ಮಂಗಳೂರಿನ ಮುಡಿಪು ಸಮೀಪದ ಬೋಳಿಯಾರ್ ಬಳಿ ಬಿಜೆಪಿಯ ವಿಜಯೋತ್ಸವ ಮೆರವಣಿಗೆ ಬಳಿಕ ಪಕ್ಷದ ಇಬ್ಬರು ಕಾರ್ಯಕರ್ತರಿಗೆ ಅನ್ಯಕೋಮಿಯ ತಂಡವೊಂದು ಚೂರಿಯಿಂದ ಇರಿದು ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಾನುವಾರ ರಾತ್ರಿ ಬಿಜೆಪಿ ವಿಜಯೋತ್ಸವ ವೇಳೆ ಅನ್ಯಕೋಮಿಯ ಗುಂಪೊಂದು ಇಬ್ಬರಿಗೆ ಚಾಕು ಇರಿದಿದ್ದು ಓರ್ವನ ಮೇಲೆ ದಾಳಿ ನಡೆಸಿದ್ದರು. ಈ ಘಟನೆ ಸಂಬಂಧ ಕೊಣಾಜೆ ಠಾಣೆ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಯುತ್ತಿದ್ದಾರೆ.
ಹರೀಶ್(41), ನಂದಕುಮಾರ್(24)ಗೆ ಚಾಕು ಇರಿಯಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೋರ್ವ ಕೃಷ್ಣ ಕುಮಾರ್ ಎಂಬಾತನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆದಿದೆ.
ನರೇಂದ್ರ ಮೋದಿ ಸತತ ಮೂರನೇ ಸಲ ದೇಶದ ಪ್ರಧಾನಿಯಾಗಿ ಪದಗ್ರಹಣದ ನಡೆಸಿದ್ದಕ್ಕೆ ಬೋಳಿಯಾರ್ ನಲ್ಲಿ ಬಿಜೆಪಿ ವಿಜಯೋತ್ಸವ ಮೆರವಣಿಗೆಯನ್ನು ನಡೆಸಿತ್ತು. ಈ ವೇಳೆ ಅಲ್ಲಿನ ಮಸೀದಿ ಬಳಿ ಕಾರ್ಯಕರ್ತರು ಕೆಲಹೊತ್ತು ಘೋಷಣೆ ಕೂಗಿದ್ದರು. ಬಳಿಕ ಮುಸ್ಲಿಂ ಯುವಕರ ತಂಡವು ಬೋಳಿಯಾರ್ ಸಮಾಧಾನ್ ಬಾರ್ ಬಳಿ ಮೂವರು ಕಾರ್ಯಕರ್ತರನ್ನು ಅಡ್ಡಗಟ್ಟಿತ್ತು. ಇಬ್ಬರಿಗೆ ಚೂರಿಯಿಂದ ಇರಿದು, ಒಬ್ಬನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿತ್ತು. ಇರಿತಕ್ಕೊಳಗಾದ ಹರೀಶ್ ಹಾಗೂ ನಂದ ಕುಮಾರ ಅವರನ್ನು ಕೂಡಲೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಕ್ರಮ ವಹಿಸಿದ್ದಾರೆ.
ಸರ್ಕಾರದ ವಿರುದ್ಧ ಹರಿಹಾಯ್ದ ಬಿಜೆಪಿ
“ಶಾಂತಿ-ನೆಮ್ಮದಿ-ಸಮೃದ್ಧಿಗೆ ಸುದ್ದಿಯಾಗುತ್ತಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಅರಾಜಕತೆ-ಅತ್ಯಾಚಾರ-ಕೊಲೆ-ಸುಲಿಗೆಗಳಿಗೆ ಸುದ್ದಿಯಾಗುತ್ತಿರುವುದು ದುರಂತ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದನ್ನು ಸಂಭ್ರಮಿಸಿದರೆ, ಅದನ್ನೂ ಸಹಿಸದ ದುಷ್ಕರ್ಮಿಗಳು ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿದಿದ್ದಾರೆ” ಎಂದು ಬಿಜೆಪಿ ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿ ಆರೋಪಿಸಿದೆ.
“ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಸ್ವಯಂಘೋಷಿತ ಸರ್ವಜನಾಂಗದ ಶಾಂತಿಯ ತೋಟದಲ್ಲಿ ಹಿಂದೂಗಳಿಗೆ ಶಾಂತಿಗಿಂತ ಅಶಾಂತಿ ಒಲಿದಿದ್ದೇ ಹೆಚ್ಚು. ದ್ವೇಷವನ್ನೇ ಉಸಿರಾಗಿಸಿಕೊಂಡಿರುವ ನಿಮ್ಮ ಅಮಾಯಕ ಬ್ರದರ್ಸ್ಗಳ ವಿರುದ್ಧ ಕ್ರಮ ಯಾವಾಗ ಎಂಬುದನ್ನು ತಿಳಿಸಿ” ಎಂದು ಆಗ್ರಹಿಸಿದೆ.