Homeಕರ್ನಾಟಕಪರಿಸರಸ್ನೇಹಿ ಇಂಧನ ಬಗ್ಗೆ ಸೂಕ್ತ ನೀತಿ ರೂಪಿಸಲಾಗುವುದು: ಸಚಿವ ಎಂ ಬಿ ಪಾಟೀಲ

ಪರಿಸರಸ್ನೇಹಿ ಇಂಧನ ಬಗ್ಗೆ ಸೂಕ್ತ ನೀತಿ ರೂಪಿಸಲಾಗುವುದು: ಸಚಿವ ಎಂ ಬಿ ಪಾಟೀಲ

ರಾಜ್ಯದಲ್ಲಿ ಪರಿಸರಸ್ನೇಹಿ ಇಂಧನ (ಗ್ರೀನ್ ಎನರ್ಜಿ) ಕ್ಷೇತ್ರದಲ್ಲಿ ಹೂಡಿಕೆ ಮತ್ತು ಉತ್ಪಾದನೆಗೆ ಯಥೇಚ್ಛ ಅವಕಾಶಗಳಿವೆ. ಇದನ್ನು ಬೃಹತ್ ಕೈಗಾರಿಕೆ ಇಲಾಖೆ ಮತ್ತು ಇಂಧನ ಇಲಾಖೆ ಎರಡೂ ಜತೆಗೂಡಿ ಸಾಧಿಸಬೇಕಾಗಿದೆ. ಈ ದೃಷ್ಟಿಯಿಂದ ಸೂಕ್ತ ನೀತಿಯನ್ನು ರೂಪಿಸಲಾಗುವುದು ಎಂದು ಕೈಗಾರಿಕೆ ಸಚಿವ ಎಂ ಬಿ ಪಾಟೀಲ ತಿಳಿಸಿದರು.

ಖನಿಜ ಭವನದಲ್ಲಿ ಆಯೋಜಿಸಿದ್ದ ಗ್ರೀನ್ ಎನರ್ಜಿ ಮತ್ತು ಕೋರ್ ಮ್ಯಾನುಫ್ಯಾಕ್ಚರಿಂಗ್ ವಲಯಗಳಿಗೆ ಸಂಬಂಧಪಟ್ಟ ಸರಕಾರದ ವಿಷನ್ ಗ್ರೂಪ್‌ಗಳ ಚೊಚ್ಚಲ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಇಂಧನ ಸಚಿವ ಕೆ ಜೆ ಜಾರ್ಜ್ ಜತೆ ಉದ್ಯಮಿಗಳು ಮತ್ತು ಆಸಕ್ತ ಹೂಡಿಕೆದಾರರ ಸಭೆಯನ್ನು ಸದ್ಯದಲ್ಲೇ ಏರ್ಪಡಿಸಲಾಗುವುದು” ಎಂದು ಹೇಳಿದರು.

“ಸಭೆಯಲ್ಲಿ ಪಾಲ್ಗೊಂಡಿದ್ದ ಪರಿಣತ ಉದ್ಯಮಿಗಳು ಗ್ರೀನ್ ಎನರ್ಜಿ ಕ್ಷೇತ್ರದಲ್ಲಿರುವ ಸಾಧ್ಯತೆ, ಅಗತ್ಯ, ಬೇಡಿಕೆ, ನೀತಿ ನಿರೂಪಣೆ, ರಿಯಾಯಿತಿ ಇತ್ಯಾದಿಗಳನ್ನು ಕುರಿತು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಈ ವಲಯವನ್ನು ಬೆಳೆಸಬೇಕೆಂಬುದು ಸರಕಾರದ ಮುಕ್ತ ನಿಲುವಾಗಿದೆ. ಮುಂದಿನ ಹೆಜ್ಜೆಯಾಗಿ ಇಂಧನ ಸಚಿವರ ಜತೆ ಮಾತುಕತೆ ನಡೆಸಲಾಗುವುದು. ಏಕೆಂದರೆ, ಇಂಧನ ಇಲಾಖೆ ಇದರಲ್ಲಿ ಪ್ರಮುಖ ಪಾಲು ಹೊಂದಿದೆ” ಎಂದರು.

ಅವಾಡಾ ಕಂಪನಿಯ ಸಿಇಒ ಕಿಶೋರ್ ನಾಯರ್ ಮಾತನಾಡಿ, “ಗ್ರೀನ್ ಹೈಡ್ರೋಜನ್ ಉತ್ಪಾದನೆಗಾಗಿ ನಾವು ರಾಜ್ಯ ಸರಕಾರದ ಜತೆ 45 ಸಾವಿರ ಕೋಟಿ ರೂ. ಹೂಡಿಕೆಯ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಸರಕಾರವು ಸೂಕ್ತ ಪ್ರೋತ್ಸಾಹಕ ಭತ್ಯೆ ಮತ್ತು ನೀತಿ ಜಾರಿಗೆ ತಂದರೆ ನಾವು ಎಲೆಕ್ಟ್ರೋಲೈಟ್ ಮತ್ತು ಬ್ಯಾಟರಿ ಉತ್ಪಾದನೆಯ ಕಡೆಗೆ ಗಮನ ಹರಿಸಬಹುದು. ಜತೆಗೆ ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಆದ್ದರಿಂದ, ಪರಿಸರಸ್ನೇಹಿ ಮೆಥನಾಲ್ ಮತ್ತು ಪರಿಸರಸ್ನೇಹಿ ಜಲಜನಕ(ಗ್ರೀನ್ ಹೈಡ್ರೋಜನ್)ದ ಉತ್ಪಾದನೆಗೂ ಆದ್ಯತೆ ಕೊಡಬಹುದು. ರಾಜಾಸ್ಥಾನ ಮತ್ತು ಮಹಾರಾಷ್ಟ್ರ ಈಗಾಗಲೇ ಈ ಸಂಬಂಧ ನೀತಿಗಳನ್ನು ಜಾರಿಗೆ ತಂದಿವೆ” ಎಂದು ಹೇಳಿದರು.

