ಕರ್ನಾಟಕ ಪ್ರದೇಶ ಯುತ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ದುರುದ್ದೇಶದಿಂದ ಮಾನ್ಯ ಪ್ರಧಾನಮಂತ್ರಿಗಳ ಭಾವಚಿತ್ರವನ್ನು ಬಳಸಿಕೊಂಡು ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಒಳಸಂಚು ರೂಪಿಸಿ ಸುಳ್ಳು, ಸುದ್ದಿಯ ಪೋಸ್ಟರ್ ಹಾಕಿ ರಾಜಕೀಯ ದಂಗೆಗೆ ಪ್ರಚೋದಿಸುತ್ತಿದ್ದಾರೆಂದು ಬಿಜೆಪಿ ಆಕ್ಷೇಪಿಸಿದೆ. ಈ ಕುರಿತು ಇಂದು ಪೊಲೀಸರಿಗೆ ದೂರು ಕೊಡಲಾಯಿತು.
ಇದೇ 8ರಂದು ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜೀಯವರ ಭಾವಚಿತ್ರವನ್ನು ಬಳಸಿ, ದೇಶದ ಸಂಸತ್ತಿಗೆ ಬರಲು ಧೈರ್ಯವಿಲ್ಲದೆ ಪುಕ್ಕಲ ಪ್ರಧಾನ ದೇಶವನ್ನು ಹೇಗೆ ರಕ್ಷಿಸುತ್ತಾರೆ? ಎಂಬ ಸುಳ್ಳು ಸುದ್ದಿ ಬರಹದ ಬ್ಯಾನರ್ ಅನ್ನು ಕಾನೂನುಬಾಹಿರವಾಗಿ ವಿಧಾನಸೌದದ ಮುಂದೆ ಹಾಕಿದ್ದಾರೆ. ಆ ಮೂಲಕ ದೇಶದ ಪ್ರಧಾನಮಂತ್ರಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಸಂಚು ರೂಪಿಸಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದು ಮತ್ತು ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿಗಳ ವಿರುದ್ಧ ರಾಜಕೀಯ ದಂಗೆ ನಡೆಸಲು ಸಂಚನ್ನು ಯುತ್ ಕಾಂಗ್ರೆಸ್ ಪದಾಧಿಕಾರಿಗಳು ರೂಪಿಸಿರುತ್ತಾರೆ ಎಂದು ಕಬ್ಬನ್ ಪಾರ್ಕ್ ನಲ್ಲಿರುವ ಡಿಸಿಪಿ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ.
ಪ್ರಧಾನಮಂತ್ರಿಗಳ ಸ್ಥಾನವನ್ನು ಅಪಮಾನಿಸಿ ಸುಳ್ಳು ಸುದ್ದಿಯ ಬ್ಯಾನರ್ ಮೂಲಕ ತೇಜೋವಧೆ ಮಾಡಿದ್ದಾರೆ; ಈ ಮೂಲಕ ರಾಜ್ಯದಲ್ಲಿ ಅಶಾಂತಿ ಮತ್ತು ರಾಜಕೀಯ ದಂಗೆಗಳನ್ನು ಪ್ರಚೋದಿಸುತ್ತಿರುವ ಕರ್ನಾಟಕ ಪ್ರದೇಶ ಯುತ್ ಕಾಂಗ್ರೆಸ್ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಬೇಕೆಂದು ವಿನಂತಿಸಲಾಯಿತು.
ಕಾನೂನು ಪ್ರಕೋಷ್ಟದ ರಾಜ್ಯ ಸಂಚಾಲಕ ವಸಂತ್ ಕುಮಾರ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಮುನಿರಾಜ್ ಗೌಡ, ಪಕ್ಷದ ಪ್ರಮುಖರು ಇದ್ದರು.


