2025-26ನೇ ಸಾಲಿನ ಬಜೆಟ್ ಗಾತ್ರ 4,09,549 ಕೋಟಿಯಾಗಿದ್ದು, ಮೊದಲ ಬಾರಿಗೆ ರಾಜ್ಯದ ಆಯವ್ಯಯ ಗಾತ್ರ 4 ಲಕ್ಷ ಕೋಟಿ ರೂ.ಗಳ ಗಡಿ ದಾಟಿರುವುದು ಒಂದು ಹೊಸ ಮೈಲಿಗಲ್ಲು. ಆದರೆ, ಬಜೆಟ್ ಬಗ್ಗೆ ಹಲಾಲ್ ಎನ್ನುತ್ತಿರುವ ಬಿಜೆಪಿಯವರ ಟೀಕೆ ಅವರ ಕೊಳಕು ಮನಸ್ಥಿತಿಗೆ ಸಾಕ್ಷಿ ಎಂದು ಸಿಎಂ ಸಿದ್ದರಾಮಯ್ಯ ಕುಟುಕಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯವ್ಯಯ ಕುರಿತಂತೆ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು,”2025-26 ನೇ ಸಾಲಿನ ಮುಂಗಡ ಪತ್ರವನ್ನು ಮಂಡಿಸಲಾಗಿದ್ದು, ಕರ್ನಾಟಕ ಸರ್ಕಾರ ಕಳೆದ ಸಾಲಿನಲ್ಲಿ 3,71,121 ಕೋಟಿ ಬಜೆಟ್ ಮಂಡಿಸಿತ್ತು. ಈ ಬಾರಿಯ ಬಜೆಟ್ ಗಾತ್ರ 4,09,549 ಕೋಟಿಯಾಗಿದೆ. ಮೊದಲ ಬಾರಿಗೆ ನಮ್ಮ ರಾಜ್ಯದ ಆಯವ್ಯಯ ಗಾತ್ರ 4 ಲಕ್ಷ ಕೋಟಿ ರೂ.ಗಳ ಗಡಿ ದಾಟಿರುವುದು ಒಂದು ಹೊಸ ಮೈಲಿಗಲ್ಲು. ಕಳೆದ ಬಾರಿಗಿಂತ ಈ ಬಾರಿ 38,166 ಕೋಟಿ ರೂ.ಗಳು ಹೆಚ್ಚಾಗಿದೆ. ಬಜೆಟ್ನ ಬೆಳವಣಿಗಯ ದರ 10.3 ರಷ್ಟು ಹೆಚ್ಚಳವಾಗಿದೆ” ಎಂದರು.
ರಾಜಸ್ವ ಸ್ವೀಕೃತಿ
“ಕಳೆದ ವರ್ಷ ರಾಜಸ್ವ ಸ್ವೀಕೃತಿಗಳು, 263178 ಕೋಟಿ ಇದ್ದು ಈ ಬಾರಿ 2,92,477 ಕೋಟಿ ರೂ. ಇದೆ. 2024-25ರ ಆಯವ್ಯಯಕ್ಕೆ ಹೋಲಿಸಿದರೆ 29,299 ಕೋಟಿ ಹೆಚ್ಚಾಗಿದೆ –ಬೆಳವಣಿಗೆ ದರ 11.1 % ರಷ್ಟಿದೆ. 2024-25ರ ರಲ್ಲಿ ರಾಜಸ್ವ ವೆಚ್ಚ 2,90,531 ಕೋಟಿ ಇದ್ದದ್ದು, 2025-26ರಲ್ಲಿ 3,11,739 ಕೋಟಿ , 2024-25ರ ಆಯವ್ಯಯಕ್ಕೆ ಹೋಲಿಸಿದರೆ 21,207 ಕೋಟಿ ಹೆಚ್ಚಳ-ಬೆಳವಣಿಗೆ ದರ 7.3 % ರಷ್ಟಿದೆ” ಎಂದರು.