ಇದಕ್ಕೆ ಸ್ಪಂದಿಸಿದ ಸಚಿವರು, “ಉದ್ಯಮಿಗಳು 5-6 ಮಿಲಿಯನ್ ಡಾಲರ್ ಹಣ ಮತ್ತು 5 ಗಿಗಾವ್ಯಾಟ್ ವಿದ್ಯುತ್ತಿನ ಅಗತ್ಯದ ಬಗ್ಗೆ ಗಮನ ಸೆಳೆದಿದ್ದಾರೆ. ಜೊತೆಗೆ, ಇದಕ್ಕೆ ಮಂಗಳೂರು ಬಂದರಿನ ಸುತ್ತಮುತ್ತಲಿನ 20 ಕಿ.ಮೀ. ಪ್ರದೇಶ ಸೂಕ್ತ ತಾಣವಾಗಿದೆ ಎಂದು ತಿಳಿಸಿದ್ದಾರೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿದೆ. ಇದನ್ನು ಈಡೇರಿಸಿದರೆ ಪರಿಸರಸ್ನೇಹಿ ಅಮೋನಿಯಾ ಮತ್ತು ಜಲಜನಕಗಳ ಉತ್ಪಾದನೆ ಸುಗಮವಾಗಲಿದೆ. ಈ ಬಗ್ಗೆ ಸರಕಾರವು ಸಕಾರಾತ್ಮಕ ಭಾವನೆ ಹೊಂದಿದೆ” ಎಂದು ತಿಳಿಸಿದರು.

ಸಿಮೆಂಟ್, ಉಕ್ಕು ವಲಯದತ್ತಲೂ ಗಮನ

ಕೋರ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ವಿಷನ್ ಗ್ರೂಪಿನ ಸಭೆಯನ್ನೂ ನಡೆಸಿದ ಸಚಿವರು, “ರಾಜ್ಯದಲ್ಲಿ ಉಕ್ಕು ಮತ್ತು ಸಿಮೆಂಟ್ ಉತ್ಪಾದನೆಗೆ ಇರುವ ಅವಕಾಶಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಜತೆಗೆ, ಈ ಸಂಬಂಧ ಸರಕಾರವು ಕೈಗೊಳ್ಳಬೇಕಾಗಿರುವ ನಾನಾ ಉಪಕ್ರಮಗಳ ಸ್ವರೂಪ ಹೇಗಿರಬೇಕೆಂದು ಉದ್ಯಮಿಗಳ ಸಲಹೆ ಪಡೆಯಲಾಗಿದೆ” ಎಂದರು.

ಗ್ರೀನ್ ಎನರ್ಜಿ ವಿಷನ್ ಗ್ರೂಪ್ ಸಭೆಯಲ್ಲಿ ರೆನ್ಯೂ ಪವರ್ ಅಧ್ಯಕ್ಷ ವಿವೇಕ್ ಸಿಂಘ್ಲಾ, ಎಮ್ವೀ ಸೋಲಾರ್‌ ಸ್ಥಾಪಕ ಡಿ ವಿ ಮಂಜುನಾಥ, ಆ್ಯಮ್-ಪ್ಲಸ್ ಸಿಇಒ ಶರದ್ ಪುಂಗಾಲಿಯಾ ಅವರು ವರ್ಚುಲ್ ರೂಪದಲ್ಲಿ ಭಾಗವಹಿಸಿದ್ದರು. ಕೋರ್ ಮ್ಯಾನುಫ್ಯಾಕ್ಚರಿಂಗ್ ವಿಷನ್ ಗ್ರೂಪ್ ಸಭೆಯಲ್ಲಿ ಬಲ್ದೋಟ ಸಮೂಹದ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಕುಮಾರ್, ಸಂಡೂರು ಮ್ಯಾಂಗನೀಸ್ ಅಂಡ್ ಐರನ್ ಓರ್ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಬಹಿರಜಿ ಘೋರ್ಷಡೆ, ಅಲ್ಟ್ರಾ ಟೆಕ್ ಮುಖ್ಯಸ್ಥ ರಾಜನಾರಾಯಣನ್ ಉಪಸ್ಥಿತರಿದ್ದರು. ಜಿಂದಾಲ್ ಸ್ಟೀಲ್ ವರ್ಕ್ಸ್ ಸಿಇಒ ಜಯಂತ್ ಆಚಾರ್ಯ ವರ್ಚುಯಲ್ ರೂಪದಲ್ಲಿ ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments