಸ್ ಸಿಕ್ಕಿದೆ ಎಂದು ಇದೇ ವೇಳೆ ಪರಮೇಶ್ವರ್ ತಿಳಿಸಿದರು.
“ರೇವ್ ಪಾರ್ಟಿಗೆ ಯಾವೆಲ್ಲಾ ವ್ಯಕ್ತಿಗಳು ಬಂದಿದ್ದರು ಎಂಬ ಮಾಹಿತಿ ಪೊಲೀಸರ ಬಳಿ ಇದೆ. ನಾನು ಕರ್ನಾಟಕವನ್ನು ಡ್ರಗ್ಸ್ ಫ್ರೀ ರಾಜ್ಯ ಮಾಡಬೇಕು ಎಂದಿದ್ದೇವೆ. ಸಾವಿರಾರು ಕೋಟಿ ಮೌಲ್ಯದ ಡ್ರಗ್ಸ್ ಈವರೆಗೆ ವಶಕ್ಕೆ ಪಡೆದುಕೊಂಡಿದ್ದೇವೆ. ಡ್ರಗ್ ಮಾಫಿಯಾವನ್ನು ಹತ್ತಿಕ್ಕುವ ಕೆಲಸ ಆಗುತ್ತಿದೆ” ಎಂದು ವಿವರಿಸಿದರು.
“ಗಾಂಜಾ ಎಲ್ಲಿಂದ ಬರುತ್ತದೆ ಅಂತ ಮಾಹಿತಿ ಆಧಾರದಲ್ಲಿ ಆರೋಪಿಗಳ ಬಂಧನ ಆಗುತ್ತಿದೆ. ಹೊರ ರಾಜ್ಯದಿಂದಲೂ ಗಾಂಜಾ ಪೂರೈಕೆ ಆಗುತ್ತಿದೆ. ಇದನ್ನು ಹಿಡಿಯಲು ಪ್ರತ್ಯೇಕ ಘಟಕ ಇದೆ. ಕೆಲವರು ಮನೆಯ ಟೆರೇಸ್ ಮೇಲೆ ಕೂಡ ಗಾಂಜಾ ಬೆಳೆಯುತ್ತಾರೆ. ಪೆಡ್ಲರ್ಸ್ ಯಾರಿದ್ದಾರೆ ಅವರನ್ನು ಹಿಡಿಯವುದು ಬಹಳ ಮುಖ್ಯ. ವಿದ್ಯಾರ್ಥಿಗಳ ಸೋಗಿನಲ್ಲಿ ಇಲ್ಲಿ ಬಂದು ಕೃತ್ಯ ಎಸಗುತ್ತಿದ್ದಾರೆ. ಅವರ ಮೇಲೆ ನಿಗಾ ಇಟ್ಟಿದ್ದೇವೆ” ಎಂದು ಮಾಹಿತಿ ನೀಡಿದರು.