ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕಳೆದ ತಿಂಗಳು ಬಂಧನಕ್ಕೆ ಒಳಗಾಗಿದ್ದ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸೂರಜ್ ರೇವಣ್ಣಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಬಿಡುಗಡೆಯಾಗಲಿದ್ದಾರೆ.
ಜೂನ್ ಎರಡನೇ ವಾರದಲ್ಲಿ ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿತ್ತು. ಜೆಡಿಎಸ್ ಕಾರ್ಯಕರ್ತನೊಬ್ಬ “ಸೂರಜ್ ರೇವಣ್ಣ ಅವರು ತಮ್ಮ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ, ಕಾನೂನು ಕ್ರಮ ಕೈಗೊಳ್ಳಿ” ಎಂದು ಹೊಳೆನರಸೀಪುರ ಪೊಲೀಸರಿಗೆ ದೂರು ನೀಡಿದ್ದರು.
ವಿಚಾರಣೆ ಕೈಗೊಂಡ ಪೊಲೀಸರು ಜೂನ್ 23 ರಂದು ಸೂರಜ್ ರೇವಣ್ಣನನ್ನು ಬಂಧಿಸಿದ್ದರು. ನಂತರ ಸೂರಜ್ನನ್ನು ನ್ಯಾಯಾಲಯ ಬಂಧನಕ್ಕೆ ಒಳಗಾಗಿದ್ದರು. ನಂತರ ಸೂರಜ್ ರೇವಣ್ಣ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರು ಸೋಮವಾರ ವಿಚಾರಣೆ ನಡೆಸಿ, ಸೂರಜ್ ರೇವಣ್ಣ ಪರ ವಕೀಲರು ಹಾಗೂ ಸರ್ಕಾರದ ವಿಶೇಷ ಅಭಿಯೋಜಕರ ವಾದ ಆಲಿಸಿ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.
ಅರ್ಜಿದಾರರು ತನಿಖಾಧಿಕಾರಿಯ ಮುಂದೆ ಕರೆದಾಗ ಕಡ್ಡಾಯವಾಗಿ ಹಾಜರಾಗಬೇಕು. ತಿಂಗಳ ಪ್ರತಿ 2ನೇ ಭಾನುವಾರ ತನಿಖೆಗೆ ತನಿಖಾಧಿಕಾರಿಗಳ ಮುಂದೆ ಬರಬೇಕು. ಯಾವುದೇ ಕಾರಣಕ್ಕೂ ಸಂತ್ರಸ್ತರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಿಸಲೇಬಾರದು ಎನ್ನುವ ಷರತ್ತು ಸೂರಜ್ಗೆ ವಿಧಿಸಲಾಗಿದೆ.
ಈಗಾಗಲೇ ಲೈಂಗಿಕದೌರ್ಜನ್ಯದ ಪ್ರಕರಣದಲ್ಲಿ ಜೈಲಿನಲ್ಲಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕೂಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಅವರ ಪ್ರಕರಣ ಬಾಕಿಯಿದೆ. ಇದೇ ಪ್ರಕರಣದಲ್ಲಿ ಅವರ ತಂದೆ, ಮಾಜಿ ಸಚಿವ ಎಚ್.ಡಿ. ರೇವಣ್ಣ ಜಾಮೀನಿನಲ್ಲಿದ್ದಾರೆ. ತಾಯಿ ಭವಾನಿ ರೇವಣ್ಣ ಅವರ ಮೇಲೂ ಪ್ರಕರಣವಿದ್ದು, ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ್ದಾರೆ.