ತಮಿಳುನಾಡು ಅಣ್ಣಾ ವಿಶ್ವವಿದ್ಯಾಲಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ವತಃ ಚಾಟಿ ಬೀಸಿಕೊಂಡು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಅಣ್ಣಾಮಲೈ ನಡೆಯನ್ನು ಬೆಂಬಲಿಸಿದರೆ ಮತ್ತೆ ಕೆಲವರು ಇದೊಂದು ಅತಿರೇಕದ ನಡೆ ಎಂದು ಟೀಕಿಸಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಅಣ್ಣಾಮಲೈ ಬೆಂಬಲಕ್ಕೆ ಧಾವಿಸಿದ್ದು, “ಇದು ದೈವಶ್ರದ್ಧೆ, ಆಚಾರ ವಿಚಾರಗಳು ನಂಬಿಕೆಯನ್ನು ಆಧರಿಸಿದೆ.”ಸಂತ್ರಸ್ತ ವಿದ್ಯಾರ್ಥಿನಿಯ ಪರವಾಗಿ ಧ್ವನಿ ಎತ್ತಿರುವ ಅಣ್ಣಾಮಲೈ ಅವರ ಬೆಂಬಲಕ್ಕೆ ನಾವೆಲ್ಲಾ ಗಟ್ಟಿಯಾಗಿ ನಿಂತಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.
“ದೈವಶ್ರದ್ಧೆ, ಆಚಾರ ವಿಚಾರಗಳು ನಂಬಿಕೆಯನ್ನು ಆಧರಿಸಿದ್ದು, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾದ ಅಣ್ಣಾಮಲೈ ಅವರು ತಮ್ಮ ನಂಬಿಕೆಯನ್ನು ಆಧರಿಸಿ ದೈವ ಶ್ರದ್ಧೆಯನ್ನು ಪ್ರದರ್ಶಿಸುವ ಮೂಲಕ ತಮಿಳುನಾಡಿನ ಅಣ್ಣಾ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ ಘಟನೆಯ ವಿರುದ್ಧ ಹೋರಾಟಕ್ಕಿಳಿದು ‘ದಾಷ್ಟ್ಯತನದಿಂದ ವರ್ತಿಸುತ್ತಿರುವ’ ಡಿಎಂಕೆ ಸರ್ಕಾರವು ಆರೋಪಿತ ದುಷ್ಕರ್ಮಿಗಳ ವಿರುದ್ಧ ಕಾನೂನಿನ ಚಾಟಿ ಬೀಸದ ಧೋರಣೆಯನ್ನು ಪ್ರತಿಭಟನಾ ಸೂಚಕವಾಗಿ ದೈವಶ್ರದ್ಧೆಯ ಚಾಟಿ ಏಟು ಬಾರಿಸಿಕೊಂಡು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ” ಎಂದಿದ್ದಾರೆ.
“ಈ ಪ್ರತಿಭಟನೆಯನ್ನು ಕೆಲವು ವಿಕೃತಿಗಳು ವಿಡಂಬನೆ ಮಾಡುತ್ತಿವೆ, ಸ್ತ್ರೀ ಕುಲದ ರಕ್ಷಣೆಗಾಗಿ, ಸಂತ್ರಸ್ತ ವಿದ್ಯಾರ್ಥಿನಿಗೆ ನ್ಯಾಯ ದೊರಕಿಸಿಕೊಡಲು ವಿನೂತನ ರೀತಿಯಲ್ಲಿ ಪ್ರತಿಭಟಿಸಿದ ಕ್ರಮವನ್ನು ನಾವೆಲ್ಲರೂ ಬೆಂಬಲಿಸಬೇಕಿದೆ. ಈ ಸಂಬಂಧ ವಿಕೃತಿ ಮೆರೆಯುವವರ ಹೇಳಿಕೆ ಹಾಗೂ ವರ್ತನೆಯನ್ನು ಖಂಡಿಸಬೇಕಿದೆ” ಎಂದು ಹೇಳಿದ್ದಾರೆ.
“ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೆ ಪಾದರಕ್ಷೆಗಳನ್ನು ತೊಡುವುದಿಲ್ಲ ಎಂದು ಭೀಷ್ಮ ಪ್ರತಿಜ್ಞೆ ತೊಟ್ಟಿರುವ ಕೆ.ಅಣ್ಣಾಮಲೈ ಅವರ ಶಪಥದ ಹೋರಾಟ ಗೆಲುವಿನ ಗುರಿ ಮುಟ್ಟಲಿ ಎಂದು ಹಾರೈಸೋಣ. ತಮಿಳುನಾಡಿನ ಮಹಿಳಾ ಪೀಡಕ ಡಿಎಂಕೆ ಸರ್ಕಾರದ ವಿರುದ್ಧ ಆರಂಭವಾಗಿರುವ ದಿಟ್ಟ ಹೋರಾಟ ಬಿಜೆಪಿಯ ಬದ್ಧತೆ ಏನೆಂಬುದನ್ನು ಸಾಕ್ಷೀಕರಿಸಿದೆ.” ಎಂದಿದ್ದಾರೆ.