ಪೊಲೀಸ್ ಕಚೇರಿಯಲ್ಲಿ ಮಹಿಳೆ ಜೊತೆ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ರಾಮಚಂದ್ರಪ್ಪಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಮಧುಗಿರಿ ಜೆಎಂಎಫ್ಸಿ ಕೋರ್ಟ್ ಶನಿವಾರ ಆದೇಶ ಹೊರಡಿಸಿದೆ.
ಲೈಂಗಿಕ ದೌರ್ಜನ್ಯದ ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ ನಂತರ ಸೇವೆಯಿಂದ ಅಮಾನತು ಮಾಡಲಾಗಿತ್ತು. ನಂತರ ಮಧುಗಿರಿ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದರು.
ಶುಕ್ರವಾರ ರಾತ್ರಿ ಬಂಧಿಸಿದ್ದ ಪೊಲೀಸರು ಶನಿವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ನ್ಯಾಯಾಂಗ ಬಂಧನ ಆದೇಶದ ನಂತರ ತಾಲ್ಲೂಕು ಉಪ ಕಾರಾಗೃಹಕ್ಕೆ ಕಳುಹಿಸಲಾಯಿತು.
ಜಿಲ್ಲೆಯ ಮಧುಗಿರಿ ಉಪವಿಭಾಗ ಡಿವೈಎಸ್ ಪಿ ಕಚೇರಿಗೆ ಪಾವಗಡ ಮೂಲದ ಮಹಿಳೆಯೊಬ್ಬರು ತಮ್ಮ ಜಮೀನಿನ ವ್ಯಾಜ್ಯ ವಿಚಾರಕ್ಕೆ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪಗೆ ದೂರು ನೀಡಲು ಬಂದಿದ್ದರು. ಈ ವೇಳೆ ಡಿವೈಎಸ್ಪಿ ಆಕೆಯನ್ನು ಪುಸಲಾಯಿಸಿ ಕಚೇರಿಯಲ್ಲಿರುವ ಚೇಂಬರ್ಗೆ ಕರೆದೊಯ್ದು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಕೃತ್ಯ ಮೊಬೈಲ್ಯಲ್ಲಿ ಸೆರೆಯಾಗಿದ್ದು, ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡ ತುಮಕೂರು ಎಸ್ಪಿ ಅಶೋಕ್ ವೆಂಕಟ್ ರಿಪೋರ್ಟ್ ತರಿಸಿಕೊಂಡು ಮೇಲಾಧಿಕಾರಿಗಳಿಗೆ ಕಳಿಸಿದ್ದಾರೆ. ಕೂಡಲೇ ಸಂಜೆ ವೇಳೆಗೆ ಡಿಜಿ ಆ್ಯಂಡ್ ಐಜಿಪಿ ಅಲೋಕ್ ಮೋಹನ್ ರಾಸಲಿಲೆ ಪ್ರಕರಣ ಕಂಡು ಡಿವೈಎಸ್ಪಿ ರಾಮಚಂದ್ರಪ್ಪರನ್ನ ಅಮಾನತು ಮಾಡಿದ್ದರು.
ಅತ್ಯಾಚಾರ ಕೇಸ್ ಅಡಿ ದೂರು ದಾಖಲಿಸಿಕೊಂಡು ರಾಮಚಂದ್ರಪ್ಪರನ್ನ ಬಂಧಿಸಿ ಮಧುಗಿರಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಬಳಿಕ ಮೆಡಿಕಲ್ಗಾಗಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮೆಡಿಕಲ್ ಚೆಕಪ್ ಮಾಡಿಸಿದ್ದಾರೆ. ಇನ್ನೂ ಇದಾದ ಬಳಿಕ ಮಧುಗಿರಿ ಜೆಎಂಎಫ್ಸಿ ಕೋರ್ಟ್ ಜಡ್ಜ್ ಬಳಿ ಹಾಜರುಪಡಿಸಿದ್ದರು.