ಕಾಂಗ್ರೆಸ್ ಸರ್ಕಾರವು ನೂತನ ಕ್ರಿಮಿನಲ್ ಕಾನೂನುಗಳಿಗೆ ತಿದ್ದುಪಡಿ ತರುವ ಮೂಲಕ ಸಾರ್ವಜನಿಕರ ದಿಕ್ಕು ತಪ್ಪಿಸಲು ಹೊರಟಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ.
ಎಕ್ಸ್ ತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, “ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಪೆಟ್ರೋಲ್, ಡೀಸೆಲ್, ಹಾಲಿನ ಬೆಲೆ ಏರಿಕೆ, ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟ ಇವುಗಳಿಂದ ವಿಧಾನಸಭಾ ಅಧಿವೇಶನದಲ್ಲಿ ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ ಎನ್ನುವ ಭಯದಿಂದ ಈ ಹೊಸ ನಾಟಕ ಶುರು ಮಾಡಿದೆ” ಎಂದು ಕಿಡಿಕಾರಿದ್ದಾರೆ.
“ಅಸಮರ್ಥ ಸಿಎಂ ಸಿದ್ದರಾಮಯ್ಯ ಅವರೇ, ಮುಂಬರುವ ಅಧಿವೇಶನದಲ್ಲಿ ನಿಮ್ಮ ಸರ್ಕಾರದ ಎಲ್ಲ ವೈಫಲ್ಯಗಳನ್ನ, ಭ್ರಷ್ಟಾಚಾರಗಳನ್ನ, ಎಡವಟ್ಟುಗಳನ್ನ, ಜನವಿರೋಧಿ ನೀತಿಗಳನ್ನ ಸದನದಲ್ಲಿ ಪ್ರಸ್ತಾಪ ಮಾಡಲಿದ್ದೇವೆ. ನಿಮ್ಮ ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ಜನ ಸಾಮಾನ್ಯರ ಪರವಾಗಿ ಸದನದಲ್ಲಿ ದನಿ ಎತ್ತುತ್ತೇವೆ” ಎಂದಿದ್ದಾರೆ.
“ಸದನದ ದಿಕ್ಕು ತಪ್ಪಿಸುವ ನಿಮ್ಮ ಯಾವ ಕುತಂತ್ರಗಳು ನಡೆಯುವುದಿಲ್ಲ. ಸದನದಲ್ಲಿ ಉತ್ತರಿಸಲು ತಾಯರಾಗಿ” ಎಂದು ಸವಾಲು ಹಾಕಿದ್ದಾರೆ.
ಭ್ರಷ್ಟ ಕಾಂಗ್ರೆಸ್ ಸರ್ಕಾರದ ಹೊಸ ಗಾದೆ!
“ಮಳ್ಳ ಮಳ್ಳ ಮುಡಾ ಹಗರಣದಲ್ಲಿ ನಿನ್ನ ಪಾಲೆಷ್ಟು ಅಂದರೆ, ತನ್ನ ಪತ್ನಿಯ ತವರು ಮನೆಯಿಂದ ಬಂದ ಭೂಮಿಯಷ್ಟು ಅಂದನಂತೆ. ಮಳ್ಳ ಸಿದ್ದರಾಮಯ್ಯ ನವರೇ, ಮುಡಾದಲ್ಲಿ 50: 50ರ ಅನುಪಾತದಲ್ಲಿ ಹಂಚಿಕೆಯಾಗಿರುವ ನಿವೇಶನವನ್ನು ರದ್ದುಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೈಸೂರಿನ ಜಿಲ್ಲಾಧಿಕಾರಿಗಳು ಕಳೆದ ಒಂದು ವರ್ಷದಿಂದ ನಿರಂತರವಾಗಿ 15 ಬಾರಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರೂ ನಿಮ್ಮ ‘ಆಪ್ತ’ ಸಚಿವರು ಏಕೆ ಕ್ರಮ ಕೈಗೊಳ್ಳಲಿಲ್ಲ” ಎಂದು ಪ್ರಶ್ನಿಸಿದ್ದಾರೆ.
