ಕುಡಿದ ಮತ್ತಿನಲ್ಲಿ ಗೆಳೆಯರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕೆಂಗೇರಿಯ ರಾಜಕುಮಾರ್ ಕೊಲೆಯಾದವರು,ಕೃತ್ಯ ನಡೆಸಿ ಬೇರೊಬ್ಬ ದುಷ್ಕರ್ಮಿಯ ನೆಪಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಮಾದೇಶ್ ನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಕ್ಯಾಬ್ ಚಾಲಕರಾಗಿದ್ದ ಆರೋಪಿ ಮಾದೇಶ್ ಹಾಗೂ ಕೊಲೆಯಾದ ರಾಜಕುಮಾರ್ ಸ್ನೇಹಿತರಾಗಿದ್ದು, ಕಳೆದ ನ.5ರಂದು ಮದ್ಯದ ಪಾರ್ಟಿ ಮಾಡಲು ಬಾರ್ ನಲ್ಲಿ ಮದ್ಯ ಖರೀದಿಸಿ ಕೆಂಗೇರಿಯ ನಿರ್ಜನ ಪ್ರದೇಶಕ್ಕೆ ತೆರಳಿ ಮದ್ಯ ಸೇವನೆ ಮಾಡಿದ್ದರು.
ಮದ್ಯದ ಅಮಲಿನಲ್ಲಿದ್ದ ಇವರಿಬ್ಬರ ನಡುವೆ ಶುರುವಾದ ಜಗಳದಲ್ಲಿ ಮಾದೇಶನ ಕುಟುಂಬ ಹಾಗೂ ಮಕ್ಕಳ ಬಗ್ಗೆ ರಾಜಕುಮಾರ್ ನಿಂದಿಸಿದ್ದ. ಈ ವೇಳೆ ಕೋಪಗೊಂಡ ಮಾದೇಶ ತನ್ನ ಕಾರ್ ನಲ್ಲಿದ್ದ ಚಾಕುವಿನಿಂದ ಎದೆ ಭಾಗಕ್ಕೆ ಇರಿದಿದ್ದ.
ಚಾಕುವಿನಿಂದ ಚುಚ್ಚುತ್ತಿದ್ದಂತೆ ಗಾಬರಿಗೊಂಡು ತಾನೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಬಳಿಕ ರಾಜ್ ಕುಮಾರ್ ಸಂಬಂಧಿಕರಿಗೆ ಕರೆ ಮಾಡಿ ಯಾರೋ ಅಪರಿಚಿತರು ಕೃತ್ಯ ಎಸಗಿದ್ದಾಗಿ ಹೇಳಿ ನಂಬಿಸಿ ಇಡೀ ಪರಿಸ್ಥಿತಿಯನ್ನು ನಿಭಾಯಿಸಿದ್ದಾನೆ.
ಕೊನೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ರಾಜ್ ಕುಮಾರ್ ಮೃತಪಟ್ಟಿದ್ದು ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮಾದೇಶ ಪರಾರಿಯಾಗಿದ್ದು ಕೊಲೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ವೇಳೆ ಅಸಲಿ ಸಂಗತಿ ಬಯಲಾಗಿದೆ. ನಾಪತ್ತೆಯಾಗಿದ್ದ ಮಾದೇಶನ ಬಂಧಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.