ಜೂನ್ 4ರ ನಂತರ ಕುಟುಂಬ ರಾಜಕಾರಣದಿಂದ ಬಿಜೆಪಿ ಮುಕ್ತವಾಗಲಿದೆ. ನನಗೆ ಹೈಕಮಾಂಡೇ ಭರವಸೆ ನೀಡಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಉತ್ತರ ಕನ್ನಡದ ಕುಮಟಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ನನಗೆ ವಿಪಕ್ಷ ನಾಯಕನಾಗುವ ಅರ್ಹತೆ ಇದ್ದರೂ ಸಹ ಮಾಡಲಿಲ್ಲ. ಅಸಮಾಧಾನಿತರೆಲ್ಲರಿಗೂ ವಿನಂತಿ ಮಾಡುವೆ. ವೈಯಕ್ತಿಕ ವಿಚಾರ ಬಿಟ್ಟು, ನರೇಂದ್ರ ಮೋದಿಗಾಗಿ ನಾವೆಲ್ಲರೂ ಕೂಡಿ ಕೆಲಸ ಮಾಡೋಣ” ಎಂದರು.
“ಹಿಂದುತ್ವದ ರಾಜಕಾರಣಿಗಳನ್ನು ಯಾವತ್ತೂ ಮುಗಿಸಲು ಸಾಧ್ಯವಿಲ್ಲ. ಈಶ್ವರಪ್ಪ ಹೇಳುವ ವಿಚಾರಔನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಬೇಕು. ಪಕ್ಷಕ್ಕೆ ಮುಜುಗರ ಆಗದ ರೀತಿಯಲ್ಲಿ ಎಲ್ಲ ಸಮಸ್ಯೆ ಬಗೆಹರಿಸಬೇಕು. ನಾನು ಹೈಕಮಾಂಡ್ಗೆ ವಿನಂತಿ ಮಾಡಿಕೊಳ್ಳುತ್ತೇನೆ” ಎಂದು ಹೇಳಿದರು.
“ಬೊಮ್ಮಾಯಿ ಬದಲು ನನ್ನ ಸಿಎಂ ಮಾಡಿದ್ದರೆ 103 ಸ್ಥಾನ ಗೆಲ್ಲಿಸುತ್ತಿದ್ದೆ. ಕೆ.ಸುಧಾಕರ್ ನಡೆಯಿಂದ ಹಲವು ಶಾಸಕರು ಕಣ್ಣೀರು ಹಾಕಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕಿತ್ತು. ಡಾ.ಸುಧಾಕರ್ ತಪ್ಪಿನಿಂದ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಲಿಲ್ಲ. ಕಾಂಗ್ರೆಸ್ನಲ್ಲಿ ಅಪ್ಪ, ಮಕ್ಕಳು, ಮಾವ, ಅಳಿಯ ಇವರೇ ಅಭ್ಯರ್ಥಿ. ನಮ್ಮ ಪಕ್ಷದಲ್ಲೂ ಅದೇ ರೀತಿಯಾಗಿದೆ” ಎಂದು ವಾಗ್ದಾಳಿ ನಡೆಸಿದರು.