ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಗೆಳತಿ ಪವಿತ್ರಾ ಗೌಡ ಸೇರಿ ಇತರೆ 5 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ.
ಶುಕ್ರವಾರ ಮಧ್ಯಾಹ್ನ ಕರ್ನಾಟಕ ಹೈಕೋರ್ಟ್ 7 ಮಂದಿಗೆ ಜಾಮೀನು ನೀಡಿದ್ದು, ಜಾಮೀನು ಸಿಕ್ಕರೂ ಕೂಡಲೇ ಬಿಡುಗಡೆಯಾಗಲ್ಲ. ಸೋಮವಾರ ಬಳಿಕ ಜೈಲಿನಿಂದ ಹೊರಬರುವ ಸಾಧ್ಯತೆಗಳಿವೆ.
ಆದೇಶದ ಪ್ರತಿ ವಕೀಲರಿಗೆ ಸಿಗಬೇಕಿದೆ. ಜತೆಗೆ ಕೋರ್ಟ್ ಯಾವೆಲ್ಲಾ ಷರತ್ತುಗಳನ್ನು ವಿಧಿಸಿದೆ ಎಂಬುದು ತಿಳಿಯಬೇಕು. ಬಾಂಡ್ ಪೇಪರ್ ಸೇರಿದಂತೆ ಇತರೆ ಷರತ್ತುಗಳು, ಭದ್ರತೆ ನೀಡುವವರ ದಾಖಲೆ ಪತ್ರ ಸಿದ್ಧವಾಗಬೇಕು.
ಶನಿವಾರ ಹಾಗೂ ಭಾನುವಾರ ಇರುವುದರಿಂದ ಭದ್ರತೆ (ಶ್ಯೂರಿಟಿ/ ಜಾಮೀನುದಾರರು) ವ್ಯಕ್ತಿಗಳನ್ನು ನೀಡಲು, ಕಾಗದ ಪತ್ರ ಸಿದ್ಧಪಡಿಸಲು ಹಾಗೂ ಜೈಲು ಅಧಿಕಾರಿಗಳಿಗೆ ಅಗತ್ಯ ದಾಖಲೆ ಸಲ್ಲಿಸಲು ಸಮಸ್ಯೆಯಾಗುತ್ತದೆ. ಈ ಹಿನ್ನೆಲೆ ಸೋಮವಾರವೇ ಬಿಡುಗಡೆಯಾಗುತ್ತದೆ ಎಂದು ಆರೋಪಿಗಳ ಪರ ವಕೀಲರು ತಿಳಿಸಿದ್ದಾರೆ.
ಜಾಮೀನು ಪಡೆದಿರುವ 7 ಆರೋಪಿಗಳ ಪೈಕಿ ನಟ ದರ್ಶನ್ ಅವರು ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪವಿತ್ರಾ ಗೌಡ ಅವರು ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ (ಪರಪ್ಪನ ಅಗ್ರಹಾರ) ಇದ್ದಾರೆ. ಉಳಿದ 5 ಮಂದಿ ರಾಜ್ಯದ ವಿವಿಧ ಜೈಲಿನಲ್ಲಿದ್ದಾರೆ. ಅವರೆಲ್ಲರಿಗೂ ಕೋರ್ಟ್ ಆದೇಶ ತಲುಪಿ, ಅಗತ್ಯ ದಾಖಲೆಗಳನ್ನು ಒದಗಿಸಿ ಬಿಡುಗಡೆಯಾಗಬೇಕಿದೆ.