ಅದೃಷ್ಟ ಒಲಿದು ಬಂದಾಗ ಡಿ ಕೆ ಶಿವಕುಮಾರ್ ಸಿಎಂ ಆಗುತ್ತಾರೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭದ್ರವಾಗಿದೆ ಎಂದು ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಅಭಿಪ್ರಾಯಪಟ್ಟರು.
ಮೈಸೂರಿನಲ್ಲಿ ಶನಿವಾರ ಮಾತನಾಡಿದ ಅವರು, “ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಇದ್ದಾರೆ. 138 ಸ್ಥಾನದಿಂದ ಕಾಂಗ್ರೆಸ್ ಸುಭ್ರದ್ರವಾಗಿದೆ” ಎಂದು ಹೇಳಿದರು.
ಜೆಡಿಎಸ್ನಿಂದ ಅಂತರ ಕಾಯ್ದುಕೊಂಡ ಪ್ರಶ್ನೆಗೆ ಉತ್ತರಿಸಿ, “ನನ್ನ ಕ್ಷೇತ್ರ ತುಂಬಾ ವಿಶಾಲವಾಗಿದೆ. ಚಾಮುಂಡೇಶ್ವರಿ ಕ್ಷೇತ್ರ ಸಮಸ್ಯೆಗಳ ಆಗರವಾಗಿದೆ. ಮಹಾನಗರ ಪಾಲಿಕೆಯ ಹಲವು ವಾರ್ಡುಗಳು ಸೇರಿದಂತೆ ರಿಂಗ್ ರಸ್ತೆ ಸುತ್ತಲಿನ ಪ್ರದೇಶಗಳು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸೇರಿವೆ. ಹಾಗಾಗಿ ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸಲು ಹೆಚ್ಚು ಆದ್ಯತೆ ನೀಡಿದ್ದೇನೆ” ಎಂದಷ್ಟೇ ಹೇಳಿದರು.
“ಬಜೆಟ್ನಲ್ಲಿ ಸಾಕಷ್ಟು ನಿರೀಕ್ಷೆಯಿದೆ. ಕಬಿನಿಯಿಂದ 180 ಎಂ.ಎಲ್.ಡಿ ನೀರು ತರಬೇಕು. ಇದಕ್ಕೆ ಬಜೆಟ್ ನಲ್ಲಿ ಹಣ ಕೇಳಿದ್ದೇವೆ. ನನ್ನ ಕ್ಷೇತ್ರದ ನೀರಿನ ಸಮಸ್ಯೆ, ಯುಜಿಡಿ ಸಮಸ್ಯೆ ಎಲ್ಲವನ್ನೂ ಸರಿ ಮಾಡಬೇಕು. ಪಟ್ಟಣ ಪಂಚಾಯತಿಗಳನ್ನು ಸೇರಿಸಿ ಗ್ರೇಟರ್ ಮೈಸೂರು ಮಾಡಿ ಅಂತ ಹೇಳಿದ್ದೇನೆ. ಬಜೆಟ್ನಲ್ಲಿ ಇದನ್ನು ಸೇರಿಸಿ ಅಂತ ಹೇಳಿದ್ದೇನೆ” ಎಂದರು.
ಮುಂಬರುವ ಜಿಲ್ಲಾ ತಾಲ್ಲೂಕು ಪಂಚಾಯಿತಿ ಚುನಾವಣೆ ವೇಳೆ ಜೆಡಿಎಸ್ ಪರ ಪ್ರಚಾರ ಕೈಗೊಳ್ಳುತ್ತೀರಾ? ಎಂಬ ಪ್ರಶ್ನೆಗೆ ಚುನಾವಣೆ ಘೋಷಣೆ ಆದಾಗ ನೋಡೋಣ’ ಎಂದು ಪ್ರತಿಕ್ರಿಯಿಸಿದರು.
“ಚಾಮುಂಡೇಶ್ವರಿ ಕ್ಷೇತ್ರದ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯನ್ನು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದೆ. ಎಲ್ಲ ಇಲಾಖೆ ಅಧಿಕಾರಿಗಳ ಸಭೆ ಮಾಡಿದ್ದೇನೆ. ರಾಜ್ಯ ಬಜೆಟ್ ಬರ್ತಿದೆ. ಯಾವೆಲ್ಲ ಕೆಲಸ ಆಗಬೇಕು, ಕುಡಿಯುವ ನೀರು, ನಗರಾಭಿವೃದ್ದಿ ಪ್ರಾಧಿಕಾರ ಸ್ಥಳೀಯ ಪಂಚಾಯತಿಗಳಿಗೆ ವರ್ಗಾವಣೆ ಆಗಿದೆ. ಆದರೆ ಸ್ಥಳೀಯ ಆಡಳಿತದಲ್ಲಿ ಹಣವಿಲ್ಲ. ಹೀಗಾಗಿ ಸಿಎಂ ಗಮನಕ್ಕೆ ಈ ವಿಚಾರ ತರುತ್ತೇನೆ” ಎಂದು ತಿಳಿಸಿದರು.