“ಅಸಲಿಗೆ ಸಚಿವ ಸಂಪುಟದ ಅನುಮೋದನೆ ಇಲ್ಲದೆ 50:50ರ ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಲು ಅನುಮತಿ ನೀಡಿದ್ದಾದರೂ ಯಾರು? ಯಾರಿಗೆ ಲಾಭ ಮಾಡಿಕೊಡಲು ಈ ಕ್ರಮ? ಈ ಹಿಂದೆ ಭೂಸ್ವಾಧೀನವಾಗಿರುವ ಪ್ರಕರಣಗಳಲ್ಲಿ ಈಗ ಪರಿಹಾರ ವಿತರಣೆ, ಬದಲಿ ನಿವೇಶನ, ತುಂಡು ಜಾಗ ಮಂಜೂರತಿಯನ್ನು ಪ್ರಾಧಿಕಾರದ ಅನುಮತಿ ಪಡೆಯದೆ ಮಾಡಿರುವುದು ನಿಯಮ ಲೋಪವಷ್ಟೇ ಅಲ್ಲದೆ ಪ್ರಾಧಿಕಾರಕ್ಕೆ ಅಪಾರ ಹಣಕಾಸಿನ ನಷ್ಟ ಆಗಿದೆ. ಇದಕ್ಕೆ ಯಾರು ಹೊಣೆ” ಎಂದು ಕೇಳಿದ್ದಾರೆ.
“ಕೆಸರೆ ಗ್ರಾಮದಲ್ಲಿ ತಮ್ಮ ಧರ್ಮ ಪತ್ನಿ ಅವರಿಗೆ ಸೇರಿದ್ದ 3 ಎಕರೆ 16 ಗುಂಟೆ ಜಮೀನಿನ ಬದಲಾಗಿ ಮೈಸೂರು ನಗರದ ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ 38,824 ಚದರ ಅಡಿ ವಿಸ್ತೀರ್ಣದ ದುಬಾರಿ ಬೆಲೆ ಬಾಳುವ 14 ನಿವೇಶನಗಳನ್ನು ತಮ್ಮ ಪತ್ನಿ ಹೆಸರಿಗೆ ಮಂಜೂರು ಮಾಡಿಸಿಕೊಂಡಿದ್ದೀರಲ್ಲ ಇದು ಭ್ರಷ್ಟಾಚಾರವಲ್ಲದೆ ಮತ್ತೇನು ಸಿದ್ದರಾಮಯ್ಯನವರೇ? ಸಮಾಜವಾದಿ ಮುಖವಾಡ ಹಾಕಿಕೊಂಡಿರುವ ಕಡುಭ್ರಷ್ಟ ಮಜಾವಾದಿ ಅಂದರೆ ಅದು ಸಿಎಂ ಸಿದ್ದರಾಮಯ್ಯ. ಕರ್ನಾಟಕ ಕಂಡ ಅತ್ಯಂತ ಭ್ರಷ್ಟ, ಲೂಟಿಕೋರ ಮುಖ್ಯಮಂತ್ರಿ ಅಂದರೆ ಅದು ಸಿದ್ದರಾಮಯ್ಯ” ಎಂದು ಟೀಕಿಸಿದ್ದಾರೆ.
ನೂತನ ಕ್ರಿಮಿನಲ್ ಕಾನೂನು, ಕಾನೂನಿಗೆ ತಿದ್ದುಪಡಿ, ಸಾರ್ವಜನಿಕರ ದಿಕ್ಕು ತಪ್ಪಿಸುವ ತಂತ್ರ, ಆರ್ ಅಶೋಕ್, New Criminal Law, Amendment to Law, Strategy to Mislead Public, R Ashok,