ವಿತ್ತೀಯ ಶಿಸ್ತು
“2024-25ರಲ್ಲಿ ಸಾಲ 1,05,246 ಕೋಟಿ , ಈ ವರ್ಷ ಸಾಲ 1,16,000 ಕೋಟಿ , 2024-25ರ ಆಯವ್ಯಯಕ್ಕೆ ಹೋಲಿಸಿದರೆ 10,754 ಕೋಟಿ ಹೆಚ್ಚಳವಾಗಿದೆ(10.2% ರಷ್ಟು ಹೆಚ್ಚಳ). ಇದಕ್ಕೆ ವಿರೋಧಪಕ್ದದವರು ಟೀಕಿಸುತ್ತಾರೆ . ನಮಗೆ ಸಾಲ ಮಾಡುವ ಅವಕಾಶವೆಷ್ಟಿದೆ. ಆರ್ಥಿಕ ಹೊಣಗಾರಿಕೆ ಅಧಿನಿಯಮದ ಮಾನದಂಡದಂತೆ, ಸಾಲದ ಮೊತ್ತ GSDP ಯ ಶೇ.25 ರಷ್ಟಿರಬೇಕು, ರಾಜ್ಯ ಶೇ.24.91 ರಷ್ಟರ ಮಿತಿಯಲ್ಲಿದೆ. ವಿತ್ತೀಯ ಕೊರತೆಯನ್ನು GSDPಯ ಶೇ.3 ರಷ್ಟುನ್ನು ಮೀರಬಾರದೆಂದಿದ್ದು, 2.95 % ರಷ್ಟಿದೆ” ಎಂದು ಹೇಳಿದರು.
ಸರ್ಕಾರದ ಆರ್ಥಿಕ ಶಿಸ್ತು ಪಾಲನೆ
“ರಾಜಸ್ವ ಕೊರತೆ 19262 ಕೋಟಿ ಇದೆ . ಈ ಬಾರಿ ರಾಜಸ್ವ ಕೊರತೆಯಿಂದ ರಾಜಸ್ವ ಹೆಚ್ಚುವರಿ ಸ್ಥಿತಿಗೆ ಬರಲಿದ್ದೆವೆ. 2024-25 ರಲ್ಲಿ ರಾಜಸ್ವ ಕೊರತೆ 0.95 ಇತ್ತು, 2025-26ರಲ್ಲಿ 0.63 ಆಗಿದೆ. ರಾಜ್ಯದ GSDP ಕಳೆದ ವರ್ಷ 28,61929 ಕೋಟಿಗಳಾಗಿತ್ತು, 2025-26 ರಲ್ಲಿ 30,70,103 ಕೋಟಿಯಾಗಿದೆ, ಇದರಲ್ಲಿ ಶೇ. 25 ರಷ್ಟು ಸಾಲ ಪಡೆಯಬಹುದಾಗಿದ್ದು, ಸರ್ಕಾರ ಆರ್ಥಿಕ ಶಿಸ್ತನ್ನು ಪಾಲನೆ ಮಾಡಿದೆ .ಆಯವ್ಯಯದಲ್ಲಿ ಬಡವರು, ಮಹಿಳೆಯರು, ಕಾರ್ಮಿಕರು, ದುರ್ಬಲರಿಗೆ, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಆರ್ಥಿಕ ಬೆಳವಣಿಗೆಗೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ” ಎಂದು ವಿವರಿಸಿದರು.
ಬಿಜೆಪಿಯವರಿಗೆ ದಿವಾಳಿ ಪದದ ಅರ್ಥ ಗೊತ್ತೇ?
“ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಆರ್ಥಿಕ ಹೊಣಗಾರಿಕೆ ಅಧಿನಿಯಮದ ಬಗ್ಗೆ ತಿಳಿಯದೇ, ನಮ್ಮ ಆಯವ್ಯಯದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರದ ವಿತ್ತೀಯ ಕೊರತೆ ಶೇ. 4.61 ರಷ್ಟಿದೆ. ಆದರೆ ರಾಜ್ಯದ ವಿತ್ತೀಯ ಕೊರತೆ ಶೇ.2.95 ರಷ್ಟಿದೆ. ಕೇಂದ್ರಸರ್ಕಾರದ ಬಜೆಟ್ 50 ಲಕ್ಷ ಕೋಟಿಯಲ್ಲಿ 15.66 ಲಕ್ಷ ಕೋಟಿ ಸಾಲ ಪಡೆದಿದ್ದು( ಶೇ.56 ಸಾಲ), ರಾಜ್ಯ 2.95 ರಷ್ಟು ಸಾಲ ಪಡೆದಿದ್ದೇವೆ. ಅಶೋಕ್ ರವರು ರಾಜಕೀಯಕ್ಕಾಗಿ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಟೀಕೆ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ದಿವಾಳಿ ಪದದ ಅರ್ಥ ಗೊತ್ತೇ? ರಾಜ್ಯಸರ್ಕಾರ ಆರ್ಥಿಕವಾಗಿ ಸದೃಢವಾಗಿದ್ದು, ಆರ್ಥಿಕ ಶಿಸ್ತನ್ನು ಪಾಲಿಸಲಾಗುತ್ತಿದೆ. ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಾನದಂಡಗಳನ್ನು ಪಾಲಿಸಲಾಗಿದೆ” ಎಂದರು.
ನುಡಿದಂತೆ ನಡೆದ ಸರ್ಕಾರ
“ಹಿಂದಿನ ನಮ್ಮ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ಆಭಿವೃದ್ಧಿಗೂ ಹಣ ಖರ್ಚು ಮಾಡಿ, ಗ್ಯಾರಂಟಿಗಳಿಗೆ 52009 ಕೊಟಿ , ಎಲ್ಲ ಗ್ಯಾರಂಟಿಗಳು ಜಾರಿಯಾಗಿದೆ. ಮುಂದಿನ ವರ್ಷವೂ ಮುಂದುವರೆಸುತ್ತೆವೆ. ಈ ವರ್ಷ ಬಜೆಟ್ ನಲ್ಲಿ ಗ್ಯಾರಂಟಿಗಳಿಗೆ 51,034 ಕೋಟಿ ಮೀಸಲಿರಿಸಿದ್ದೇವೆ. 2025-26ನೇ ಸಾಲಿಗೆ ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿಗಳನ್ನು ಮೀಸಲಿರಿಸಿದೆ. ಗೃಹಜ್ಯೋತಿ ಯೋಜನೆ 10,100 ಕೋಟಿ , ಅನ್ನಭಾಗ್ಯ ಯೋಜನೆಗೆ 6,426 ಕೋಟಿ , ಶಕ್ತಿ ಯೋಜನೆಗೆ 5,300 ಕೋಟಿ, ಯುವನಿಧಿ ಯೋಜನೆಗೆ 600 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಈ ಬಾರಿ ಆಯವ್ಯಯದಲ್ಲಿ ಎಲ್ಲ ಇಲಾಖೆಗಳಿಗೆ ಹೆಚ್ಚು ಅನುದಾನ ನೀಡಲಾಗಿದೆ. ಅಭಿವೃದ್ಧಿ ಕೆಲಸಗಳಿಗೆ ಅನುದಾನದ ಕೊರತೆ ಇಲ್ಲ. ಬಿಜೆಪಿಯವರ ಹೇಳಿಕೆಗಳು ಸತ್ಯಕ್ಕೆ ದೂರವಾದುದು. ದೆಹಲಿ, ಮದ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಹರಿಯಾಣಗಳಲ್ಲಿ ಬಿಜೆಪಿಯವರು ನಮ್ಮ ಗ್ಯಾರಂಟಿಗಳನ್ನು ನಕಲು ಮಾಡಿದ್ದಾರೆ” ಎಂದು ತಿರುಗೇಟು ನೀಡಿದರು.
ಹಲಾಲ್ ಬಜೆಟ್ ಎಂಬ ಟೀಕೆ- ಬಿಜೆಪಿಯವರ ಕೊಳಕು ಮನಸ್ಥಿತಿ
“ಗ್ಯಾರಂಟಿಗಳನ್ನು ಮದ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಫಲಾನುಭವಿಗಳಿಗೆ ಡಿಬಿಟಿ ಮಾಡಲಾಗುತ್ತಿದ್ದು, ಸಾರ್ವತ್ರಿಕ ಮೂಲ ಆದಾಯ ತತ್ವದ ಆಧಾರದ ಮೇಲೆ ರೂಪಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 232 ಕೋಟಿಗಳು ವೆಚ್ಚವಾಗುತ್ತಿದೆ. ಜನರಿಗೆ ಆರ್ಥಿಕ ಬಲ ತುಂಬಿದರೆ, ಅವರ ಖರೀದಿ ಶಕ್ತಿಯೂ ಹೆಚ್ಚಿ, ರಾಜ್ಯದ ಆರ್ಥಿಕತೆಯೂ ಬೆಳೆಯುತ್ತದೆ. ಅಲ್ಪಸಂಖ್ಯಾತರು, ಪ.ಜಾ, ಪ.ವರ್ಗ, ಹಿಂ.ವರ್ಗಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಬೌದ್ಧರು, ಜೈನ್, ಕ್ರಿಶ್ಚಿಯನ್ ಸೇರಿದಂತೆ ಅಲ್ಪಸಂಖ್ಯಾತರ ಎಲ್ಲ ಸಮುದಾಯದವರಿಗೆ 4 ಸಾವಿರ ಕೋಟಿ ಕೊಟ್ಟರೂ , ಇದನ್ನು ಹಲಾಲ್ ಬಜೆಟ್ ಎಂದು ಟೀಕಿಸುತ್ತಾರೆ. ಇದು ಬಿಜೆಪಿಯವರ ಕೊಳಕು ಮನಸ್ಥಿತಿಯನ್ನು ಬಿಂಬಿಸುತ್ತದೆ” ಎಂದರು.
ಎಸ್ ಸಿ ಎಸ್ ಪಿ- ಟಿಎಸ್ ಪಿ ಯೋಜನೆ
“ಎಸ್ ಸಿ ಎಸ್ ಪಿ- ಟಿಎಸ್ ಪಿ ಯೋಜನೆಗಳಿಗೆ 42,000 ಕೋಟಿ ನೀಡಲಾಗುತ್ತಿದೆ. ಅಲ್ಪಸಂಖ್ಯಾತರಿಗೆ 4,500 ಕೋಟಿ, ಓಬಿಸಿಗೆ 4,300 ಕೋಟಿ ನೀಡಲಾಗಿದೆ. ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು SCP TSP ಕಾಯ್ದೆ ಮಾಡಿ ಜಾರಿಗೊಳಿಸಿದ್ದಾರೆಯೇ” ಎಂದು ಪ್ರಶ್ನಿಸಿದರು.
ಗುತ್ತಿಗೆಯಲ್ಲಿ ಮೀಸಲಾತಿ ಧರ್ಮದ ಆಧಾರದ ಮೇಲೆ ನೀಡಿಲ್ಲ
ಅಲ್ಪಸಂಖ್ಯಾತರಿಗೆ ಸರ್ಕಾರದ ಗುತ್ತಿಗೆಯಲ್ಲಿ ಮೀಸಲಾತಿ ನೀಡಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, “ಅಲ್ಪಸಂಖ್ಯಾತರ ಸಾಕ್ಷರತಾ ಪ್ರಮಾಣ ಎಷ್ಟಿದೆ ಎಂದು ಪ್ರಶ್ನಿಸಿ ಮೀಸಲಾತಿ ನೀಡಿರುವುದು ಧರ್ಮದ ಆಧಾರದ ಮೇಲೆ ಅಲ್ಲ . 2 ಎ, ಎಸ್ಸಿ, ಎಸ್ಟಿ, ಪ್ರವರ್ಗ 1 ಕೊಟ್ಟಿಲ್ಲವೇ? ಕೇವಲ ಮುಸ್ಲಿಂರದ್ದು ಮಾತ್ರ ಯಾಕೆ ಹೇಳುತ್ತೀರಿ ? ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು. ಪ್ರತಿಪಕ್ಷಗಳಿಗೆ ಅಲ್ಪಸಂಖ್ಯಾತರನ್ನು ಆಕ್ಷೇಪಿಸುವುದೇ ಕೆಲಸ” ಎಂದರು.
