ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 2018ರಲ್ಲಿ ಕರ್ನಾಟಕ ರಾಜ್ಯದಾದ್ಯಂತ ನೇರ ಪಾವತಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಸೇವಾ ನೌಕರರನ್ನು ಖಾಯಂಗೊಳಿಸಬೇಕೆಂದು ಆದೇಶವನ್ನು ಹೊರಡಿಸಿದ್ದು ಅದರಂತೆ 2023-2024 ನೇ ಸಾಲಿನಲ್ಲಿ ಜಿಲ್ಲಾದ್ಯಂತ 70 ಮಂದಿ ನೇರ ಪಾವತಿ ಅಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದವರಿಗೆ ಖಾಯಂ ಆದೇಶವಾಗಿದೆ.
ಅಲ್ಲದೇ ಈಗ ಮತ್ತೆ ಸಿದ್ಧರಾಮಯ್ಯನವರ ಸರ್ಕಾರವು 2024 – 25 ರ ಅವದಿಯಲ್ಲಿ ಜಿಲ್ಲೆಯಲ್ಲಿನ 98 ಮಂದಿ ನೇರ ಪಾವತಿ ಅಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದವರಿಗೆ ಖಾಯಂ ಆದೇಶ ಹೊರಡಿಸಲಾಗಿದೆ.
“ಸದರೀ ಆದೇಶದಲ್ಲಿ ಕೋಲಾರ ನಗರ ಸಭೆಯಲ್ಲೇ 44 ಮಂದಿಗೆ ಖಾಯಂ ಆದೇಶವಾಗಿರುವುದು ಪೌರ ನೌಕಕರರ ಸಮೂಹಕ್ಕೆ ಅತ್ಯಂತ ಸಂತಸ ತಂದಿದೆ” ಎಂದು ಪೌರ ಸೇವಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ. ಎಸ್. ಮಂಜುನಾಥ್ ತಿಳಿಸಿದ್ದಾರೆ.
ನೇರ ಪಾವತಿ ಅಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದವರಿಗೆ ಖಾಯಂ ಆದೇಶದ ಹಿನ್ನೆಲೆಯಲ್ಲಿ ನೌಕರ ವರ್ಗಕ್ಕೆ ಬಾಡೂಟ ಏರ್ಪಡಿಸಲಾಗಿತ್ತು.
ನಗರ ಸಭೆ ಆವರಣದಲ್ಲಿ ವ್ಯವಸ್ಥೆಗೊಳಿಸಿದ್ದ ಬಾಡೂಟದ ಪಾಲ್ಗೊಂಡು ಮಾತನಾಡಿದ ಸಿ ಎಸ್ ಮಂಜುನಾಥ್, “ಸಿದ್ಧರಾಮಯ್ಯ ಸರ್ಕಾರವು ಪೌರ ಸೇವಾ ನೌಕಕರರ ಬೇಡಿಕೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆಯುವ ಮೂಲಕ ನಮ್ಮ ಬಹು ದಿನಗಳ ಬೇಡಿಕೆ ಈಡೇರಿಸಿದ್ದಾರೆ” ಎಂದರು.
“ಈ ಸಂದರ್ಭದಲ್ಲಿ ಪೌರ ಸೇವಾ ನೌಕರ ವರ್ಗವು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತದೆ. ಈ ನಿಟ್ಟಿನಲ್ಲಿ ನಮ್ಮೊಂದಿಗೆ ಸದಾ ಕಾಲ ಇರುವುದಾಗಿ ಭರವಸೆ ನೀಡಿರುವ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಎಂ ಎಲ್ ಸಿ ಅನಿಲ್ ಕುಮಾರ್ ಹಾಗೂ ಜಿಲ್ಲಾಡಳಿತದ ಅಧಿಕಾರಿ ವರ್ಗಕ್ಕೆ ಅಭಿನಂದನೆ ಸಲ್ಲಿಸುವೆ” ಎಂದು ಹೇಳಿದರು.
ವರದಿ: ಸಾಯಿನಾಥ್ ದರ್ಗಾ