ಶೇ.47.3 ರಷ್ಟು ಆರ್ಥಿಕ ಬೆಳವಣಿಗೆ
ಆಯವ್ಯಯದಲ್ಲಿ ದೊಡ್ಡ ಯೋಜನೆಗಳಿಗೆ ಕೈ ಹಾಕಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಯಿಸಿದ ಸಿಎಂ, “ನೀರಾವರಿಗೆ ಕಳೆದ ವರ್ಷಕ್ಕಿಂತ 2 ಸಾವಿರ ಕೋಟಿ ಹೆಚ್ಚಿನ ಅನುದಾನ, ಬೆಂಗಳೂರು ನಗರಕ್ಕೆ 7ಸಾವಿರ ಕೋಟಿ , ಹೊರವರ್ತುಲ ರಸ್ತೆ , ಸುರಂಗ ಮಾರ್ಗ ಕಾರಿಡಾರ್ ಸೇರಿದಂತೆ ಬೆಂಗಳೂರು ನಗರ ಅಭಿವೃದ್ಧಿಗೆ 54000 ಕೋಟಿ ನೀಡಲಾಗಿದೆ. ಬಂಡವಾಳ ವೆಚ್ಚ 83200 ಕೋಟಿ ಹೆಚ್ಚಳವಾಗಿದ್ದು,ಅಂದರೆ ಶೇ.47.3 ರಷ್ಟು ಆರ್ಥಿಕ ಬೆಳವಣಿಗೆಯಾಗಿದೆ” ಎಂದು ಹೇಳಿದರು.
ಗೌರವಧನ ಹೆಚ್ಚಳ
ಗ್ಯಾರಂಟಿಗಳಿಂದ ಸಿಎಂ ಕೈ ಕಟ್ಟಿಹಾಕಿದಂತಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, “ಸರ್ಕಾರಿ ನೌಕರರ ಏಳನೇ ವೇತನ ಆಯೋಗಕ್ಕೆ 19,000 ಕೋಟಿ ನೀಡಲಾಗಿತ್ತು. ಹಾಗಿದ್ದಿದ್ದರೆ, ಆಶಾ ಕಾರ್ಯಕರ್ತರು, ಅರ್ಚಕರು, ಪೈಲ್ವಾನರಿಗೆ ಅತಿಥಿ ಶಿಕ್ಷಕರು ಗೌರವಧನ ಹೆಚ್ಚಳ ಮಾಡಲು ಸಾಧ್ಯವಾಗುತ್ತಿತ್ತೇ” ಎಂದು ಪ್ರಶ್ನಿಸಿದರು.
ಬಿಜೆಪಿ ಜೆಡಿಎಸ್ ಶಾಸಕರ ಅನುದಾನದ ಬೇಡಿಕೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, “ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ 8,000 ಕೋಟಿ ವಿಶೇಷ ಅನುದಾನ ಮೀಸಲಿರಿಸಿದ್ದು, ಅನುದಾನವನ್ನು ಪರಿಶೀಲಿಸಿ ಹೆಚ್ಚಿಸಲಾಗುವುದು” ಎಂದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿ, “ಕೇಂದ್ರ ಸರ್ಕಾರದವರು ಶೇ. 56 ರಷ್ಟು ಸಾಲ ಮಾಡಿದ್ದು, ಈ ಬಗ್ಗೆ ಪ್ರಧಾನಿ ಮೋದಿಯವರನ್ನು ಕೇಳಲಿ, ಯಾವ ನೈತಿಕತೆಯಿಂದ ಇಂಥ ಪ್ರಶ್ನೆ ಕೇಳುತ್ತಾರೆ” ಎಂದು ತಿರುಗೇಟು ನೀಡಿದರು.